‘ಕೃಷ್ಣನ್ ಲವ್ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’, ‘ಕೃಷ್ಣ ಲೀಲಾ’ ಹೀಗೆ ಕೃಷ್ಣನ ಹೆಸರಿನಲ್ಲಿ ಸರಣಿ ಸಿನಿಮಾಗಳನ್ನು ಮಾಡಿಕೊಂಡು ಬಂದವರು ನಟ ಅಜೇಯ್ ರಾವ್. ಕೃಷ್ಣ ಎನ್ನುವ ಟೈಟಲ್ ಅವರ ಪಾಲಿಗೆ ಅದೃಷ್ಟವಂತೆ. ಅವರು ಮತ್ತೆ ‘ಕೃಷ್ಣ ಟಾಕೀಸ್’ ಹೊಕ್ಕಿರುವುದು ಎಲ್ಲರಿಗೂ ಗೊತ್ತು.ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದು.
ಗೋಕುಲ ಎಂಟರ್ಟೈನರ್ ಲಾಂಛನದಡಿ ಗೋವಿಂದರಾಜು ಎ.ಎಚ್. ಅವರು ‘ಕೃಷ್ಣ ಟಾಕೀಸ್’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ಅಭಿಷೇಕ್ ಹಾಗೂ ಪ್ರಮೋದ್ ಮರವಂತೆ ರಚಿಸಿರುವ ‘ನೈಟಿ ಮಾತ್ರ ಹಾಕೋಬೇಡ ಮೇನಕ; ನಮಗೆ ನೈಂಟಿ ಹೊಡದಂಗೆ ಆಗ್ತದೆ ಜೀವಕ್ಕೆ...’ ಎಂಬ ಹಾಡಿನ ಶೂಟಿಂಗ್ ಮೋಹನ್ ಬಿ. ಕೆರೆ ಸ್ಟುಡಿಯೊದಲ್ಲಿ ನಡೆಯಿತು. ಈ ಹಾಡಿಗೆ ನೃತ್ಯ ಸಂಯೋಜಿಸಿರುವುದು ಭೂಷಣ್. ಹಾಡಿನ ಶೂಟಿಂಗ್ನಲ್ಲಿ ಅಜೇಯ್ ರಾವ್, ಚಿಕ್ಕಣ್ಣ, ಲಾಸ್ಯಾ ನಾಗರಾಜ್ ಅವರಲ್ಲದೆ ಹಲವು ನೃತ್ಯ ಕಲಾವಿದರು ಪಾಲ್ಗೊಂಡಿದ್ದರು.
ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ವಿಜಯಾನಂದ್. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅವರೇ ನಿಭಾಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಎರಡೂ ದಶಕದಿಂದ ದುಡಿಯುತ್ತಿರುವ 60ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಹಾಗೂ 40ಕ್ಕೂ ಹೆಚ್ಚು ಚಿತ್ರಗಳಿಗೆ ಗೀತ ರಚನೆ ಮಾಡಿರುವ ಆನಂದ ಪ್ರಿಯ ಈ ಸಿನಿಮಾ ಮೂಲಕ ತಮ್ಮ ಹೆಸರನ್ನು ವಿಜಯಾನಂದ್ ಎಂದು ಬದಲಾಯಿಸಿಕೊಂಡಿದ್ದಾರೆ.
ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಅಭಿಷೇಕ್ ಜಿ. ಕಾಸರಗೋಡು ಅವರ ಛಾಯಾಗ್ರಹಣವಿದೆ. ಶ್ರೀಕಾಂತ್ ಅವರ ಸಂಕಲನವಿದೆ. ವಿಕ್ರಂ ಅವರ ಸಾಹಸ ನಿರ್ದೇಶನವಿದೆ. ಮೋಹನ್ ಬಿ. ಕೆರೆ ಅವರ ಕಲಾ ನಿರ್ದೇಶನವಿದೆ.
ಲಾಸ್ಯಾ ನಾಗರಾಜ್ ಅವರದು ಅತಿಥಿ ಪಾತ್ರವಂತೆ. ಅಪೂರ್ವಾ ಇದರ ನಾಯಕಿ. ಅವರು ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಿಂಧೂ ಲೋಕನಾಥ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಶೋಭರಾಜ್, ಮಂಡ್ಯ ರಮೇಶ್, ನಿರಂತ್, ಯಶ್ ಶೆಟ್ಟಿ, ಉಮೇಶ್, ಶ್ರೀನಿವಾಸ ಪ್ರಭು, ಶಾಂಭವಿ, ಲಕ್ಷ್ಮಿಗೌಡ, ಯಮುನಾ, ಧರ್ಮೇಂದ್ರ ಅರಸ್ ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.