ADVERTISEMENT

ಗೋವಾ ರೇಸ್‌ಗೆ ಸಜ್ಜಾದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು: ತಂಡದ ಬಗ್ಗೆ ಸುದೀಪ್ ಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 10:25 IST
Last Updated 9 ಫೆಬ್ರುವರಿ 2026, 10:25 IST
<div class="paragraphs"><p>ಕಿಚ್ಚ ಸುದೀಪ್</p></div>

ಕಿಚ್ಚ ಸುದೀಪ್

   

ಬೆಂಗಳೂರು: 2026ರ ಫೆಬ್ರುವರಿ 14 ಮತ್ತು 15ರಂದು ಗೋವಾದ ರಸ್ತೆಗಳು ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ಗಾಗಿ (IRF) ಹೈ–ಇಂಟೆನ್ಸಿಟಿ ರೇಸಿಂಗ್ ಕಣವಾಗಿ ಮಾರ್ಪಡಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ, ನಟ ಹಾಗೂ ತಂಡದ ಮಾಲೀಕರಾದ ಕಿಚ್ಚ ಸುದೀಪ್ ಅವರು ಈ ಕುರಿತು ಮಾತನಾಡಿದ್ದಾರೆ.

‘ಸ್ಟ್ರೀಟ್ ರೇಸಿಂಗ್ ಎನ್ನುವುದು ಸಮಯಸ್ಪೂರ್ತಿ, ಧೈರ್ಯ ಮತ್ತು ಸಂಯಮದ ಪರಮ ಪರೀಕ್ಷೆಯಾಗಿದ್ದು, ಇವೇ ಮೌಲ್ಯಗಳು ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ (Kichcha’s Kings Bengaluru) ತಂಡವನ್ನು ನಿರ್ಧರಿಸುತ್ತದೆ. ಪರ್ಮನೆಂಟ್ ಸರ್ಕ್ಯೂಟ್‌ನಲ್ಲಿ ಎಲ್ಲವೂ ನಿಯಂತ್ರಣದಲ್ಲಿ ಇರುತ್ತದೆ. ಆದರೆ ಸ್ಟ್ರೀಟ್ ರೇಸಿಂಗ್ ಮಾನಸಿಕ ಸ್ಥಿತಿಯನ್ನೇ ಸಂಪೂರ್ಣವಾಗಿ ಬದಲಿಸುತ್ತದೆ. ಇಲ್ಲಿ ಕೇವಲ ಪರಿಪೂರ್ಣತೆ ಮುಖ್ಯವಲ್ಲ, ಎದುರಾಗುವ ಸವಾಲುಗಳನ್ನು ಎದುರಿಸಿ ನಿಲ್ಲುವ ಸ್ಥಿತಿಸ್ಥಾಪಕತ್ವವೇ ಅತ್ಯಂತ ಮುಖ್ಯ. ಇದು ಕೇವಲ ರೇಸ್ ಅಲ್ಲ, ಇದು ಮನೋಭಾವ ಮತ್ತು ಧೈರ್ಯದ ಪರೀಕ್ಷೆ. ನಿಮ್ಮ ಸುತ್ತಲೂ ನಗರವೇ ಜೀವಂತವಾಗಿ ಎದ್ದು ನಿಂತಾಗ, ತಂಡವೂ ಅದಕ್ಕೆ ತಕ್ಕಂತೆ ಸ್ಪರ್ಧಿಸಬೇಕಾಗುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.

ADVERTISEMENT

ಸುದೀಪ್ ಅವರ ಪ್ರಕಾರ, ‘ಸ್ಟ್ರೀಟ್ ರೇಸಿಂಗ್, ಮೋಟಾರ್‌ಸ್ಪೋರ್ಟ್ ಅನ್ನು ಜನರಿಗೆ ಇನ್ನಷ್ಟು ಹತ್ತಿರ ತರುತ್ತದೆ. ಈ ಕ್ರೀಡೆಯನ್ನು ಮುಚ್ಚಿದ ಸರ್ಕ್ಯೂಟ್‌ಗಳಿಂದ ಹೊರತಂದು ನಗರದ ಹೃದಯಭಾಗಕ್ಕೆ ಕರೆದೊಯ್ಯುತ್ತದೆ. ಇದು ಭಾರಿ ಅಬ್ಬರದ, ತೀವ್ರದ ಸ್ಪರ್ಧೆಯಾಗಿರುತ್ತದೆ. ಇಲ್ಲಿ ಸಣ್ಣ ತಪ್ಪಿಗೂ ಜಾಗವಿಲ್ಲ. ಜನರ ಶಕ್ತಿಯೇ ತಂಡವನ್ನು ಸದಾ ಜಾಗೃತವಾಗಿಯೂ ಶಾರ್ಪ್ ಆಗಿಯೂ ಇಡುತ್ತದೆ. ಆ ಶಕ್ತಿ ಪ್ರತಿಕ್ಷಣವೂ ಎಲ್ಲರನ್ನೂ ಎಚ್ಚರದಲ್ಲಿರಿಸುತ್ತದೆ’ ಎಂದು ಅವರು ಹೇಳಿದ್ದಾರೆ.

‘ಗೋವಾ ಸ್ಟ್ರೀಟ್ ರೇಸ್‌ಗೆ ಸಿದ್ಧತೆ ನಡೆಸುವುದು ಬೆಂಗಳೂರು ಮೂಲದ ಈ ತಂಡಕ್ಕೆ ಹೊಸ ಸವಾಲಾಗಿದ್ದು, ಈ ಸರ್ಕ್ಯೂಟ್‌ಗೆ ಸಂಬಂಧಿಸಿದ ಯಾವುದೇ ಹಳೆಯ ಡೇಟಾ ಲಭ್ಯವಿಲ್ಲ. ನಾವು ನಮ್ಮ ಚಾಲಕರ ಅಂತಃಪ್ರಜ್ಞೆ, ಅನುಭವ ಮತ್ತು ಶಿಸ್ತಿನ ಮೇಲೆ ನಂಬಿಕೆ ಇಟ್ಟಿದ್ದೇವೆ. ಅತಿಯಾದ ವೇಗಕ್ಕಿಂತ ಇಲ್ಲಿ ನಿಖರತೆ ಮತ್ತು ನಿಯಂತ್ರಣವೇ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಎಲ್ಲವೂ ಕಂಟ್ರೋಲ್ ಮತ್ತು ಕ್ಲಾರಿಟಿ ಮೇಲೆ ಅವಲಂಬಿತವಾಗಿದೆ’ ಎಂದು ಸುದೀಪ್ ತಿಳಿಸಿದ್ದಾರೆ.

‘ಈ ಅಭಿಯಾನದ ಮುಂಚೂಣಿಯಲ್ಲಿ ಫ್ರೆಂಚ್ ರೇಸರ್ ಸಚೆಲ್ ರೊಟ್ಗೆ (Sachel Rotge) ಇದ್ದಾರೆ. ಅವರು ಯುರೋಪಿನ ಉದಯೋನ್ಮುಖ ಸಿಂಗಲ್-ಸೀಟರ್ ಪ್ರತಿಭೆಯಾಗಿದ್ದು, 2025ರ ಎಫ್4 ಇಂಡಿಯಾ ವೈಸ್ ಚಾಂಪಿಯನ್. RPPLನ ಎಫ್4 ಶೂಟೌಟ್ ಕಾರ್ಯಕ್ರಮದ ಮೂಲಕ ಪೂರ್ಣ ಪ್ರಮಾಣದ ವಿದ್ಯಾರ್ಥಿವೇತನವನ್ನು ಕೂಡ ಪಡೆದಿದ್ದಾರೆ. ಒಬ್ಬ ಯುವ ಯುರೋಪಿಯನ್ ರೇಸರ್ ಭಾರತವನ್ನು ತನ್ನ ಪ್ರತಿಭೆ ಸಾಬೀತುಪಡಿಸುವ ವೇದಿಕೆಯಾಗಿ ಆಯ್ಕೆ ಮಾಡುತ್ತಿರುವುದು, ಜಾಗತಿಕ ಮಟ್ಟದ ಪ್ರತಿಭೆಗಳಿಗೆ ನಮ್ಮ ರೇಸಿಂಗ್ ವ್ಯವಸ್ಥೆಯ ಮೇಲೆ ಇರುವ ವಿಶ್ವಾಸವನ್ನು ತೋರಿಸುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.

‘ಬೆಂಗಳೂರು ಹಾಗೂ ಭಾರತದ ಭರವಸೆಯ ಆಶಾಕಿರಣವಾಗಿ ರುಹಾನ್ ಆಳ್ವಾ ಮುಂದಿದ್ದಾರೆ. ಅವರು ಇಂಡಿಯನ್ ರೇಸಿಂಗ್ ಲೀಗ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನ ರೇಸ್ ವಿಜೇತ ಹಾಗೂ 2024ರ ಎಫ್4 ಇಂಡಿಯಾ ವೈಸ್ ಚಾಂಪಿಯನ್. ಈಗಾಗಲೇ ಬ್ರಿಟನ್‌ನ ರೇಸ್‌ಗಳಲ್ಲಿ ಪೋಡಿಯಂ ಫಿನಿಶ್ ಸಾಧಿಸುವ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ. ರುಹಾನ್ ಭವಿಷ್ಯದ ಪ್ರತೀಕ–ಯುವ, ನಿರ್ಭಯಿ ಮತ್ತು ಜಾಗತಿಕ ದೃಷ್ಟಿಕೋನ ಹೊಂದಿರುವವನು. ಬೆಂಗಳೂರು ಜನರು ಅವನ ಪ್ರಯಾಣವನ್ನು ನೋಡಿ ಹೆಮ್ಮೆ ಪಡಬೇಕು’ ಎಂದು ಸುದೀಪ್ ಹೇಳಿದ್ದಾರೆ.

‘ತಂಡಕ್ಕೆ ಇನ್ನಷ್ಟು ಬಲ ತುಂಬುತ್ತಿರುವವರು ಕೈಲ್ ಕುಮಾರನ್. ಅವರು ಮಧ್ಯಪ್ರಾಚ್ಯದಾದ್ಯಂತ ಕಾರ್ಟಿಂಗ್‌ನಲ್ಲಿ ವೈಸ್ ವರ್ಲ್ಡ್ ಚಾಂಪಿಯನ್ ಆಗಿದ್ದು, ಅಂತರರಾಷ್ಟ್ರೀಯ ಮಟ್ಟದ ತೀವ್ರ ಪೈಪೋಟಿಗಳ ಮೂಲಕ ತಮ್ಮ ರೇಸಿಂಗ್ ಕೌಶಲವನ್ನು ರೂಪಿಸಿಕೊಂಡಿದ್ದಾರೆ. ಕೈಲ್‌ನ ವಿಶ್ವಮಟ್ಟದ ಅನುಭವವು ಪಕ್ವತೆ ಮತ್ತು ಶಾಂತತೆಯನ್ನು ತರುತ್ತದೆ. ಇವು ಸ್ಟ್ರೀಟ್ ರೇಸಿಂಗ್‌ಗೆ ಅತ್ಯಗತ್ಯವಾದ ಗುಣಗಳು’ ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ.

‘ತಂಡವನ್ನು ಪೂರ್ಣಗೊಳಿಸುವವರು ಬ್ರಿಟಿಷ್ ರೇಸರ್ ಹಾಗೂ ತಂಡದ ಮಹಿಳಾ ಚಾಲಕಿ ಜೆಮ್ ಹೆಪ್ವರ್ತ್ . ಅವರು ರಾಫಾ ರೇಸಿಂಗ್ ತಂಡದ ಚಾಲಕಿಯಾಗಿದ್ದು, ಮೆಕ್ಲಾರೆನ್ ಟ್ರೋಫಿ ಸ್ಪರ್ಧೆಯಲ್ಲಿ ಪೋಡಿಯಂ ಫಿನಿಶ್ ಸಾಧಿಸಿರುವ ಅನುಭವ ಹೊಂದಿದ್ದಾರೆ. ವಿಶ್ವದ ಅತ್ಯಂತ ಕಠಿಣ ರೇಸಿಂಗ್ ಗ್ರಿಡ್‌ಗಳಲ್ಲಿ ಸ್ಪರ್ಧಿಸಿದ ಅನುಭವವನ್ನು ಜೆಮ್ ತಂಡಕ್ಕೆ ತರುತ್ತಾರೆ. ಅಂತಹ ಅನುಭವವು ಗ್ಯಾರೇಜ್ ಒಳಗಿನ ಮಟ್ಟವನ್ನು ಹೆಚ್ಚಿಸಿ, ಪ್ರತಿಯೊಬ್ಬರನ್ನೂ ಇನ್ನಷ್ಟು ಉತ್ತಮವಾಗಿ ಪ್ರದರ್ಶನ ನೀಡಲು ಪ್ರೇರೇಪಿಸುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.

ಸುದೀಪ್ ಅವರ ಪ್ರಕಾರ, ‘ಸ್ಟ್ರೀಟ್ ಸರ್ಕ್ಯೂಟ್‌ಗಳ ಕಠಿಣ ಸ್ವಭಾವವು ಭಾರೀ ಭಾವನಾತ್ಮಕ ಸವಾಲನ್ನು ಒಡ್ಡುತ್ತದೆ. ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿ ಒಂದು ಸಣ್ಣ ತಪ್ಪೇ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಬಹುದು. ಚಾಲಕರು ಟ್ರ್ಯಾಕ್ ಮಿತಿಗಳನ್ನು ಗೌರವಿಸಬೇಕು, ಆದರೆ ಎಂದಿಗೂ ಅವುಗಳಿಗೆ ಭಯಪಡಬಾರದು. ಬ್ಯಾಲೆನ್ಸ್ ಇಲ್ಲದಿದ್ದರೆ ರೇಸ್ ಇಲ್ಲ ಆ ಬ್ಯಾಲೆನ್ಸ್‌ನಲ್ಲೇ ಗೆಲುವು ಅಡಗಿದೆ’ ಎಂದು ಅವರು ಹೇಳಿದ್ದಾರೆ.

‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಗೋವಾ ವಾರಾಂತ್ಯಕ್ಕೆ ಕಾಲಿಡುತ್ತಿದ್ದಂತೆ, ತಂಡವು ನಗರದ ಚೈತನ್ಯವನ್ನೇ ತಮ್ಮೊಂದಿಗೆ ಕೊಂಡೊಯ್ಯುತ್ತದೆ ಎಂದು ಸುದೀಪ್ ನಂಬುತ್ತಾರೆ. ಬೆಂಗಳೂರು ಸ್ಥಿತಿಸ್ಥಾಪಕತ್ವ, ನಾವೀನ್ಯತೆ ಮತ್ತು ಮಹತ್ವಾಕಾಂಕ್ಷೆಯಿಂದ ಬೆಳೆಯುವ ನಗರ. ಈ ಊರಿನ ಸ್ಪಿರಿಟ್‌ನ್ನೇ ನಾವು ಟ್ರ್ಯಾಕ್ ಮೇಲೆ ತಂದಿದ್ದೇವೆ. ಇದೇ ಮನಸ್ಥಿತಿಯೊಂದಿಗೆ ನಾವು ಈ ರೇಸ್‌ಗೆ ಹೋಗುತ್ತಿದ್ದೇವೆ’ ಎಂದು ಸುದೀಪ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.