‘ಮುಂಗಾರುಮಳೆ’ ಕನ್ನಡ ಸಿನಿಲೋಕದಲ್ಲಿ ಹೊಸ ಭಾಷ್ಯ ಬರೆದ ಸಿನಿಮಾ. ಈ ಸಿನಿಮಾ ಬಿಡುಗಡೆಯಾಗಿ ದಶಕಗಳು ಕಳೆದರೂ ಈಗಲೂ ಇದನ್ನು ನೋಡಿ ಖುಷಿ ಪಡುವ ಮಂದಿ ಇದ್ದಾರೆ. ಚಂದನವನದಲ್ಲಿ ಹೊಸ ಆಯಾಮದ ಸಿನಿಮಾಗಳ ಹುಟ್ಟಿಗೂ ಈ ಸಿನಿಮಾ ಕಾರಣವಾಗಿತ್ತು.
ಕೇವಲ ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗವನ್ನೇ ತನ್ನತ್ತ ಸೆಳೆಯವಂತೆ ಮಾಡಿತ್ತು ಮುಂಗಾರುಮಳೆ ಸಿನಿಮಾ. ಇದು ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಅತೀ ದೊಡ್ಡ ಬ್ರೇಕ್ ನೀಡಿದ್ದ ಸಿನಿಮಾವೂ ಹೌದು.
ಇಂದು (ಡಿಸೆಂಬರ್ 29, 2020) ಮುಂಗಾರುಮಳೆ ಸಿನಿಮಾಕ್ಕೆ 14 ವರ್ಷ ತುಂಬಿದೆ. ಇಂದು ಸಾಮಾಜಿಕ ಜಾಲತಾಣದ ತುಂಬೆಲ್ಲಾ ಮುಂಗಾರುಮಳೆಯದ್ದೇ ಮಾತು. ಸಾವಿರಕ್ಕೂ ಹೆಚ್ಚು ಪೋಸ್ಟ್ ಹಾಗೂ ಟ್ವೀಟ್ಗಳು ಆನ್ಲೈನ್ ವೇದಿಕೆಯಲ್ಲಿ ರಾರಾಜಿಸುತ್ತಿದೆ. ಈ ಸಂದರ್ಭದಲ್ಲಿ ನಟ ಗಣೇಶ್ ಹಾಗೂ ಯೋಗರಾಜ್ ಭಟ್ ಸಿನಿಮಾಕ್ಕೆ ಸಂಬಂಧಿಸಿ ಕೈಬರಹವನ್ನು ಬರೆದಿದ್ದು ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಗಣೇಶ್.
ಅವರು ಬರೆದ ಪತ್ರ ಹೀಗಿದೆ ‘ನಾವಿಬ್ಬರೂ ಜೊತೆಗೆ ಚಿತ್ರತಂಡ ಅದೇ ತಾನೇ ಕಣ್ತೆರೆದ ಶಿಶುಗಳಂತೆ ‘ಮುಂಗಾರುಮಳೆ’ ಚಿತ್ರಮಾಡಿ, ಜನತೆಗೆ ಅರ್ಪಿಸಿ ಇಂದಿಗೆ 14 ವರ್ಷಗಳಾಗಿವೆ. ಚಿತ್ರಕಷ್ಟೇ ಅಲ್ಲದೇ ನಮ್ಮಿಬ್ಬರಿಗೂ ಇದು ಒಂದು ರೀತಿಯ ಹುಟ್ಟುಹಬ್ಬ. ಕೆಲಸ ಕಲಿಸಿದ, ಬದುಕುಕೊಟ್ಟ, ಪ್ರೀತಿ ತಿಳಿಸಿದ, ನಾಡು ನಲಿಸಿದ ಈ ಪ್ರೇಕ್ಷಕರ ಆಸ್ತಿಯಂತಹ ಮಹಾನ್ ಚಿತ್ರಕ್ಕೆ ನಿಮ್ಮಿಬ್ಬರ ದೀರ್ಘದಂಡ ನಮನಗಳು,
ಜೈ ಮುಂಗಾರುಮಳೆ...
ಜೈ ಜನತೆ...
ಜೈ ಜೀವನ...
ನಿಮ್ಮವರು
ಗಣಪ – ಯೋಗ್ರಾಜ್ಭಟ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.