ADVERTISEMENT

ಪುಷ್ಪ ಚಿತ್ರದ ನಾಯಕ ಅಲ್ಲು ಅರ್ಜುನ್‌ರನ್ನು ಹಾಡಿಹೊಗಳಿದ ನಟ ಮಹೇಶ್‌ ಬಾಬು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2022, 12:01 IST
Last Updated 6 ಜನವರಿ 2022, 12:01 IST
ಅಲ್ಲು ಅರ್ಜುನ್‌ ಮತ್ತು ಮಹೇಶ್‌ ಬಾಬು
ಅಲ್ಲು ಅರ್ಜುನ್‌ ಮತ್ತು ಮಹೇಶ್‌ ಬಾಬು   

ಪುಷ್ಪ ಚಿತ್ರದ ನಾಯಕ ನಟ ಅಲ್ಲು ಅರ್ಜುನ್‌ ಹಾಗೂ ನಿರ್ದೇಶಕ ಸುಕುಮಾರ್ ಅವರನ್ನು ತೆಲುಗು ಸೂಪರ್‌ಸ್ಟಾರ್‌ ಮಹೇಶ್‌ ಬಾಬು ಶ್ಲಾಘಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, 'ಪುಷ್ಪದಲ್ಲಿ ಅಲ್ಲು ಅರ್ಜುನ್ ಪಾತ್ರವು ಬೆರಗುಗೊಳಿಸುತ್ತದೆ. ಅದು ನೈಜ ಮತ್ತು ಸಂವೇದನಾಶೀಲವಾಗಿದೆ. ತಮ್ಮ ಚಿತ್ರವು ಹಳ್ಳಿಗಾಡಿನ ವಾತಾವರಣ ಹಾಗೂ ಪ್ರಾಮಾಣಿಕತೆಯಿಂದ ಕೂಡಿರುತ್ತದೆ ಎಂಬುದನ್ನು ನಿರ್ದೇಶಕ ಸುಕುಮಾರ್‌ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ’ ಎಂದು ಹೊಗಳಿದ್ದಾರೆ.

ಮಹೇಶ್‌ ಬಾಬು ಅವರಿಗೆ ಪ್ರತಿಕ್ರಿಯಿಸಿರುವ ಪುಷ್ಪ ಚಿತ್ರದ ನಾಯಕ ನಟ ಅಲ್ಲು ಅರ್ಜುನ್‌ ಅವರು ಧನ್ಯವಾದ ಹೇಳಿದ್ದಾರೆ.

ADVERTISEMENT

ಡಿ.17ಕ್ಕೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಸುಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್, ನಟ ‘ಡಾಲಿ’ ಧನಂಜಯ್‌ ಅವರೂ ನಟಿಸಿದ್ದಾರೆ.

ಲಾರಿ ಚಾಲಕ ‘ಪುಷ್ಪ ರಾಜ್‌’ ಪಾತ್ರದಲ್ಲಿ ಅಲ್ಲು ಅರ್ಜುನ್‌ ನಟಿಸಿರುವ ಈ ಚಿತ್ರವು ರಕ್ತಚಂದನದ ಕಳ್ಳಸಾಗಣಿಕೆಯ ಕುರಿತ ಕಥಾಹಂದರವನ್ನು ಹೊಂದಿದೆ. ಚಿತ್ರದಲ್ಲಿ ತಮ್ಮ ಸ್ಟೈಲಿಷ್‌ ಲುಕ್‌ನಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಅಲ್ಲು ಅರ್ಜುನ್‌ ಸೆಳೆದಿದ್ದರು.

ರಕ್ತಚಂದನ ಕಳ್ಳಸಾಗಣೆಗೆ ಸಂಬಂಧಿಸಿದ ಕಾಡಿನ ದೃಶ್ಯಗಳ ರೋಚಕ ಚಿತ್ರೀಕರಣ, ದೇವಿಶ್ರೀ ಪ್ರಸಾದ್‌ ಸಂಗೀತವೂ ಪ್ರೇಕ್ಷಕರ ಚಪ್ಪಾಳೆಗಿಟ್ಟಿಸಿತ್ತು. ಚಿತ್ರದ ಮೊದಲನೇ ಭಾಗದ ಅಂತ್ಯದಲ್ಲಿ ಬರುವ ಫಹಾದ್‌ ಫಾಸಿಲ್‌ ಪಾತ್ರ ಮುಂದಿನ ಭಾಗದ ಕಥನದ ಕುತೂಹಲವನ್ನು ಹೆಚ್ಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.