ADVERTISEMENT

ಡಿ.56ಗೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 7:34 IST
Last Updated 17 ಫೆಬ್ರುವರಿ 2022, 7:34 IST
ಕ್ರಾಂತಿ ಸಿನಿಮಾ ಪೋಸ್ಟರ್‌
ಕ್ರಾಂತಿ ಸಿನಿಮಾ ಪೋಸ್ಟರ್‌   

ವಿ.ಹರಿಕೃಷ್ಣ ನಿರ್ದೇಶನದ ‘ಕ್ರಾಂತಿ’ ಸಿನಿಮಾ ಬಳಿಕ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ದೊರಕಿದೆ. 2021ರಲ್ಲಿ ತೆರೆಕಂಡ ದರ್ಶನ್‌ ನಟನೆಯ ‘ರಾಬರ್ಟ್‌’ ಸಿನಿಮಾ ನಿರ್ದೇಶಿಸಿದ್ದ ತರುಣ್‌ ಕಿಶೋರ್‌ ಸುಧೀರ್‌ ಅವರೇ, ದರ್ಶನ್‌ ನಟನೆಯ 56ನೇ ಸಿನಿಮಾಗೆ(ಡಿ.56) ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ದರ್ಶನ್‌ ಜನ್ಮದಿನದಂದು ಹೊಸ ಚಿತ್ರದ ಥೀಮ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ‘ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ..’ ಎನ್ನುವ ವಾಕ್ಯದೊಂದಿಗೆ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾವನ್ನು ತೆರೆ ಮೇಲೆ ತರಲು ತರುಣ್‌ ಸಜ್ಜಾಗಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಅವರ ರಾಕ್‌ಲೈನ್‌ ಎಂಟರ್‌ಟೈನ್‌ಮೆಂಟ್‌ ಪ್ರೈ.ಲಿ. ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಚಿತ್ರದ ಶೀರ್ಷಿಕೆ, ತಾರಾಗಣ ಹಾಗೂಚಿತ್ರದ ಕುರಿತು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಚಿತ್ರತಂಡವು ತಿಳಿಸಿದೆ.

ಪ್ರಸ್ತುತ ತಮ್ಮ 55ನೇ ಸಿನಿಮಾ, ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ನಿರ್ಮಾಣದ ‘ಕ್ರಾಂತಿ’ಯ ಚಿತ್ರೀಕರಣದಲ್ಲಿ ದರ್ಶನ್‌ ಅವರು ತೊಡಗಿಸಿಕೊಂಡಿದ್ದಾರೆ. ದರ್ಶನ್‌ ಜನ್ಮದಿನದಂದೇ ಚಿತ್ರದ ಮೊದಲ ತುಣುಕನ್ನು ಚಿತ್ರತಂಡವು ಬಿಡುಗಡೆಗೊಳಿಸಿದೆ.

ADVERTISEMENT

ದರ್ಶನ್‌ ಕೈಯಲ್ಲಿ ಮತ್ತೊಂದು ಸಿನಿಮಾ: ತರುಣ್‌ ಸುಧೀರ್‌ ನಿರ್ದೇಶನದ ಚಿತ್ರದ ಬಳಿಕ ಮತ್ತೊಂದು ಸಿನಿಮಾಗೆ ದರ್ಶನ್‌ ಸಹಿ ಹಾಕಿದ್ದಾರೆ. ಚೆನ್ನೈನ ಖ್ಯಾತ ಅಭಿಷೇಕ್ ಫಿಲಂಸ್ ಸಂಸ್ಥೆ ಲಾಂಛನದಲ್ಲಿ ರಮೇಶ್ ಪಿ. ಪಿಳ್ಳೈ ದರ್ಶನ್‌ ನಟನೆಯ ಹೊಸ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದರ್ಶನ್‌ ಜನ್ಮದಿನಕ್ಕೆ ಶುಭಾಶಯ ಕೋರಿ ನಿರ್ಮಾಪಕರು ಪೋಸ್ಟರ್‌ ಬಿಡುಗಡೆ ಮಾಡಿದ್ದು, ಹೆಚ್ಚಿನ ಮಾಹಿತಿಯನ್ನು‌ ಸದ್ಯದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.