ಸೂರಪ್ಪ ಬಾಬು
ಬೆಂಗಳೂರು: ಸಿನಿಮಾ ನಿರ್ಮಾಣಕ್ಕೆಂದು ಪಡೆದ ಸಾಲ ಹಿಂತಿರುಗಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೋಮವಾರ ನೋಟಿಸ್ ಜಾರಿ ಮಾಡಲಾಗುವುದು ಎಂದು ಅಮೃತಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ನಗರದ ತಲಕಾವೇರಿ ಲೇಔಟ್ ನಿವಾಸಿ ಎಚ್.ಜಿ. ಲಕ್ಷ್ಮೀ ಅವರ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ.
ಮಹಿಳೆಯಿಂದ ಹಣ ಪಡೆದುಕೊಂಡಿರುವ ಹಾಗೂ ಅವರಿಗೆ ಎಷ್ಟು ಹಣ ವಾಪಸ್ ನೀಡಲಾಗಿದೆ ಎಂಬುದರ ಬಗ್ಗೆ ದಾಖಲೆಗಳನ್ನು ಹಾಜರುಪಡಿಸುವಂತೆ ಸೂರಪ್ಪಗೆ ಸೂಚಿಸಲಾಗುವುದು ಎಂದು ಪೊಲೀಸರು ತಿಳಿಸಿದರು.
‘ನಟರಾದ ಶಿವರಾಜಕುಮಾರ್ ಹಾಗೂ ಗಣೇಶ್ ಅವರನ್ನು ಹಾಕಿಕೊಂಡು ‘ಪ್ರೊಡಕ್ಷನ್ ನಂಬರ್ 06’ ಚಿತ್ರ ನಿರ್ಮಿಸುತ್ತಿರುವುದಾಗಿ ನಂಬಿಸಿ ₹92.50 ಲಕ್ಷ ಪಡೆದುಕೊಂಡಿದ್ದರು. ಈ ಪೈಕಿ ₹25 ಲಕ್ಷವನ್ನು ಮಾತ್ರ ಹಿಂದಿರುಗಿಸಿದ್ದರು. ಉಳಿದ ಹಣವನ್ನು ಕೇಳಿದಾಗ ನಿಮಗೆ ಕೊಡಲು ಹಣವಿಲ್ಲ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕಿದ್ದಾರೆ' ಎಂದು ದೂರಿನಲ್ಲಿ ವಿವರಿಸಲಾಗಿದೆ.
‘2023ರ ಅಕ್ಟೋಬರ್ನಲ್ಲಿ ಸೂರಪ್ಪ ಬಾಬು ಭೇಟಿಯಾಗಿ, ಚಿತ್ರ ನಿರ್ಮಾಣಕ್ಕೆ ಹಣಕಾಸು ನೆರವು ಕೋರಿದ್ದರು. ಹಂತ ಹಂತವಾಗಿ ಅವರಿಗೆ ಸಾಲದ ರೂಪದಲ್ಲಿ ಹಣ ನೀಡಿದ್ದೇನೆ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹಣ ಪಡೆದುಕೊಂಡ ಕೆಲ ದಿನಗಳ ಬಳಿಕ ಸೂರಪ್ಪ ಬಾಬು ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪರಿಶೀಲಿಸಿದಾಗ, ಶಿವರಾಜ್ ಕುಮಾರ್ ಮತ್ತು ಗಣೇಶ್ ಅವರನ್ನು ಹಾಕಿಕೊಂಡು ಯಾವುದೇ ಚಿತ್ರ ನಿರ್ಮಿಸುತ್ತಿಲ್ಲ ಎಂಬುದು ಗೊತ್ತಾಯಿತು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಸಿನಿಮಾ ರಂಗದಲ್ಲಿರುವ ಕೆಲವರನ್ನು ವಿಚಾರಿಸಿದಾಗ, ಸೂರಪ್ಪ ಬಾಬು ಅವರು ಶಿವರಾಜ್ಕುಮಾರ್ ಹಾಗೂ ಗಣೇಶ್ ಅವರೊಂದಿಗೆ ಸಿನಿಮಾ ಮಾಡುತ್ತಿಲ್ಲ. ಆದರೆ ಉಪೇಂದ್ರ ಅವರೊಂದಿಗೆ ಸಿನಿಮಾ ನಿರ್ಮಾಣ ಮಾಡುತ್ತಿರುವುದು ತಿಳಿಯಿತು’ ಎಂದು ಮಹಿಳೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.