ADVERTISEMENT

ಯಾರೋ ಮಾಡಿದ ತಪ್ಪಿಗೆ ಇಡೀ ಚಿತ್ರರಂಗವನ್ನು ದೂಷಿಸಬೇಡಿ: ಜಗ್ಗೇಶ್

ಡ್ರಗ್ಸ್ ವಿಚಾರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 7:54 IST
Last Updated 31 ಆಗಸ್ಟ್ 2020, 7:54 IST
ನಟ ಜಗ್ಗೇಶ್
ನಟ ಜಗ್ಗೇಶ್   

ಕೆಲ ದಿನಗಳಿಂದ ಸುದ್ದಿಯಲ್ಲಿರುವ ಡ್ರಗ್‌ ಮಾಫಿಯಾದ ಕುರಿತು ದಿನಕ್ಕೊಂದು ಸುದ್ದಿ ಹೊರ ಬೀಳುತ್ತಲೇ ಇದೆ. ಚಂದನವನದಲ್ಲೂ ಡ್ರಗ್ ಜಾಲ ಹರಡಿದೆ ಎಂಬ ಅಂಶವೂ ಹೊರ ಬಿದ್ದಿದೆ. ಈ ಕುರಿತು ತನಿಖೆ ಚುರುಕುಗೊಂಡಿದೆ. ಈ ಬಗ್ಗೆ ಚಿತ್ರರಂಗದ ಅನೇಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ನಟ ಜಗ್ಗೇಶ್ ಚಂದನವನದ ಡ್ರಗ್‌ ಮಾಫಿಯಾದ ಕುರಿತು ಸರಣಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ‘ಯಾರೋ ಮಾಡಿದ ತಪ್ಪಿಗೆ ಎಲ್ಲರನ್ನೂ ಅಪರಾಧಿಗಳನ್ನಾಗಿ ಮಾಡಬೇಡಿ, ಇಡೀ ಚಿತ್ರರಂಗವನ್ನು ದೂಷಿಸಬೇಡಿ’ ಎಂದಿದ್ದಾರೆ.

'ಒಬ್ಬ ನಟನಾಗಿಯಲ್ಲ ತಂದೆಯಾಗಿ ನಾನು ಕಲಾಬಂಧುಗಳಿಗೆ ಹೇಳುವುದೊಂದೆ ನೀವು ಚೆನ್ನಾಗಿದ್ದರೆ ಮಾತ್ರ ದುನಿಯಾ, ಹುಷಾರಾಗಿರಿ. ಯಾರೋ ಕೆಲವು ತಲೆಮಾಸಿದವರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗ ಎನ್ನಬೇಡಿ' ಎಂದು ಟ್ವೀಟ್ ಮಾಡಿದ್ದಾರೆ. ‌

'ಯಾರೋ ಕೆಲವರು ಮಾಡಿದ ತಪ್ಪಿಗೆ ಚಿತ್ರರಂಗದಲ್ಲಿ ಪ್ರಾಮಾಣಿಕವಾಗಿ ದುಡಿದ ಕಲಾವಿದರು ನೊಂದಿದ್ದಾರೆ. ಹಾದಿ ತಪ್ಪಿದವರನ್ನು ಬಹಿರಂಗಪಡಿಸಿ ಬುದ್ಧಿಕಲಿಸಿ' ಎಂದು ಮಾಧ್ಯಮದವರಿಗೆ ಟ್ವೀಟ್ ಮೂಲಕ ವಿನಂತಿ ಮಾಡಿದ್ದಾರೆ.

ADVERTISEMENT

'ಉಪ್ಪು ತಿಂದವರು ನೀರು ಕುಡಿಯಲಿ. ಬದುಕುವ ಹಟವಿದ್ದವರು ಹಿಮಾಲಯ ಏರುತ್ತಾರೆ. ಬದುಕನ್ನು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ. ಅವರವರ ಹಣೆಬರಹ' ಎಂದು ಇನ್ನೊಂದು ಟ್ವೀಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

'ಹಿಂದೆ 30 ಸಿನಿಮಾಗಳಲ್ಲಿ ನಟಿಸಿದ್ದರು ನಿರ್ಮಾಪಕರ ಮನೆಮುಂದೆ ಸಂಭಾವನೆಗಾಗಿ ಕಾದು ನಿಲ್ಲುತ್ತಿದ್ದೆವು. ಸಂಭಾವನೆ ಸಿಕ್ಕ ತಕ್ಷಣ ರೇಷನ್ ಅಂಗಡಿ ಮುಂದೆ ಅಕ್ಕಿ ಸೀಮೆಎಣ್ಣೆಗೆ ಕ್ಯೂ ನಿಲ್ಲುತ್ತಿದ್ದೆವು. ಅಂತಹ ಆಗ ಇತ್ತು. ಆದರೆ ಈಗಿನವರು ಎರಡು ಸಿನಿಮಾಗಳಲ್ಲಿ ನಟಿಸಿದರೆ ಸಾಕು ಕುಬೇರನ ಮಕ್ಕಳಂತೆ ಆಡುತ್ತಾರೆ' ಎಂದು ವ್ಯಂಗ್ಯವಾಡಿದ್ದಾರೆ ಜಗ್ಗೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.