ADVERTISEMENT

ಸಂಕಷ್ಟಕ್ಕೆ ಕರಗಿದ ನಟಿ ಕಾರುಣ್ಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 19:30 IST
Last Updated 27 ಏಪ್ರಿಲ್ 2020, 19:30 IST
ನಟಿ ಕಾರುಣ್ಯ
ನಟಿ ಕಾರುಣ್ಯ   

ಲಾಕ್‌ಡೌನ್‌ ವೇಳೆ ಹಲವು ನಟಿಯರು ವರ್ಕೌಟ್‌, ಹೊಸ ರೆಸಿಪಿ ತಯಾರಿಕೆ, ಸಿನಿಮಾ ವೀಕ್ಷಣೆ... ಹೀಗೆ ವಿವಿಧ ಕೆಲಸಗಳಲ್ಲಿ ತೊಡಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ನಟಿ ಕಾರುಣ್ಯ ರಾಮ್‌ ಮನೆಯಲ್ಲಿ ಕುಳಿತು ಕಾಲಹರಣ ಮಾಡದೆ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಸ್ಪಂದಿಸುತ್ತಿದ್ದಾರೆ.

ತಾಯಿ, ತಂಗಿ, ಸೋದರ ಸಂಬಂಧಿಯೊಂದಿಗೆ ಅವರು ಮನೆಯಲ್ಲೇ ದಿನಸಿ ಕಿಟ್‌ ಸಿದ್ಧಪಡಿಸಿ ಅವಶ್ಯಕತೆ ಇರುವವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಹಿರಿಯ ಕಲಾವಿದೆ ಆರ್‌.ಟಿ. ರಮಾ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಸರಸ್ವತಿ ಎಂಬುವವರು ಕಾರುಣ್ಯ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದರಂತೆ. ತಕ್ಷಣವೇ ಅವರ ನೆರವಿಗೆ ಧಾವಿಸಿದ ಕಾರುಣ್ಯ, ರಮಾ ಅವರಿಗೆ ದಿನಸಿ ಕೊಟ್ಟುಬಂದಿದ್ದಾರೆ.

ರಾಜರಾಜೇಶ್ವರಿ ನಗರ, ನಂದಿನಿ ಲೇಔಟ್‌ ಸುತ್ತಮುತ್ತಲಿನ 200ಕ್ಕೂ ಹೆಚ್ಚು ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಕಿಟ್‌ಗಳನ್ನು ಅವರ ಮನೆಗಳಿಗೆ ಹೋಗಿ ತಲುಪಿಸಿದ ಸಾರ್ಥಕತೆಯ ಅನುಭವವನ್ನು ಕಾರುಣ್ಯ ‘ಪ್ರಜಾ ಪ್ಲಸ್‌’ ಜೊತೆಗೆ ಹಂಚಿಕೊಂಡರು.

ADVERTISEMENT

ಕಾರುಣ್ಯ ಶಿವಣ್ಣ ನಟನೆಯ ‘ವಜ್ರಕಾಯ’ ಮತ್ತು ಡಿ. ಸುಮನ‌ ಕಿತ್ತೂರು ನಿರ್ದೇಶನದ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರಗಳಲ್ಲಿನ ನಟನೆಯಿಂದ ಸಿನಿ ರಸಿಕರ ಮನಗೆದ್ದಿದ್ದಾರೆ. ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋನ ಸೀಸನ್ 5ರಲ್ಲಿಯೂ ಅವರು ಸ್ಪರ್ಧಿಯಾಗಿದ್ದರು.

‘ಮನೆ ಮಾರಾಟಕ್ಕಿದೆ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕಾರುಣ್ಯ, ಪವನ್‌ ಒಡೆಯರ್‌ ನಿರ್ದೇಶನದ ‘ರೇಮೊ’ ಚಿತ್ರದಲ್ಲಿಯೂ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ನಾನು ಸಣ್ಣಪುಟ್ಟ ಮತ್ತು ಸ್ಕೋಪ್‌ ಇಲ್ಲದ ಪಾತ್ರಗಳನ್ನು ಮಾಡಲಾರೆ ಎನ್ನುವುದು‘ಮನೆ ಮಾರಾಟಕ್ಕಿದೆ’ ಚಿತ್ರ ನೋಡಿದವರಿಗೆ ಗೊತ್ತಿರುತ್ತದೆ. ಹೊಸ ಸಿನಿಮಾದ ಬಗ್ಗೆಯೂ ಮಾತುಕತೆ ನಡೆದಿದೆ. ಲಾಕ್‌ಡೌನ್‌ ಮುಗಿದ ನಂತರ ಅದನ್ನು ಪ್ರಕಟಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.