ADVERTISEMENT

‌ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಭೇಟಿ ಮಾಡಿದ ‘ಕಾಂತಾರ’ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2022, 11:29 IST
Last Updated 14 ಅಕ್ಟೋಬರ್ 2022, 11:29 IST
ಅನುರಾಗ್‌ ಠಾಕೂರ್‌ ಭೇಟಿ ಮಾಡಿದ ‘ಕಾಂತಾರ’ ತಂಡ
ಅನುರಾಗ್‌ ಠಾಕೂರ್‌ ಭೇಟಿ ಮಾಡಿದ ‘ಕಾಂತಾರ’ ತಂಡ   

ದೇಶದೆಲ್ಲೆಡೆ ವ್ಯಾಪಕ ಯಶಸ್ಸು ಗಳಿಸುತ್ತಿರುವ ‘ಕಾಂತಾರ’ ಇಂದು ಹಿಂದಿಯಲ್ಲೂ ಬಿಡುಗಡೆಗೊಂಡಿದೆ. ಇದರ ಬೆನ್ನಲ್ಲೇ ಹೊಂಬಾಳೆ ಫಿಲಂಸ್‌ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರನ್ನು ಭೇಟಿ ಮಾಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಚಿವ ಅನುರಾಗ್‌ ಠಾಕೂರ್‌, ಹೊಂಬಾಳೆ ಫಿಲಂಸ್‌ ತಂಡವನ್ನು ಭೇಟಿ ಮಾಡಿದ್ದೇನೆ. ಅವರ ಕಾಂತಾರ ಸಿನಿಮಾದ ಯಶಸ್ಸಿಗೆ ಶುಭ ಕೋರಿರುವೆ. ಭಾರತವನ್ನು ವಿಶ್ವದ ಸಿನಿಮಾ ತಾಣವಾಗಿಸುವತ್ತ ಇರುವ ಅವರ ಆಲೋಚನೆಗಳನ್ನು ಕೇಳಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನಿರ್ಮಾಪಕ ವಿಜಯ್‌ ಕಿರಗಂದೂರು, ಕಾರ್ತೀಕ್‌ ಗೌಡ, ಹೊಂಬಾಳೆ ಪಾಲುದಾರ ಚೆಲುವೆ ಗೌಡ ಮೂವರು ಅನುರಾಗ್‌ ಠಾಕೂರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ADVERTISEMENT

ಕೆಜಿಎಫ್‌–2 ಚಿತ್ರದ ನಂತರ ‘ಕಾಂತಾರ’ ಹೊಂಬಾಳೆಗೆ ಅತ್ಯಂತ ಯಶಸ್ವಿ ಚಿತ್ರವಾಗಿದೆ. ಪ್ರಭಾಸ್‌ ನಟನೆಯ ‘ಸಲಾರ್‌’ ಚಿತ್ರ ಮುಂದಿನ ವರ್ಷ ಬಿಡುಗಡೆಗಿದೆ. ಲೂಸಿಯಾ ಪವನ್‌ ನಿರ್ದೇಶನದಲ್ಲಿ ಮಲಯಾಳದಲ್ಲಿ ಫಹಾದ್‌ ಫಾಸಿಲ್‌ಗೆ ‘ಧೂಮಂ‘ ಚಿತ್ರವನ್ನು ಘೋಷಿಸಿದೆ.

ಸುದೀಪ್‌ಗೆ ಹೊಂಬಾಳೆ ಚಿತ್ರ ನಿರ್ಮಿಸುವುದು ಖಚಿತವಾಗಿದೆ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶಿಸಿ, ಜಗ್ಗೇಶ್‌ ನಟಿಸಿರುವ ರಾಘವೇಂದ್ರ ಸ್ಟೋರ್ಸ್‌ ಬಿಡುಗಡೆಗೆ ಸಿದ್ಧವಾಗಿದೆ. ರಕ್ಷಿತ್‌ ಶೆಟ್ಟಿ ಜೊತೆಗೆ ರಿಚರ್ಡ್‌ ಆಂಟನಿ ಸಿನಿಮಾ ಘೋಷಿಸಿದೆ. ಡಾಲಿ ಧನಂಜಯ್‌ ಜೊತೆಗೆ ಹೊಂಬಾಳೆ-ಕೆಆರ್‌ಜಿ ನಿರ್ಮಾಣದ 5 ಸಿನಿಮಾಗಳಿಗೆ ಸಹಿ ಹಾಕಿದೆ ಎನ್ನಲಾಗುತ್ತಿದೆ. ಕನ್ನಡದ ದೊಡ್ಡ ನಾಯಕರು, ದೊಡ್ಡ ನಿರ್ದೇಶಕರನ್ನು ಹೊಂಬಾಳೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.