ADVERTISEMENT

ದಯವಿಟ್ಟು ವಿಷಯ ಇಲ್ಲಿಗೇ ನಿಲ್ಲಿಸಿ ಎಂದ ‘ಪೊಗರು’ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 7:39 IST
Last Updated 22 ಫೆಬ್ರುವರಿ 2021, 7:39 IST
ನಂದ ಕಿಶೋರ್
ನಂದ ಕಿಶೋರ್   

ಧ್ರುವ ಸರ್ಜಾ ಹಾಗೂ ರಶ್ಮಿ ಮಂದಣ್ಣ ನಟನೆಯ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಚಿತ್ರದ ನಿರ್ದೇಶಕ ನಂದಕಿಶೋರ್‌ ಫೇಸ್‌ಬುಕ್‌ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲೇನಿದೆ?

ನಂದಕಿಶೋರ್‌ ಅವರು ವಿಡಿಯೋ ಸಂದೇಶದಲ್ಲಿ, ‘ನಿಮ್ಮ(ಬ್ರಾಹ್ಮಣ ಸಮುದಾಯದ) ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕೇಳಲ್ಪಟ್ಟೆ. ಮೂರು– ಮೂರೂವರೆ ವರ್ಷಗಳ ಕಾಲ ಕಷ್ಟಪಟ್ಟು ಸಿನಿಮಾ ತೆಗೆದು ಅದರ ಹಿಂದಿರುವ ಕಷ್ಟ, ಪರಿಶ್ರಮ ನಿಮಗೂ ಗೊತ್ತಿರುತ್ತದೆ. ಇದು ಯಾವುದೇ ಜನಾಂಗ ಅಥವಾ ಧರ್ಮಕ್ಕೆ ಧಕ್ಕೆ ತರಬೇಕು ಎಂಬ ಉದ್ದೇಶದಿಂದ ಮಾಡಿರುವಂತದ್ದು ಅಲ್ಲ. ಇದೊಂದು ಕಾಲ್ಪನಿಕ ಕಥೆ. ರಿಯಲಿಸ್ಟಿಕ್‌ ಅಲ್ಲ. ಇದನ್ನು ಸಿನಿಮಾದ ಮೊದಲನೇ ಭಾಗದಲ್ಲೇ ಹಾಕಿರುತ್ತೇವೆ. ಅಕಸ್ಮಾತ್‌ ತಿಳಿದೋ ತಿಳೀದೇನೋ ನಮ್ಮ ಕಡೆಯಿಂದ ನೋವಾಗಿದ್ದರೆ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ಆದರೆ ಒಂದು ಕನ್ನಡ ಚಲನಚಿತ್ರ ಕೋವಿಡ್‌ ಆದ ಮೇಲೆ ತುಂಬಾ ಕಷ್ಟಪಟ್ಟು ಬಿಡುಗಡೆ ಮಾಡುತ್ತಿದ್ದೇವೆ. ದಯವಿಟ್ಟು ಕನ್ನಡಿಗರಾಗಿ, ಕಲಾಭಿಮಾನಿಗಳಾಗಿ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ. ನಿಮಗೆ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ದೊಡ್ಡಮನಸ್ಸು ಮಾಡಿ ಅಲ್ಲಿಗೇ ನಿಲ್ಲಿಸಿ’ ಎಂದು ಕೋರಿದ್ದಾರೆ.

ADVERTISEMENT

ವಿಡಿಯೋ ಲಿಂಕ್‌:

ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯಗಳಿವೆ ಎಂದು ಆರೋಪಿಸಿರುವ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದ ಮೂರ್ತಿ ಅವರು, ಆ ದೃಶ್ಯಗಳನ್ನು ತೆಗೆಯಬೇಕು ಎಂದು ಆಗ್ರಹಿಸಿದ್ದರು.

ಚಿತ್ರದಲ್ಲೇ ಏನಿದೆ?

ಚಿತ್ರದ ಆರಂಭದಲ್ಲೇ ಯಜ್ಞ ಮಾಡುತ್ತಿದ್ದ ಪುರೋಹಿತರ ಮೇಲೆ ಖಳನಾಯಕನ ತಂಡದ ವ್ಯಕ್ತಿಯೊಬ್ಬ ಕಾಲಿಟ್ಟ ದೃಶ್ಯವಿದೆ. ನಾಯಕನೇ ಬ್ರಾಹ್ಮಣರನ್ನು ಅವಹೇಳನ ಮಾಡುವ ಪದಗಳನ್ನು ಬಳಸಿದ್ದಾರೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.