ಸಚಿನ್ ಚಲುವರಾಯಸ್ವಾಮಿ, ಸಂಗೀತಾ ಭಟ್ ಜೋಡಿಯಾಗಿ ನಟಿಸುತ್ತಿರುವ ‘ಕಮಲ್ ಶ್ರೀದೇವಿ’ ಚಿತ್ರದ ಟೀಸರ್ ಸೋಮವಾರ(ಆ.4) ಬಿಡುಗಡೆಗೊಂಡಿತು. ಸಿನಿಮಾ ಸೆ.19ರಂದು ತೆರೆಕಾಣುತ್ತಿದೆ.
ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ, ಚಿತ್ರದ ಕ್ರಿಯೇಟಿವ್ ಹೆಡ್ ರಾಜವರ್ಧನ್, ‘ಕಾರಿನಲ್ಲಿ ಹೋಗುತ್ತಿರುವಾಗ ‘ನೀನೆಂದರೆ ನನಗೆ ಆಸೆಯೂ ಅಲ್ಲ, ಆಕರ್ಷಣೆಯೂ ಅಲ್ಲ. ಮನದಲ್ಲಿ ಮೂಡಿದ ಮಧುರ ಭಾವನೆಯಷ್ಟೇ’ ಎಂದು ಆಟೊದ ಹಿಂದೆ ಬರೆದಿದ್ದನ್ನು ನೋಡಿದ್ದೆ. ಈ ಒನ್ಲೈನ್ ಅನ್ನೇ ಇದೀಗ ಸಿನಿಮಾ ಮಾಡಿದ್ದೇವೆ. ಕಮಲ್ಗೆ ಶ್ರೀದೇವಿ ಆಸೆಯೂ ಅಲ್ಲ, ಆಕರ್ಷಣೆಯೂ ಅಲ್ಲ. ಆಕೆ ಅವನ ಮನದಲ್ಲಿ ಮೂಡಿದ ಮಧುರ ಭಾವನೆಯಷ್ಟೇ. ಅವಳ ಮೇಲೆ ಈ ಸಿನಿಮಾದ ಕಥೆ ಇದೆ’ ಎಂದರು.
‘ಕಳೆದ ಆರು ತಿಂಗಳಿಂದ ಕನ್ನಡ ಚಿತ್ರರಂಗ ಕುಗ್ಗಿತ್ತು. ಈಗ ಚೇತರಿಸಿಕೊಂಡಿತು. ಯಾಕೆ ಚೆನ್ನಾಗಿರಲಿಲ್ಲ, ಏಕೆ ಚೆನ್ನಾಗಿ ಆಗುತ್ತಿದೆ ಎನ್ನುವುದಕ್ಕೂ ನಮ್ಮ ಸಿನಿಮಾಗಳೇ ಕಾರಣ. ಸುಗ್ಗಿ ಕಾಲ ಆರಂಭವಾಗಿದೆ. ಈ ಅವಧಿಯಲ್ಲೇ ನಮ್ಮ ಕಾಂಟೆಂಟ್ಗಳನ್ನು ಜನರ ಮುಂದೆ ಇಡಬೇಕಿದೆ. ಕಥೆ ಕಾರಣಕ್ಕಾಗಿಯೇ ಜನರು ಮತ್ತೆ ಚಿತ್ರಮಂದಿರಗಳತ್ತ ಬರುತ್ತಿದ್ದಾರೆ. ಚಿತ್ರರಂಗದ ಎಲ್ಲಾ ಪ್ರಶ್ನೆಗಳಿಗೆ ನಮ್ಮಲ್ಲೇ ಉತ್ತರವಿದೆ. ಇನ್ನು ಮೇಲೆ ಸಿನಿಮಾ ಮಾಡುವವರು ಸ್ಕ್ರಿಪ್ಟ್ ಬಗ್ಗೆ ಗಂಭೀರವಾಗಬೇಕು. ನಟನೆಯ ಜೊತೆಗೆ ಹಲವರು ಸಿನಿಮಾ ನಿರ್ದೇಶನ, ನಿರ್ಮಾಣ ಹೀಗೆ ಎರಡು ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಸಾಲಿಗೆ ಸೇರುವ ಅನಿವಾರ್ಯ ನನಗೂ ಇತ್ತು. ವಾಣಿಜ್ಯ ಮಂಡಳಿಯೂ ಒಂದೇ ದಿನ ಆರೇಳು ಸಿನಿಮಾ ಬಿಡುಗಡೆಗೆ ಕೊಂಚ ಕಡಿವಾಣ ಹಾಕಬೇಕಿದೆ. ಸಿನಿಮಾ ತಂಡದ ಶ್ರಮ ಒಂದೇ ಶುಕ್ರವಾರದಲ್ಲಿ ಹಾಳಾಗಬಾರದು’ ಎಂದರು ರಾಜವರ್ಧನ್.
ಪ್ರಸ್ತುತ ವಿಷಯ
ನಟ ಕಿಶೋರ್ ಮಾತನಾಡಿ, ‘ಇವತ್ತಿಗೆ ಬಹಳ ಪ್ರಸ್ತುತವಾದ ವಿಷಯ ಈ ಸಿನಿಮಾದಲ್ಲಿದೆ. ಅತ್ಯಾಚಾರ, ಕೊಲೆ ಎನ್ನುವುದು ಪ್ರತಿನಿತ್ಯದ ಸುದ್ದಿಯಾಗಿದೆ. ಇದು ಬಹಳ ಸಹಜ ಎನ್ನುವ ಸ್ಥಿತಿ ನಿರ್ಮಾಣವಾಗಿರುವುದು ಅಪಾಯಕಾರಿ. ಇಂತಹ ಘಟನೆಗಳು ನಮ್ಮಲ್ಲೇ ಒಬ್ಬರಿಗೆ ಆದಾಗ ಅದರ ಪರಿಣಾಮ ತಿಳಿಯುತ್ತದೆ. ಅಲ್ಲಿಯವರೆಗೂ ಕಾಯಬೇಕೇ ಅಥವಾ ಅದರ ಮೊದಲೇ ದನಿ ಎತ್ತಬೇಕೇ ಎಂದು ಯೋಚಿಸಬೇಕು. ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣವಾಗಿ 12 ವರ್ಷವಾಯಿತು. ಇದೂ ದೊಡ್ಡ ಮಟ್ಟದ ಸುದ್ದಿಯಾಯಿತು. ಆದರೆ ಇನ್ನೂ ನ್ಯಾಯ ಸಿಕ್ಕಿಲ್ಲ ಎನ್ನುವಾಗ ನಮ್ಮ ನ್ಯಾಯದ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ ಮೇಲೆ ಪ್ರಶ್ನಾರ್ಥಕ ಚಿಹ್ನೆ ಬರುತ್ತದೆ. ನಮ್ಮನ್ನು ದನಿ ಎತ್ತುವುದಕ್ಕೆ ಈ ಸಿನಿಮಾ ಪ್ರೇರೇಪಿಸುತ್ತದೆ. ಹೀಗಾಗಿ ನಾನು ಈ ಸಿನಿಮಾ ಒಪ್ಪಿಕೊಂಡೆ. ಸಮಾಜದ ಬೇರೆ ಬೇರೆ ವರ್ಗಗಳಿಂದ ಬಂದ ಪಾತ್ರಗಳು ಒಂದು ಹೆಣ್ಣನ್ನು ನೋಡುವ ದೃಷ್ಟಿಕೋನ ಆ ಹೆಣ್ಣಿನ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ’ ಎಂದರು.
ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ ಎನ್ನುವುದನ್ನು ‘ಸು ಫ್ರಮ್ ಸೋ’ ಸಿನಿಮಾ ಸುಳ್ಳು ಎಂದು ಸಾಬೀತುಪಡಿಸಿದೆ. ನಾವು ಒಳ್ಳೆಯ ಹೊಸದಾದ ಕಾಂಟೆಂಟ್ ಸಿದ್ಧಪಡಿಸಿ ಜೊತೆಗೆ ಪ್ರೇಕ್ಷಕರಿಗೆ ಏನು ಅವಶ್ಯಕತೆ ಇದೆ ಎನ್ನುವುದನ್ನು ಅರಿತು ಮುಂದುವರಿಯಬೇಕು. –ಕಿಶೋರ್ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.