ಕೆಜಿಎಫ್: ‘ಕೆಜಿಎಫ್ ಚಾಪ್ಟರ್ 1’ ಚಿತ್ರದಲ್ಲಿ ನನ್ನ ಮಗನನ್ನು ಒಳ್ಳೆಯ ರೀತಿ ತೋರಿಸುತ್ತೇವೆ ಎಂದು ಚಿತ್ರ ತಂಡದವರು ತಿಳಿಸಿದ್ದರು. ಆದರೆ ಚಿತ್ರದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ. ಆದ್ದರಿಂದ ‘ಕೆಜಿಎಫ್ ಚಾಪ್ಟರ್ 2’ ಚಿತ್ರೀಕರಣಕ್ಕೆ ತಡೆ ನೀಡಬೇಕು ಎಂದು ಪೊಲೀಸ್ ಎನ್ಕೌಂಟರ್ನಲ್ಲಿ ಮೃತಪಟ್ಟ ರೌಡಿ ತಂಗಂ, ತಾಯಿ ಪೌಳಿ ಇಲ್ಲಿನ ಎರಡನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
‘ಈ ಸಂಬಂಧ ನ್ಯಾಯಾಲಯವು ಚಿತ್ರ ನಿರ್ಮಾಪಕ ವಿಜಯ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಮತ್ತು ಬಿಜಿಎಂಎಲ್ ಕಂಪನಿಗೆ ಸಮನ್ಸ್ ನೀಡಿದೆ’ ಎಂದು ಪೌಳಿ ಪರ ವಕೀಲ ಮಣಿವಣ್ಣನ್ ‘ಪ್ರಜಾವಾಣಿ’ಗೆ ತಿಳಿಸಿದರು.
ನ್ಯಾಯಾಲಯದಲ್ಲಿ ಅ.9ರಂದು ವಿಚಾರಣೆ ನಡೆಯಲಿದೆ. ‘ಕೋಲಾರ’ ಮತ್ತು ‘ಕೆಜಿಎಫ್’ ಚಿತ್ರಗಳಲ್ಲಿ ತಂಗಂ ಬದುಕಿನ ವಿಚಾರಗಳು ಇವೆ. ಈ ಚಿತ್ರ ತಂಡಗಳಿಂದ ತಂಗಂ ಕುಟುಂಬಕ್ಕೆ ಅನ್ಯಾಯ ಆಗಿದೆ. ‘ಕೋಲಾರ’ ಚಿತ್ರ ತಂಡವು ₹ 10 ಲಕ್ಷ ನೀಡುವುದಾಗಿ ಹೇಳಿ ₹ 4 ಲಕ್ಷ ನೀಡಿದೆ. ಕೆಜಿಎಫ್ ಚಿತ್ರ ತಂಡವು ಕುಟುಂಬವನ್ನು ಒಳ್ಳೆಯ ರೀತಿ ತೋರಿಸುವುದಾಗಿ ಹೇಳಿ, ಬೇರೆ ರೀತಿಯಲ್ಲಿ ಚಿತ್ರಿಸಿದೆ. ಚಿತ್ರೀಕರಣಕ್ಕೆ ಪೌಳಿ ಕುಟುಂಬದ ಅನುಮತಿ ಕೂಡ ಪಡೆದಿರಲಿಲ್ಲ ಎಂದು ವಕೀಲರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.