ADVERTISEMENT

ಹೊಂಬಾಳೆ ನಿರ್ಮಾಣದಲ್ಲಿ ನಂದಕಿಶೋರ್‌–ಸುದೀಪ್‌ ಸಿನಿಮಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2023, 5:04 IST
Last Updated 17 ಜನವರಿ 2023, 5:04 IST
   

ಕೆಜಿಎಫ್‌, ಕಾಂತಾರದಂತಹ ದೊಡ್ಡ ಹಿಟ್‌ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲಂಸ್‌, ಕಿಚ್ಚ ಸುದೀಪ್‌ಗೆ ಸಿನಿಮಾ ಮಾಡಲಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಓಡಾಡಿತ್ತು. ಹೊಂಬಾಳೆ ಕಾರ್ತೀಕ್‌ ಗೌಡ ಸುದೀಪ್‌ ಜೊತೆಗಿನ ಚಿತ್ರವನ್ನು ಹಂಚಿಕೊಂಡು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂಬ ಸುಳಿವು ನೀಡಿದ್ದರು. ಇದೀಗ ಆ ಸುದ್ದಿಗೆ ಮತ್ತಷ್ಟು ಅಪ್‌ಡೇಟ್‌ ಸಿಕ್ಕಿದೆ.

ಸುದೀ‍ಪ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ನಂದಕಿಶೋರ್‌ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುವ ಸಾಧ್ಯತೆಗಳು ದಟ್ಟವಾಗಿವೆ. ಸುದೀಪ್‌ಗೆ ‘ರನ್ನ’, ‘ಮುಕುಂದ ಮುರಾರಿ’ಸಿನಿಮಾಗಳನ್ನು ನಿರ್ದೇಶಿಸಿದ್ದ ನಂದಕಿಶೋರ್‌ ಮತ್ತು ಸುದೀಪ್‌ ಜೊತೆಗಿರುವ ಚಿತ್ರವನ್ನು ಹೊಂಬಾಳೆಯ ಕಾರ್ತೀಕ್‌ ಗೌಡ ಟ್ವೀಟ್‌ ಮಾಡಿದ್ದಾರೆ. ಶಾಂತವಾಗಿರಲು ಸಾಧ್ಯವಿಲ್ಲ. ಈ ಜೋಡಿ ಮತ್ತೆ ಬರುತ್ತಿದೆ. ಹೊಸತೇನೋ ತರುತ್ತಿದೆ. ವಿವರಗಳಿಗೆ ನಿರೀಕ್ಷಿಸಿ ಎಂಬ ರೀತಿಯಲ್ಲಿ ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ಸುದೀಪ್‌, ನಂದಕಿಶೋರ್‌, ಕಾರ್ತೀಕ್‌ ಗೌಡ ಹಾಗೂ ನಿರ್ಮಾಪಕ ಶ್ರೀಕಾಂತ್‌ ಜೊತೆಗಿದ್ದಾರೆ. ತಮ್ಮ ಕೆಆರ್‌ಜಿ ಕನೆಕ್ಟ್‌ ಟ್ವಿಟ್ಟರ್‌ ಖಾತೆಯಲ್ಲಿ ಈ ಚಿತ್ರ ಹಂಚಿಕೊಂಡಿದ್ದಾರೆ.

ADVERTISEMENT


ಹೊಂಬಾಳೆ ಫಿಲಂಸ್‌, ಹೊಂಬಾಳೆ ಬ್ಯಾನರ್‌ನಲ್ಲಿ ದೊಡ್ಡ ಬಜೆಟ್‌ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಸಾಧಾರಣ ಬಜೆಟ್‌ ಹೊಂದಿರುವ, ಒಟಿಟಿ ಟಾರ್ಗೆಟ್‌ ಮಾಡಿದ ಸಿನಿಮಾಗಳನ್ನು ಕೆಆರ್‌ಜಿ ಸ್ಟುಡಿಯೋಸ್‌ ಅಡಿಯಲ್ಲಿ ನಿರ್ಮಾಣ ಮಾಡುತ್ತಿದೆ. ಸುದೀಪ್‌ ಸಿನಿಮಾವನ್ನು ಯಾವ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತದೆ? ಇದು ಕೆಜಿಎಫ್‌ ರೀತಿಯಲ್ಲೇ ಪ್ಯಾನ್‌ ಇಂಡಿಯಾ ಸಿನಿಮಾವಾಗಿರಲಿದೆಯಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಈಗಾಗಲೇ ಹೊಂಬಾಳೆ ಸಲಾರ್‌, ಧೂಮಂನಂತಹ ಬಿಗ್‌ ಬಜೆಟ್‌ ಸಿನಿಮಾಗಳನ್ನು ಕೈಗೆತ್ತಿಕೊಂಡಿದೆ. ಕಾಂತಾರ–2 ಕೆಲಸ ಪ್ರಗತಿಯಲ್ಲಿದೆ ಎನ್ನುತ್ತಿವೆ ಮೂಲಗಳು. ಇದರ ನಡುವೆ ಬಾಲಿವುಡ್‌ ಸಿನಿಮಾವೊಂದಕ್ಕೆ ಸಿದ್ಧತೆ ನಡೆಸಿರುವುದಾಗಿ ಇತ್ತೀಚೆಗೆ ನಿರ್ಮಾಪಕ ವಿಜಯ್‌ ಕಿರಗುಂದೂರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.