ಅಕಾಲಿಕ ಮರಣಕ್ಕೆ ತುತ್ತಾದ ನಟ ಚಿರಂಜೀವಿ ಸರ್ಜಾ ಅವರು ಒಪ್ಪಿಕೊಂಡಿದ್ದ ಕೊನೆ ಚಿತ್ರ ‘ಧೀರಂ’. ಈ ಚಿತ್ರಕ್ಕೆ ವರಮಹಾಲಕ್ಷ್ಮಿ ಹಬ್ಬದಂದು ಮುಹೂರ್ತ ನಡೆಯಬೇಕಿತ್ತು. ಚಿರು ಚಿರಾಯುವಾಗಿದ್ದರೆ ಲಾಕ್ಡೌನ್ ತೆರವಾದ ನಂತರ ಈ ಚಿತ್ರ ಸೆಟ್ಟೇರುವುದರಲ್ಲಿತ್ತು.
‘ಗ್ಯಾಂಗ್ ಲೀಡರ್’ ಮತ್ತು ‘ತವರಿನ ಋಣ’ ಚಿತ್ರಗಳನ್ನು ನಿರ್ದೇಶಿದ್ದ ರಮೇಶ್ ರಾಜ್ ‘ಧೀರಂ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವವರಿದ್ದರು. ಅಲ್ಲದೇ ಈ ಚಿತ್ರವನ್ನು ರಮೇಶ್ ಅವರೇ ನಿರ್ಮಾಣ ಕೂಡ ಮಾಡಲಿದ್ದರು.
‘ಆ್ಯಕ್ಷನ್ ಮತ್ತು ಕೌಟುಂಬಿಕ ಪ್ರಧಾನ ಕಥೆಯ ಚಿತ್ರವಿದು. ಸ್ಕ್ರಿಪ್ಟ್ ಕೇಳಿದ ನಂತರ ಚಿರು ತುಂಬಾ ಖುಷಿಯಾಗಿದ್ದರು. ಚಿರು ಜತೆಗೆ ಮಾತುಕತೆ ನಡೆಸಿ, ಮೇ 27ರಂದು ಮುಂಗಡ ಕೂಡ ನೀಡಿ ಬಂದಿದ್ದೆವು. ನಾಯಕಿಯ ಆಯ್ಕೆ ಸಂಬಂಧ ಇತ್ತೀಚೆಗಷ್ಟೇ ಅವರೊಂದಿಗೆ ಚರ್ಚೆ ಕೂಡ ಮಾಡಿದ್ದೆವು. ಚಿರುಗೆ ಜೋಡಿಯಾಗಿ ಹರಿಪ್ರಿಯಾ ಅವರ ಹೆಸರು ಪ್ರಸ್ತಾಪಿಸಿದ್ದೆವು. ಚಿರು ಕೂಡ ಓಕೆ ಎಂದಿದ್ದರು’ ಎನ್ನುತ್ತಾರೆ ನಿರ್ದೇಶಕ ರಮೇಶ್ ರಾಜ್.
‘ಬೆಂಗಳೂರು, ಸಕಲೇಶಪುರ, ಮಡಿಕೇರಿ ಭಾಗದಲ್ಲಿ ಶೂಟಿಂಗ್ ನಡೆಸುವ ಯೋಜನೆ ಹಾಕಿಕೊಂಡಿದ್ದೆವು. ಲಾಕ್ಡೌನ್ ತೆರವಾಗುವುದನ್ನು ಕಾಯುತ್ತಿದ್ದೆವು. ಕೊರೊನಾ ಕಡಿಮೆಯಾದ ನಂತರ ಶೂಟಿಂಗ್ ಡೇಟ್ ಬಗ್ಗೆ ಚರ್ಚಿಸಲು ಜೂ.8ರಂದು ಭೇಟಿ ಮಾಡಲು ಹೇಳಿದ್ದರು. ಅಷ್ಟರಲ್ಲಿ ವಿಧಿಯಾಟವೇ ಬೇರೆ ಆಗಿ ಹೋಯಿತು’ ಎಂದು ಅವರು ನೋವು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.