ADVERTISEMENT

ಕೆಜಿಎಫ್–2 ಯಶಸ್ಸಿಗೆ ಸಂಭ್ರಮ: ಅಭಿಮಾನಿಗಳಿಗೆ ಯಶ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 5:20 IST
Last Updated 22 ಏಪ್ರಿಲ್ 2022, 5:20 IST
ಯಶ್
ಯಶ್   

ಬೆಂಗಳೂರು: ಕೆ.ಜಿ.ಎಫ್‌ ಚಾಪ್ಟರ್‌–2 ಸಿನಿಮಾ ಭಾರಿ ಯಶಸ್ಸು ಗಳಿಸಿದೆ ಎಂಬ ವರದಿಗಳ ಮಧ್ಯೆಯೇ ರಾಕಿಂಗ್ ಸ್ಟಾರ್ ಯಶ್ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಸಿನಿಮಾದ ಯಶಸ್ಸಿನಲ್ಲಿ ಪ್ರೇಕ್ಷಕರ ಪಾತ್ರ ದೊಡ್ಡದು ಎಂದು ಬಣ್ಣಿಸಿರುವ ಅವರು, ಅಭಿಮಾನಿಗಳಿಗೆ ಧನ್ಯವಾದ ಹೇಳಿದರಷ್ಟೇ ಸಾಲದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಸಂಜೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ಅವರು ಹೇಳಿದ್ದು...

‘ಒಂದು ಹಳ್ಳಿಯಲ್ಲಿ ಒಮ್ಮೆ ಬರ ಪರಿಸ್ಥಿತಿ ಉದ್ಭವಿಸಿತ್ತಂತೆ. ಮಳೆಗಾಗಿ ಪ್ರಾರ್ಥಿಸಲು ಗ್ರಾಮಸ್ಥರೆಲ್ಲ ಒಂದೆಡೆ ಸೇರಿದರಂತೆ. ಆಗ ಒಬ್ಬ ಬಾಲಕ ಛತ್ರಿ ಹಿಡಿದುಕೊಂಡು ಬಂದಿದ್ದನಂತೆ. ಆತನನ್ನು ಕೆಲವರು ಮೂರ್ಖ ಎಂದರೆ ಇನ್ನು ಕೆಲವರು ಅತಿಯಾದ ಆತ್ಮವಿಶ್ವಾಸ ಎಂದರಂತೆ. ಆತನದು ನಂಬಿಕೆಯಾಗಿತ್ತು. ಆ ಬಾಲಕನಂತೆಯೇ ಈಗ ನಾನು. ನನಗೆ ನಂಬಿಕೆ ಇತ್ತು. ಇಂದು ಅದರ ಪರಿಣಾಮ ಕಾಣುತ್ತಿದ್ದೇನೆ. ಈ ಯಶಸ್ಸಿಗೆ ನಾನು ಕೇವಲ ಧನ್ಯವಾದ ಹೇಳಿದರಷ್ಟೇ ಸಾಲದು, ಇದು ನನಗೆ ತಿಳಿದಿದೆ. ಆದರೆ ನಿಜವಾಗಿಯೂ ನಾನೀಗ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟು ಆಶೀರ್ವದಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಹೃದಯಾಂತರಾಳದ ಧನ್ಯವಾದಗಳು. ಇಡೀ ಕೆಜಿಎಫ್‌ ತಂಡದ ಪರವಾಗಿಯೂ ನಿಮಗೆ ಧನ್ಯವಾದಗಳು. ನಿಮಗೊಂದು ಅದ್ಭುತ ಸಿನಿಮಾ ಅನುಭವ ನೀಡಬೇಕೆಂದು ನಾವೆಲ್ಲರೂ ಬಯಸಿದ್ದೆವು. ನೀವದನ್ನು ಆಸ್ವಾದಿಸುತ್ತಿದ್ದೀರಿ, ಮುಂದೆಯೂ ಆಸ್ವಾದಿಸಲಿದ್ದೀರಿ ಎಂದು ಭಾವಿಸುತ್ತೇನೆ’ ಎಂದು ವಿಡಿಯೊ ಸಂದೇಶದಲ್ಲಿ ಯಶ್ ಹೇಳಿದ್ದಾರೆ.

ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಕೆ.ಜಿ.ಎಫ್‌ ಚಾಪ್ಟರ್‌–2 ಅದ್ಭುತ ಪ್ರದರ್ಶನ ಕಾಣುತ್ತಿದ್ದು ಈವರೆಗೆ ₹600 ಕೋಟಿಗೂ ಹೆಚ್ಚು ಗಳಿಸಿದೆ ಎಂದು ಕೆಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ಕೆಜಿಎಫ್‌–2 ಸಿನಿಮಾ ಏಪ್ರಿಲ್ 14ರಂದು ವಿಶ್ವದಾದ್ಯಂತ 10 ಸಾವಿರಕ್ಕೂ ಅಧಿಕ ಕಡೆಗಳಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.