ADVERTISEMENT

'ಅವನೇ ಶ್ರೀಮನ್ನಾರಾಯಣ' ಟ್ರೇಲರ್‌ ನಾಳೆ: ಸದ್ದು ಮಾಡಿದ ರಕ್ಷಿತ್‌ ಭಿನ್ನ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 10:24 IST
Last Updated 27 ನವೆಂಬರ್ 2019, 10:24 IST
ಅವನೇ ಶ್ರೀಮನ್ನಾರಾಯಣ
ಅವನೇ ಶ್ರೀಮನ್ನಾರಾಯಣ    

ಸಚಿನ್‌ ರವಿ ನಿರ್ದೇಶನದ ರಕ್ಷಿತ್‌ ಶೆಟ್ಟಿ ನಾಯಕನಾಗಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಅದ್ದೂರಿ ಮೇಕಿಂಗ್‌ ಮತ್ತು ಕಥೆಯಿಂದ ಕುತೂಹಲ ಮೂಡಿಸಿದ್ದು, ಸಿನಿಮಾದ ಟ್ರೇಲರ್‌ ಬಿಡುಗಡೆ ಬಗ್ಗೆ ನಟ ರಕ್ಷಿತ್‌ ಮಾಡಿದ ಟ್ವೀಟ್‌ ಬಾರಿ ಸದ್ದು ಮಾಡುತ್ತಿದೆ.

ನವೆಂಬರ್‌ 28ರಂದು ಮಧ್ಯಾಹ್ನ 2.30ಕ್ಕೆ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳದಲ್ಲಿ ಟ್ರೇಲರ್‌ ಬಿಡುಗಡೆಯಾಗಲಿದೆ.ಡಿಸೆಂಬರ್‌ 27ರಂದು ಈ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಟ್ರೇಲರ್‌ ಕುರಿತು ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ರಕ್ಷಿತ್‌, ಇವತ್ತು ಈ ವಿಡಿಯೊದಲ್ಲಿ, ನಾಳೆ ನಾರಾಯಣನ ಕೈಯಲ್ಲಿ ಇರ್ತೀನಿ ಎಂದು ಬರೆದುಕೊಂಡಿದ್ದಾರೆ. ಇದನ್ನುಸಾಕಷ್ಟು ಮೆಚ್ಚಿಕೊಂಡಿದ್ದು, ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ADVERTISEMENT

‘ಕಿರಿಕ್‌ ಪಾರ್ಟಿ’ ರಕ್ಷಿತ್‌ ಶೆಟ್ಟಿ ನಟಿಸಿದ ಕೊನೆಯ ಸಿನಿಮಾ. ಮೂರು ವರ್ಷದ ಬಳಿಕ ತೆರೆ ಕಾಣುತ್ತಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿರುವುದು ಸಹಜ. ರಕ್ಷಿತ್‌ಗೆ ಶಾನ್ವಿ ಶ್ರೀವಾಸ್ತವ ಜೋಡಿಯಾಗಿದ್ದಾರೆ.

200 ದಿನಗಳ ಕಾಲ ಇದರ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತಿಹೆಚ್ಚು ದಿನಗಳವರೆಗೆ ಶೂಟಿಂಗ್‌ ಮಾಡಿದ ಹೆಗ್ಗಳಿಕೆ ಇದಕ್ಕೆ ಸಲ್ಲುತ್ತದೆ. ರಕ್ಷಿತ್‌ ಶೆಟ್ಟಿ ಅವರದು ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರ. ಆ ಪಾತ್ರದ ಹೆಸರು ನಾರಾಯಣ ಅಂತೆ. ನೋಡಲು ಆತ ಭ್ರಷ್ಟ ಅಧಿಕಾರಿ. ಆದರೆ, ಅತಿ ಬುದ್ಧಿವಂತ. ಜನರ ಸಮಸ್ಯೆಯನ್ನು ತನ್ನ ಬುದ್ಧಿವಂತಿಕೆಯಿಂದ ಹೇಗೆ ಪರಿಹರಿಸುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ.

ಚರಣ್‌ ರಾಜ್‌ ಮತ್ತು ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ. ಕರಂ ಚಾವ್ಲಾ ಅವರ ಛಾಯಾಗ್ರಹಣವಿದೆ. ಎಚ್‌.ಕೆ. ಪ್ರಕಾಶ್‌ ಮತ್ತು ಪುಷ್ಕರ್‌ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿ, ಬಾಲಾಜಿ ಮೋಹನ್‌ ತಾರಾಗಣದಲ್ಲಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.