ಲಾಕ್ಡೌನ್ ತೆರವಾದ ನಂತರ ಪ್ರತಿ ವ್ಯಕ್ತಿಯೂ ಅರೆಕ್ಷಣ ನಿಂತು ತಮ್ಮ ಬದುಕಿನ ಬಗ್ಗೆ ಅವಲೋಕನ ನಡೆಸಿಕೊಳ್ಳಬೇಕು ಎಂದಿದ್ದಾರೆ ಬಾಲಿವುಡ್ ಬಾದ್ಶಾ ಶಾರೂಖ್ ಖಾನ್.
ತಮ್ಮ ಅಭಿಮಾನಿಗಳ ಜೊತೆ ಟ್ವಿಟರ್ ಮೂಲಕ ಸಂವಾದ ನಡೆಸಿರುವ ಶಾರೂಖ್ ಅವರಿಗೆ, ಲಾಕ್ಡೌನ್ ನಂತರದ ಬದುಕು, ಜಗತ್ತು ಬೇರೆಯದೇ ಆಗಿರುತ್ತದೆಯೇ ಎಂಬ ಪ್ರಶ್ನೆ ಎದುರಾಗಿತ್ತು. ‘ನಾವೆಲ್ಲರೂ ಒಮ್ಮೆ ನಿಂತು ಆಲೋಚಿಸಬೇಕಾಗುತ್ತದೆ. ಬದುಕನ್ನು ರೀಸೆಟ್ ಮಾಡಬೇಕಾಗುತ್ತದೆ. ನಂತರ, ನಮ್ಮ ಜಗತ್ತಿನ ಚಟುವಟಿಕೆಗಳನ್ನು ಮುಂದೆ ತೆಗೆದುಕೊಂಡು ಹೋಗಬೇಕಾಗುತ್ತದೆ’ ಎಂದು ಶಾರೂಖ್ ಉತ್ತರಿಸಿದ್ದಾರೆ.
‘ಈ ದಿನಗಳಲ್ಲಿ ನೀವು ಏನನ್ನು ಕಲಿತಿರಿ’ ಎಂದು ಅಭಿಮಾನಿಯೊಬ್ಬರು ಮುಂದಿಟ್ಟ ಪ್ರಶ್ನೆಗೆ ಬಾದ್ಶಾ, ‘ನಾವೆಲ್ಲರೂ ತುಸು ನಿಧಾನವಾಗಿ ಸಾಗಬೇಕು ಎಂಬುದನ್ನು ಕಲಿತೆ’ ಎಂದು ಉತ್ತರಿಸಿದರು.
‘ನಿಮ್ಮ ಮುಂದಿನ ಸಿನಿಮಾ ನಿರ್ದೇಶಕರು ಯಾರು? ರಾಜ್ಕುಮಾರ್ ಹಿರಾನಿ ಅವರೋ ಸಿದ್ಧಾರ್ಥ್ ಆನಂದ್ ಅವರೋ’ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಕ್ಕೆ: ‘ಸಿನಿಮಾದ ಸ್ಕ್ರಿಪ್ಟನ್ನು ಕೂಡ ನಿಮಗೆ ಕಳುಹಿಸಲಾ?! ತಲೆ ಕೆಡಿಸಿಕೊಳ್ಳಬೇಡಿ, ನಾನು ಬಹಳಷ್ಟು ಸಿನಿಮಾಗಳನ್ನು ಮಾಡಲಿದ್ದೇನೆ’ ಎಂದು ತಮ್ಮ ಎಂದಿನ ಹಾಸ್ಯದ ಶೈಲಿಯಲ್ಲಿ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.