ನಟ ಕೃಷ್ಣ
Credit: X/@actor_Krishna
ಚೆನ್ನೈ: ಕೊಕೇನ್ ಖರೀದಿ ಮತ್ತು ಸೇವನೆ ಆರೋಪದಡಿ ತಮಿಳು ಮತ್ತು ತೆಲುಗು ನಟ ಶ್ರೀಕಾಂತ್ ಬಂಧನದ ಬೆನ್ನಲ್ಲೇ ಇಂದು (ಗುರುವಾರ) ಮತ್ತೊಬ್ಬ ನಟ ಕೃಷ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಪ್ರಕರಣದಡಿ ಬಂಧನದಲ್ಲಿರುವ ಎಐಎಡಿಎಂಕೆ ಪದಾಧಿಕಾರಿ ಟಿ.ಪ್ರಸಾದ್ ಅವರ ವಿಚಾರಣೆ ವೇಳೆ ಶ್ರೀಕಾಂತ್, ಕೃಷ್ಣ ಹೆಸರು ಪ್ರಸ್ತಾವವಾಗಿತ್ತು. ಆ ಬೆನ್ನಲ್ಲೇ ಅವರನ್ನು ಬಂಧಿಸಲಾಗಿದೆ.
ಶ್ರೀಕಾಂತ್ ಅವರಿಗೆ ಜುಲೈ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶ್ರೀಕಾಂತ್ ದೇಹದಲ್ಲಿ ಮಾದಕ ವಸ್ತುವಿನ ಅಂಶಗಳಿದ್ದುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಬಳಿಕ ಸೋಮವಾರ ರಾತ್ರಿ ಅವರನ್ನು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಶ್ರೀಕಾಂತ್ ಅವರನ್ನು ನುಂಗಂಬಕ್ಕಮ್ ಪೊಲೀಸ್ ಠಾಣೆಯಲ್ಲಿ ಸುಮಾರು ಎಂಟು ಗಂಟೆ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೇ 22ರಂದು ಚೆನ್ನೈನ ನೈಟ್ಕ್ಲಬ್ ಹೊರಗೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ನಗರದ ನುಂಗಂಬಾಕ್ಕಂ ಪೊಲೀಸರು ಎಐಎಡಿಎಂಕೆ ಪದಾಧಿಕಾರಿ ಪ್ರಸಾದ್ ಸೇರಿದಂತೆ ಎಂಟು ಮಂದಿ ಮದ್ಯದ ಅಮಲಿನಲ್ಲಿದ್ದವರನ್ನು ಬಂಧಿಸಿದ್ದರು.
ಪ್ರಸಾದ್ ಕಳೆದ ಮೂರು ವರ್ಷಗಳಿಂದ ಜಾನ್ ಎಂಬ ವಿದೇಶಿ ಪ್ರಜೆಯ ಸಹಾಯದೊಂದಿಗೆ ಬೆಂಗಳೂರು ಮೂಲದ ಪ್ರದೀಪ್ ಎಂಬ ವ್ಯಕ್ತಿಯಿಂದ ಕೊಕೇನ್ ಖರೀದಿಸುತ್ತಿದ್ದರು. ತನಿಖೆಯ ವೇಳೆ 11 ಗ್ರಾಂ ಕೊಕೇನ್ ಮತ್ತು ಹಣ ವರ್ಗಾವಣೆಯ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.