ನಟ ಕಿಚ್ಚ ಸುದೀಪ್
‘ಮ್ಯಾಕ್ಸ್’ ಸಿನಿಮಾ ಬಳಿಕ ನಟ ಕಿಚ್ಚ ಸುದೀಪ್ ಹೊಸ ಪ್ರಾಜೆಕ್ಟ್ ಆರಂಭಿಸಿದ್ದಾರೆ. ‘ರಂಗಿತರಂಗ’, ‘ರಾಜರಥ’ ಹಾಗೂ ‘ವಿಕ್ರಾಂತ್ ರೋಣ’ ಸಿನಿಮಾ ನಿರ್ದೇಶಿಸಿದ್ದ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಬಿಲ್ಲ ರಂಗ ಬಾಷಾ–ಫಸ್ಟ್ ಬ್ಲಡ್’ ಶೂಟಿಂಗ್ ಬುಧವಾರ (ಏ.16) ಆರಂಭವಾಗಿದೆ.
ಈ ಸಿನಿಮಾಗಾಗಿ ಕಳೆದ ಆರೇಳು ವರ್ಷಗಳಿಂದ ಅನೂಪ್–ಸುದೀಪ್ ಕೆಲಸ ಮಾಡಿದ್ದಾರೆ. ಇದು ಇವರ ಕಾಂಬಿನೇಷನ್ನ ಎರಡನೇ ಸಿನಿಮಾ. ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ ಸುದೀಪ್. ಎರಡು ಭಾಗಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಸದ್ಯಕ್ಕೆ ಚಿತ್ರತಂಡ ಪಾತ್ರವರ್ಗದ ಬಗ್ಗೆ ರಹಸ್ಯ ಬಿಟ್ಟುಕೊಟ್ಟಿಲ್ಲ. ಕನ್ನಡ ಸೇರಿದಂತೆ ಇತರೆ ಭಾಷೆಗಳ ಪ್ರಮುಖ ಕಲಾವಿದರು ಚಿತ್ರದಲ್ಲಿ ಇರಲಿದ್ದಾರೆ ಎನ್ನಲಾಗಿದೆ.
2017ರಲ್ಲಿ ಈ ಸಿನಿಮಾದ ಕಥೆಯನ್ನು ಅನೂಪ್, ಸುದೀಪ್ಗೆ ಹೇಳಿದ್ದರು. 2018ರಲ್ಲಿ ಈ ಸಿನಿಮಾ ಘೋಷಣೆಯಾಗಿತ್ತು. ‘2021ರಲ್ಲಿ ನಾನು ‘ವಿಕ್ರಾಂತ್ ರೋಣ’ ಪೂರ್ಣಗೊಳಿಸಿದ್ದೆ. ಬಳಿಕ ಕೋವಿಡ್ ಸೋಂಕಿಗೆ ಒಳಗಾಗಿ ಹಲವು ತಿಂಗಳು ಚಿತ್ರೀಕರಣದಿಂದ ದೂರ ಉಳಿದಿದ್ದೆ. ನನ್ನ ಸಿನಿಮಾ ಪಯಣದ ಅತಿ ದೊಡ್ಡ ಚಿತ್ರ ಇದಾಗಿರಲಿದೆ. ಚಿತ್ರಕ್ಕಾಗಿ ಎಂಟು ಎಕರೆ ಜಾಗದಲ್ಲಿ ಬೃಹತ್ ಸ್ಟುಡಿಯೊ ನಿರ್ಮಾಣ ಮಾಡಿದ್ದೇವೆ. ಹೊಸ ಪ್ರಪಂಚವೇ ಅಲ್ಲಿ ಸೃಷ್ಟಿಯಾಗಿದೆ. 2209 ಎ.ಡಿ.ಯಲ್ಲಿ ನಡೆಯುವ ಕಥೆ ಇದಾಗಿದ್ದು, ಭವಿಷ್ಯದ ಪ್ರಪಂಚವನ್ನು ಅಲ್ಲಿ ನಿರ್ಮಾಣ ಮಾಡಿದ್ದೇವೆ. ಇದರಲ್ಲಿ ಒಂದೊಂದು ಪಾತ್ರ ಸಿದ್ಧವಾಗಲೂ ಸಮಯ ಬೇಕು’ ಎಂದು ಈ ಹಿಂದೆ ಸುದೀಪ್ ಹೇಳಿದ್ದರು.
‘ಬಿಲ್ಲ ರಂಗ ಬಾಷಾ’ ಸಿನಿಮಾವನ್ನು ಮಾಡಲು ಸಾಧ್ಯವೇ ಎನ್ನುವುದನ್ನು ನೋಡಲು ‘ವಿಕ್ರಾಂತ್ ರೋಣ’ ಸಿನಿಮಾವನ್ನು ಮಾಡಿದ್ದೆವು. ‘ಬಿಲ್ಲ ರಂಗ ಬಾಷಾ’ ಬಜೆಟ್, ಸ್ಕೇಲ್ಗೆ ಹತ್ತಿರವಾದ ಸಿನಿಮಾವಾಗಿ ‘ವಿಕ್ರಾಂತ್ ರೋಣ’ ಮಾಡಿದ್ದೆವು’ ಎಂದಿದ್ದ ಸುದೀಪ್, ಹೊಸ ಪ್ರಾಜೆಕ್ಟ್ನ ಸ್ಕೇಲ್ ತೆರೆದಿಟ್ಟಿದ್ದರು.
‘ಬಿಲ್ಲ ರಂಗ ಬಾಷಾ’ ಸಿನಿಮಾವನ್ನು ಪ್ರೈಂಶೋ ಎಂಟರ್ಟೈನ್ಮೆಂಟ್ ಪ್ರಸ್ತುತಪಡಿಸುತ್ತಿದ್ದು, ತೆಲುಗಿನ ಹಿಟ್ ಸಿನಿಮಾ ‘ಹನುಮಾನ್’ ನಿರ್ಮಾಣ ಮಾಡಿದ್ದ ಕೆ.ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.