ಬೆಂಗಳೂರು: ಮಹಾರಾಷ್ಟ್ರದಲ್ಲಿ ಶಿವಸೇನಾ ಶಾಸಕರ ಬಂಡಾಯದಿಂದ ಆ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದಿವೆ. ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರ ಇನ್ನೇನು ಕೆಲವೇ ಗಂಟೆಗಳಲ್ಲಿ ಉರುಳಲಿದೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ.
ನಿನ್ನೆಸಂಜೆಯಷ್ಟೇಮುಖ್ಯಮಂತ್ರಿ ಠಾಕ್ರೆ, ‘ನಾನು ಸಿಎಂ ಸ್ಥಾನ ತೊರೆಯಲು ಸಿದ್ದ, ನಿಮಗೆ ಸಮಸ್ಯೆ ಇದ್ದರೆ ನನ್ನ ಮುಂದೆ ಬನ್ನಿ’ ಎಂದು ತಮ್ಮ ಗಂಟುಮೂಟೆಗಳ ಜೊತೆ ಹಾಗು ಹೆಂಡತಿ ನಮೃತಾ,ಮಗ, ಸಚಿವ ಆದಿತ್ಯಾ ಠಾಕ್ರೆ ಜೊತೆ ಅವರ ಅಧಿಕೃತ ಸರ್ಕಾರಿ ಬಂಗ್ಲೆಯಾದ ವರ್ಷಾವನ್ನು ತೊರೆದು ತಮ್ಮ ಖಾಸಗಿ ನಿವಾಸ ಮಾತೋಶ್ರೀಗೆ ತೆರಳಿದ್ದರು.
ಈ ಘಟನೆಯನ್ನು ಸಮಿಕರೀಸಿ ಇದೀಗ ನೆಟ್ಟಿಗರು ನಟಿ ಕಂಗನಾ ರನೌಟ್ ಅವರ ಹಳೆಯ ವಿಡಿಯೊ ಒಂದನ್ನು ವೈರಲ್ ಮಾಡುತ್ತಿದ್ದಾರೆ.
ಅಂದು ಕಂಗನಾ ಏನು ಹೇಳಿದ್ದರು?
2020 ರಲ್ಲಿ ಕಂಗನಾ ರನೌಟ್ ಅವರು ನಿಯಮ ಉಲ್ಲಂಘಿಸಿ ಮನೆ ಕಟ್ಟಿಸಿದ್ದಾರೆ ಎಂದು ಮುಂಬೈ ಮಹಾನಗರ ಪಾಲಿಕೆ ಅವರ ಮನೆಯನ್ನು ಒಡೆದು ಹಾಕಲು ಪ್ರಯತ್ನಿಸಿತ್ತು. ಇದರಿಂದ ಆಕ್ರೋಶಗೊಂಡಿದ್ದ ಕಂಗನಾ ಸಿಎಂ ಠಾಕ್ರೆ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು.
‘ಉದ್ಧವ್ ಠಾಕ್ರೆ, ಸಿನಿಮಾ ಮಾಫಿಯಾ ಗೂಂಡಾಗಳಿಂದ ನನ್ನ ಮೇಲೆ ದ್ವೇಷ ಸಾಧಿಸುತ್ತಿದಿಯಾ, ಇಂದು ನನ್ನ ಮನೆ ಒಡೆದು ಹಾಕಿದ್ದಿಯಾ,ಮುಂದೊಂದು ದಿನ ನಿನ್ನ ಘನತೆ ಮಣ್ಣು ಪಾಲಾಗುತ್ತದೆ. ನೋಡುತ್ತಾ ಇರು, ಸಮಯವೇ ಇದಕ್ಕೆ ಎಲ್ಲ ಉತ್ತರ ಕೊಡುತ್ತೆ’ಎಂದು ಏಕವಚನದಲ್ಲಿ ಇನ್ಸ್ಟಾಗ್ರಾಂ ವಿಡಿಯೊದಲ್ಲಿವಾಗ್ದಾಳಿ ನಡೆಸಿದ್ದರು.
ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೊ ವೈರಲ್ ಆಗಿದೆ. ಇದಕ್ಕೆ ಠಾಕ್ರೆ ವರ್ಷಾ ಬಂಗ್ಲೆ ಬಿಟ್ಟು ತೆರಳುತ್ತಿರುವ ವಿಡಿಯೊ ಕೂಡಿಸಿ ಠಾಕ್ರೆ ಅವರ ಕಾಲೆಳೆಯುತ್ತಿದ್ದಾರೆ.
ಇನ್ನೊಂದೆಡೆ ಶಿವಸೇನಾದ 35 ಶಾಸಕರು ಹಾಗೂ 7 ಪಕ್ಷೇತರ ಶಾಸಕರು ಅಸ್ಸಾಂನ ಗುವಾಹಟಿಯಲ್ಲಿ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ತಂಗಿದ್ದು, ಎಂವಿಎ ಸರ್ಕಾರದ ವಿರುದ್ಧ ನಮ್ಮ ನಡೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.