‘ಕನ್ನಡ ಚಿತ್ರರಂಗದಲ್ಲಿ ಡ್ರಗ್ ಮಾಫಿಯಾ ಇರುವುದನ್ನು ನಾನು ಕಂಡಿಲ್ಲ. ಇಲ್ಲಿರುವ ತಂತ್ರಜ್ಞರು, ಕಲಾವಿದರು ಎಲ್ಲರೂ ಒಳ್ಳೆಯವರೇ ಎಂದು ಭಾವಿಸಿರುವೆ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಯಾರೂ ಸಹ ಮಾತನಾಡುವುದು ಸರಿಯಲ್ಲ. ತನಿಖಾ ಸಂಸ್ಥೆಗಳು ನಡೆಸುತ್ತಿರುವ ತನಿಖೆಯಿಂದ ಸತ್ಯಾಂಶ ಹೊರಬರಲಿ’ ಎಂದಿದ್ದಾರೆ ಸ್ಯಾಂಡಲ್ವುಡ್ಖ್ಯಾತ ನಟಶಿವರಾಜ್ಕುಮಾರ್.
ಚಿತ್ರರಂಗದ ಹಲವು ನಟ, ನಟಿಯರು ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಸುದ್ದಿ ಹೊರಬಿದ್ದಿರುವ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ಇಂತಹದನ್ನು ಕಂಡಿಲ್ಲ. ನಾನು ನನ್ನ ವೃತ್ತಿಬದುಕಿನ ಆರಂಭದ ದಿನಗಳಿಂದಲೂ ಈವರೆಗೆ ನೋಡಿರುವಂತೆ ಕಲಾವಿದರು, ಸಹಕಲಾವಿದರು, ತಂತ್ರಜ್ಞರು ಹಾಗೂ ಪ್ರೊಡಕ್ಷನ್ ಯೂನಿಟ್ನ ಹುಡುಗರಲ್ಲಿಅಂತಹ ವರ್ತನೆಯವರನ್ನು ನಾನು ನೋಡಿಲ್ಲ. ಚಿತ್ರರಂಗ ಒಂದು ಕುಟುಂಬದಂತೆ ಇದೆ. ಕಲಾವಿದರ ಕಡೆಗೆ ಬೊಟ್ಟು ಮಾಡಿ, ಕಳಂಕ ಹೊರಿಸುವುದು ಬೇಡ. ಸಮಾಜಕ್ಕೂ ಕೆಟ್ಟ ಸಂದೇಶ ಹೋಗಬಾರದು’ ಎಂದಿದ್ದಾರೆ ಶಿವಣ್ಣ.
‘ಎಲ್ಲಾ ಕಡೆಯೂ ಒಳ್ಳೆಯದು, ಕೆಟ್ಟದ್ದೂ ಇದ್ದೇ ಇರುತ್ತದೆ. ನಾವು ಯಾವುದನ್ನು ತೆಗೆದುಕೊಳ್ಳಬೇಕು, ಯಾವುದನ್ನು ತೆಗೆದುಕೊಳ್ಳಬಾರದೆಂಬುದು ಎಲ್ಲರಿಗೂ ಗೊತ್ತಿರಬೇಕು. ಅವರವರ ಜೀವನ ಅವರವರಿಗೆ ಬಿಟ್ಟಿದ್ದು. ‘ಎ.ಕೆ. 47’ ಚಿತ್ರದಲ್ಲಿ ಹಂಸಲೇಖ ಅವರು ಬರೆದಿರುವ ‘ಹೇ ರಾಮ್’ ಹಾಡಿನಲ್ಲಿರುವ ‘ದಿಸ್ ಈಸ್ ಇಂಡಿಯಾ’ ಸಾಲು ಸದ್ಯದ ಸನ್ನಿವೇಶಕ್ಕೆ ತುಂಬಾ ಹೊಂದಿಕೆಯಾಗುತ್ತದೆ’ ಎನ್ನುವುದು ಅವರ ಅನಿಸಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.