
ರಾಜ್ ಬಿ.ಶೆಟ್ಟಿ
ಕಳೆದ ಶುಕ್ರವಾರ (ಜ.30) ಹತ್ತು ಕನ್ನಡ ಸಿನಿಮಾಗಳು ತೆರೆಕಂಡಿದ್ದವು. ಇಂದೂ(ಫೆ.6) ಹತ್ತು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ.
ರೆಡ್ ಆ್ಯಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಹಾಗೂ ಅಫ್ಜಲ್ ನಿರ್ದೇಶನದ ಚಿತ್ರ ಇದಾಗಿದೆ. ನಾಲ್ಕು ಸ್ನೇಹಿತರ ನಡುವೆ ನಡೆಯುವ ನಾಲ್ಕು ಕಥೆಗಳ ಗುಚ್ಛ ಈ ಸಿನಿಮಾದಲ್ಲಿದೆ. ಮರ್ಡರ್ ಮಿಸ್ಟ್ರಿ, ಹಾರರ್ , ಹಾಸ್ಯ ಹಾಗೂ ಈಗಿನ ಕಾಲದ ಯುವಕರ ಜೀವನದಲ್ಲಿ ನಡೆಯುತ್ತಿರುವ ಕೆಲವು ಅಂಶಗಳು ಕಥೆಯಲ್ಲಿವೆ ಎಂದಿದ್ದಾರೆ ಅಫ್ಜಲ್.
ಅಫ್ಜಲ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸ್ವಾಮಿ ಮೈಸೂರು ಛಾಯಾಚಿತ್ರಗ್ರಹಣ, ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ, ಕಾರ್ತಿಕ್ ಈಶ್ವರಾಚಾರಿ ಸಂಕಲನ ಹಾಗೂ ದೇವರಾಜ ಕುಷ್ಟಗಿ ಅವರ ಹಿನ್ನೆಲೆ ಸಂಗೀತವಿದೆ. ನಿರ್ದೇಶಕ ಅಫ್ಜಲ್ ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ಮತ್ತೊಂದು ಮುಖ್ಯಪಾತ್ರದಲ್ಲಿ ಸೆವೆನ್ ರಾಜ್ ಕೂಡಾ ನಟಿಸಿದ್ದಾರೆ. ವಸಿಷ್ಠ ಬಂಟನೂರು, ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ ರಮೇಶ್, ಶುಭತೀರ್ಥ, ವಾದ್ಯಾ, ನಾಗೇಂದ್ರ ಅರಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಸಾಹಸ ನಿರ್ದೇಶಕ ಕೆ.ರವಿವರ್ಮಾ ನಿರ್ಮಾಣದ, ರವಿ ಸಾರಂಗ ನಿರ್ದೇಶನದ ಈ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ನಿರ್ದೇಶಕ ಪ್ರೇಮ್ ಅವರ ಜೊತೆ ಕೆಲಸ ಮಾಡಿದ ಅನುಭವ ರವಿ ಅವರಿಗಿದೆ. ಇದೇ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ರಾಜ್ ಕಾಣಿಸಿಕೊಂಡಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಬಿ.ಸುರೇಶ್, ಅರ್ಚನಾ ಕೊಟ್ಟಿಗೆ ಮುಂತಾದವರು ತಾರಾಬಳಗದಲ್ಲಿದ್ದು, ನಾಯಕಿಯಾಗಿ ‘ಒಂದು ಸರಳ ಪ್ರೇಮಕಥೆ’ ಖ್ಯಾತಿಯ ಸ್ವತಿಷ್ಠಾ ಕೃಷ್ಣನ್ ಜೋಡಿಯಾಗಿದ್ದಾರೆ. ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರಲಿದ್ದು, ಕ್ರಾಂತಿಕುಮಾರ್ ಸಂಭಾಷಣೆ ಬರೆದಿದ್ದಾರೆ.
ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ನಿರ್ಮಾಣದ ಸಿನಿಮಾವಿದು. ಸೂರ್ಯ ಪ್ರಖ್ಯಾತ್ ನಾಯಕರಾಗಿರುವ ಈ ಸಿನಿಮಾವನ್ನು ಚೇತನ್ ಜೈರಾಮ್ ನಿರ್ದೇಶಿಸಿದ್ದಾರೆ. ‘ಜೆಸಿ’ ಎಂದರೆ ಜುಡಿಷಿಯಲ್ ಕಸ್ಟಡಿ. ಜೈಲಿಂದ ಹೊರಗೆ ಬಂದಿರುವ ಯುವಕನ ಕಥೆ ಈ ಸಿನಿಮಾದಲ್ಲಿದೆ. ಪ್ರಖ್ಯಾತ್ಗೆ ಜೋಡಿಯಾಗಿ ಭಾವನ ರೆಡ್ಡಿ ನಟಿಸಿದ್ದಾರೆ. ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಮಾಸ್ ಕಥಾಹಂದರ ಇರುವ ಸಿನಿಮಾಗೆ ಕಾರ್ತಿಕ್ ಛಾಯಾಚಿತ್ರಗ್ರಹಣ, ರೋಹಿತ್ ಸೋವರ್ ಸಂಗೀತ ನಿರ್ದೇಶನವಿದೆ.
ಅಶ್ವಿನಿ ರಾಮ್ಪ್ರಸಾದ್ ನಿರ್ಮಾಣದ ಈ ಚಿತ್ರವನ್ನು ಎಂ.ಶಶಿಧರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ‘ಘಾರ್ಗಾ’ ಒಂದು ಊರಿನ ಹೆಸರು. ಚಿತ್ರಕ್ಕೆ ದ ಲ್ಯಾಂಡ್ ಆಫ್ ಶಾಡೋ ಎಂಬ ಅಡಿಬರಹವಿದೆ. ಅರುಣ್ ರಾಮ್ಪ್ರಸಾದ್ ಈ ಚಿತ್ರದ ಮೂಲಕ ನಾಯಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇದೊಂದು ಅಡ್ವೆಂಚರಸ್ ಡ್ರಾಮಾ, ಹಾರರ್ ಚಿತ್ರವಾಗಿದ್ದು, ಅರುಣ್ ಲೇಖಕ ಹಾಗೂ ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ ಹಾಗೂ ನಾಯಕಿಯಾಗಿ ರೆಹಾನ ಅಭಿನಯಿಸಿದ್ದಾರೆ. ಚಿತ್ರವನ್ನು ಎನ್. ಕುಮಾರ್ ಅವರು ಬಿಡುಗಡೆ ಮಾಡುತ್ತಿದ್ದಾರೆ.
ಈ ಸಿನಿಮಾಗಳ ಜೊತೆಗೆ ಗಿಲ್ಲಿ ನಟ ನಟನೆಯ ‘ಸರ್ಕಾರಿ ಶಾಲೆ ಎಚ್–8’, ಎನ್.ಜ್ಯೋತಿಲಕ್ಷ್ಮಿ ನಿರ್ದೇಶನದ ‘ಬಯಕೆಗಳು ಬೇರೂರಿದಾಗ’, ಹಾಸ್ಯ ಕಲಾವಿದ ಕೆಂಪೇಗೌಡ ನಟನೆಯ ‘ಕಟ್ಲೆ’, ರಿದ್ದಿ ಎಂಟರ್ಟೇನ್ನ್ಮೆಂಟ್ಸ್ನಡಿ ಕಾಡ ನಟರಾಜ್ ಕಥೆ ಬರೆದು ನಿರ್ಮಾಣ ಮಾಡಿರುವ, ಕೆ.ವೆಂಕಟೇಶ್ ನಿರ್ದೇಶನದ ‘ಕರಿಕಾಡ’ ಸಿನಿಮಾಗಳೂ ತೆರೆಕಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.