ADVERTISEMENT

ನೀತು ಈಗ ವಜ್ರಮುಖಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 19:31 IST
Last Updated 28 ಮಾರ್ಚ್ 2019, 19:31 IST
ನೀತು
ನೀತು   

ತಾಳಗುಪ್ಪದ ಪಿ.ಎಂ. ಶಶಿಕುಮಾರ್ ಅವರು ಹೊಸ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ‘ನಾನು ನಿರ್ಮಾಣ ಮಾಡಿದ ಮೊದಲ ಚಿತ್ರ ದೇವರ ಮಹಿಮೆ ಬಗ್ಗೆ ಆಗಿತ್ತು. ಎರಡನೆಯ ಚಿತ್ರ ದೆವ್ವದ ಬಗ್ಗೆ’ ಎಂದು ಒಂದೇ ಸಾಲಿನಲ್ಲಿ ಹೇಳಿದರು.

ಅವರು ಮಾತನಾಡಿದ್ದು ‘ವಜ್ರಮುಖಿ’ ಸಿನಿಮಾ ಬಗ್ಗೆ. ಈ ಸಿನಿಮಾ ಹಾಡುಗಳನ್ನು ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿದ್ದರು. ಇದನ್ನು ನಿರ್ದೇಶಿಸಿರುವವರು ಆದಿತ್ಯ ಕುಣಿಗಲ್. ಇವರು ಈ ಹಿಂದೆ ‘ಡೇಸ್‌ ಆಫ್‌ ಬೋರಾಪುರ’ ಎನ್ನುವ ಸಿನಿಮಾ ಮಾಡಿದ್ದರು. ‘ಸಿನಿಮಾ ಬಗ್ಗೆ ನಾನೇನೂ ಜಾಸ್ತಿ ಹೇಳುವುದಿಲ್ಲ. ಚಿತ್ರ ಸದ್ಯದಲ್ಲೇ ಬಿಡುಗಡೆ ಆಗುತ್ತದೆ, ವೀಕ್ಷಿಸಿ’ ಎಂದರು ಶಶಿಕುಮಾರ್.

ಇದು ಹಾರರ್ ಮತ್ತು ತ್ರಿಕೋನ ಪ್ರೀತಿಯ ಸಿನಿಮಾ. ಇದರ ಚಿತ್ರೀಕರಣ ನಡೆದಿರುವುದು ಸಾಗರ, ಜೋಗ ಮತ್ತು ತಾಳಗುಪ್ಪ ಪರಿಸರದಲ್ಲಿ.

ADVERTISEMENT

ಚಿತ್ರದ ನಾಯಕ ನಟ ದಿಲೀಪ್ ಪೈ. ಈ ಚಿತ್ರದ ಮೂಲಕ ಇವರ ಎರಡನೆಯ ಇನ್ನಿಂಗ್ಸ್ ಆರಂಭವಾಗುತ್ತಿದೆ. ‘ಬಹಳ ಯೂತ್‌ಫುಲ್ ಆದ ವಿಷಯ ಸಿನಿಮಾದಲ್ಲಿದೆ. ಇದರಲ್ಲಿ ಹಾರರ್ ಎಂಬುದು ಎಷ್ಟು ಬೇಕೋ ಅಷ್ಟೇ ಇದೆ. ಜೊತೆಗೆ ಹಾಸ್ಯವೂ ಇದೆ’ ಎಂದರು ದಿಲೀಪ್. ಚಿತ್ರದಲ್ಲಿ ಮೂರು ಹಾಡುಗಳಿದ್ದು, ದಿಲೀಪ್ ಅವರು ಜಾಹೀರಾತು ಸಿನಿಮಾ ಮಾಡುವವನ ‍ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ‘ವಜ್ರಮುಖಿ’ ಯಾರು ಎಂಬ ಪ್ರಶ್ನೆಗೆ ಸಿನಿಮಾ ತಂಡ ನೀಡಿದ ಉತ್ತರ: ನೀತು. ‘ನನಗೆಸಿನಿಮಾ ವಿಚಾರವಾಗಿ ಮೊದಲು ಕರೆ ಬಂದಿದ್ದು ವಿ. ನಾಗೇಂದ್ರ ಪ್ರಸಾದ್ ಅವರಿಂದ. ಸಿನಿಮಾ ಕಥೆ ಕೇಳಿದ ತಕ್ಷಣ ಪಾತ್ರಕ್ಕೆ ಸಮ್ಮತಿ ನೀಡಿದೆ. ಆದಿತ್ಯ ನಿರ್ದೇಶನದ ಡೇಸ್ ಆಫ್ ಬೋರಾಪುರ ಚಿತ್ರವನ್ನು ನಾನು ಅದಾಗಲೇ ನೋಡಿದ್ದೆ. ಅವರು ಸಂಕಲನಕಾರ ಕೂಡ ಆಗಿರುವ ಕಾರಣ ಚಿತ್ರೀಕರಣ ಬಹಳ ಕ್ರಿಸ್ಪ್ ಆಗಿ ನಡೆಯುತ್ತಿತ್ತು’ ಎಂದರು ನೀತು. ಸಂಜನಾ ಅವರು ಈ ಚಿತ್ರದ ಇನ್ನೊಬ್ಬಳು ನಾಯಕಿ.

ಸಂಜನಾ, ದಿಲೀಪ್ ಪೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.