ADVERTISEMENT

ಜಗಜೀವನ ರಾಮ್ ಪಾತ್ರಕ್ಕೆ ಸತೀಶ್‌ ಕೌಶಿಕ್‌ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2022, 7:03 IST
Last Updated 28 ಸೆಪ್ಟೆಂಬರ್ 2022, 7:03 IST
ಎಮರ್ಜೆನ್ಸಿ ಚಿತ್ರದಲ್ಲಿ ಕಂಗನಾ ರನೌತ್‌
ಎಮರ್ಜೆನ್ಸಿ ಚಿತ್ರದಲ್ಲಿ ಕಂಗನಾ ರನೌತ್‌   

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟ, ನಿರ್ದೇಶಕ ಸತೀಶ್‌ ಕೌಶಿಕ್‌, ಕಂಗನಾ ರನೌತ್‌ ಮುಖ್ಯಭೂಮಿಕೆಯಲ್ಲಿರುವ ‘ಎಮರ್ಜೆನ್ಸಿ’ ಚಿತ್ರ ತಂಡ ಸೇರಿದ್ದಾರೆ.
‘ಮಿಸ್ಟರ್‌ ಇಂಡಿಯಾ, ದೀವಾನ ಮಸ್ತಾನ’ ಮೊದಲಾದ ಚಿತ್ರಗಳಿಂದ ಜನಪ್ರಿಯರಾದವರು ಸತೀಶ್‌. ಸಲ್ಮಾನ್‌ ಖಾನ್‌ ಅಭಿನಯದ ‘ತೆರೆ ನಾಮ್‌‘ ಚಿತ್ರಕ್ಕೆ ಆಕ್ಷನ್‌–ಕಟ್‌ ಹೇಳಿದ್ದರು. ಸತೀಶ್‌ ಈ ಚಿತ್ರದಲ್ಲಿ ಸ್ವಾತಂತ್ರ ಹೋರಾಟಗಾರ ಹಾಗೂ ಮಾಜಿ ಉಪಪ್ರಧಾನಿ ಜಗ್‌ಜೀವನ ರಾಮ್‌ ಪಾತ್ರ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.
ಭಾರತದ ತುರ್ತು ಪರಿಸ್ಥಿತಿ ಮತ್ತು ಅದರ ಸುತ್ತಲಿನ ರಾಜಕೀಯದ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಕಂಗನಾ ಬರೆದು ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರ ಮಾಡಲಿದ್ದಾರೆ.

ಒಂದು ಐತಿಹಾಸಿಕ ಅಥವಾ ರಾಜಕೀಯ ವ್ಯಕ್ತಿತ್ವದ ಪಾತ್ರ ಮಾಡುವಾಗ ಅವರ ಬಗ್ಗೆ ಅಧ್ಯಯನ ಅಗತ್ಯ. ಬಾಬು ಜಗನ್‌ಜೀವನ ರಾಮ್‌ ಅವರ ಪಾತ್ರ ಮಾಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಕೌಶಿಕ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದಲಿತ ನೇತಾರ ಜಗಜೀವನ ರಾಮ್‌ ಹಿಂದುಳಿದವರ ಅಭಿವೃದ್ಧಿಗಾಗಿ ಹೋರಾಟ ಮಾಡಿದ ನಾಯಕರು. ಅವರ ಜನ್ಮ ದಿನವನ್ನು ಸಮತಾ ದಿನವೆಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಅವರು 35 ವರ್ಷಗಳ ಕಾಲ ಕ್ಯಾಬಿನೆಟ್‌ ಸಚಿವರಾಗಿದ್ದರು.

ADVERTISEMENT

ಈ ಪಾತ್ರಕ್ಕೆ ಕೌಶಿಕ್‌ ಸೂಕ್ತ ಆಯ್ಕೆ ಎಂದು ರನೌತ್‌ ಹೇಳಿದ್ದಾರೆ. ‘ಜಗಜೀವನ ರಾಮ್‌ಅವರ ಬಲ, ಬುದ್ಧಿವಂತಿಕೆ, ವ್ಯಂಗ್ಯವನ್ನು ತೆರೆಯ ಮೇಲೆ ತರಬಲ್ಲ ಸೂಕ್ತ ನಟರು ಬೇಕಿತ್ತು. ಹೀಗಾಗಿ ಸತೀಶ್‌ ಅವರು ಈ ಪಾತ್ರಕ್ಕೆ ಸೂಕ್ತ ಆಯ್ಕೆ. ಅವರ ಜೊತೆ ಅಭಿನಯಿಸಲು ಉತ್ಸುಕವಾಗಿರುವೆ’ ಎಂದು ರನೌತ್‌ ಹೇಳಿದ್ದಾರೆ.

ಎರ್ಮಜೆನ್ಸಿಯಲ್ಲಿ ಅನುಪಮ್‌ ಖೇರ್‌, ಜಯಪ್ರಕಾಶ್‌ ನಾರಾಯಣ್‌ ಅವರ ಪಾತ್ರ ಮಾಡುತ್ತಿದ್ದಾರೆ. ಶ್ರೇಯಸ್‌ ತಾಲ್ಪಡೆ ಮಾಜಿ ಪ್ರಧಾನಿ ವಾಜಪೇಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.