ಮುಂಬೈ: ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ನಟಿ ಕಂಗನಾ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಬಾಂಬೆ ಹೈಕೋರ್ಟ್ ಕಾಯ್ದಿರಿಸಿದೆ.
ಖ್ಯಾತ ಲೇಖಕ ಮತ್ತು ಗೀತ ರಚನೆಕಾರ ಜಾವೇದ್ ಅಖ್ತರ್ ಅವರು ಕಂಗನಾ ವಿರುದ್ಧ ಕಳೆದ ನವೆಂಬರ್ನಲ್ಲಿ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ನೇತೃತ್ವದ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು.
‘ಅಖ್ತರ್ ದೂರಿನ ಅನ್ವಯ ಪೊಲೀಸರು ನಡೆಸಿರುವ ತನಿಖೆ ಏಕಪಕ್ಷೀಯವಾಗಿದೆ. ನನ್ನ ಕಕ್ಷಿದಾರರ ವಿಚಾರಣೆಯನ್ನೇ ನಡೆಸಿಲ್ಲ’ ಎಂದು ಕಂಗನಾ ಪರ ವಕೀಲರಾದ ಸಿದ್ದಿಕಿ ಹೈಕೋರ್ಟ್ಗೆ ತಿಳಿಸಿದರು.
‘ಅಖ್ತರ್ ಅವರ ದೂರಿನ ಜತೆಗೆ ಸಂದರ್ಶನದ ಆಯ್ದ ಭಾಗಗಳನ್ನು ಪರಿಶೀಲಿಸಿದ ನಂತರವೇ ನ್ಯಾಯಾಧೀಶರು ಪೊಲೀಸ್ ತನಿಖೆಗೆ ಆದೇಶಿಸಿದ್ದಾರೆ. ಇದರಲ್ಲಿ ಕಂಗನಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ’ ಎಂದು ಜಾವೇದ್ ಅಖ್ತರ್ ಪರ ವಕೀಲ ಜೈ ಕುಮಾರ್ ಭಾರಧ್ವಜ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.
‘ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸುವ ಸಲುವಾಗಿಯೇ ಈ ಹಿಂದೆ ಕಂಗನಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಅದಕ್ಕೆ ಪ್ರತಿಕ್ರಿಯಿಸಿರಲಿಲ್ಲ’ ಎಂದು ಹೇಳಿದರು.
ಕಂಗನಾ ಸಲ್ಲಿಸಿರುವ ಅರ್ಜಿ ಸಂಬಂಧ, ಸೆಪ್ಟೆಂಬರ್ 9ರಂದು ಬಾಂಬೆ ಹೈಕೋರ್ಟ್ ಆದೇಶ ನೀಡುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.