ಬೆಂಗಳೂರು: ಲಾಕ್ಡೌನ್ ಕಾರಣದಿಂದಾಗಿ ಸಿನಿಮಾ ಚಿತ್ರೀಕರಣವೆಲ್ಲ ಸ್ಥಗಿತವಾಗಿದ್ದು, ಈ ಕ್ಷೇತ್ರದಲ್ಲಿ ದಿನಗೂಲಿಗೆ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಕಾರ್ಮಿಕರ ಹಲವು ಖ್ಯಾತ ನಟ–ನಟಿಯರು ನೆರವು ನೀಡುತ್ತಿದ್ದಾರೆ. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಅವರೂ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದಾರೆ.
ತಾವು ನಾಯಕರಾಗಿ ಅಭಿನಯಿಸುತ್ತಿರುವ ‘ಮುಗಿಲ್ಪೇಟೆ’ ಚಿತ್ರತಂಡದ ನೂರಕ್ಕೂ ಅಧಿಕ ಕಾರ್ಮಿಕರ ಖಾತೆಗೆ ನೇರವಾಗಿ ₹5 ಸಾವಿರ ವರ್ಗಾಯಿಸಲು ಮನುರಂಜನ್ ರವಿಚಂದ್ರನ್ ತೀರ್ಮಾನಿಸಿದ್ದಾರೆ. ಈ ಮೂಲಕ ಆ ಕುಟುಂಬಗಳಿಗೆ ಆಸರೆಯಾಗಿದ್ದಾರೆ.
‘ಕೋವಿಡ್ ಪಿಡುಗು ಜಗತ್ತನ್ನು ಆವರಿಸಿ ಒಂದು ವರ್ಷ ದಾಟುತ್ತಿದೆ. ಈ ಪಿಡುಗಿಗೆ ಅನೇಕ ಕುಟುಂಬಗಳು ನಲುಗಿ ಹೋಗಿವೆ. ಅವುಗಳಲ್ಲಿ ನನ್ನ ಕನ್ನಡ ಸಿನಿಮಾ ಕಲಾವಿದರ ಕುಟುಂಬವು ಹೊರತಾಗಿಲ್ಲ. ಮನೆಯಲ್ಲಿದ್ದರೆ ಸುರಕ್ಷಿತವಾಗಿರುತ್ತೇವೆಂದು ನಾವೆಲ್ಲ ಭಾವಿಸಿರುತ್ತೇವೆ. ಆದರೆ ನನ್ನ ಅನೇಕ ಕಲಾವಿದ ಸ್ನೇಹಿತರು ಈ ಸಂದರ್ಭದಲ್ಲಿ ಜೀವನ ನಡೆಸುವುದಕ್ಕೂ ಕಷ್ಟಪಡುತ್ತಿದ್ದಾರೆ. ಹೀಗಾಗಿ ಈ ಸಮಯದಲ್ಲಿ ನನ್ನ ಸ್ನೇಹಿತರ ನೆರವಿಗೆ ನಿಲ್ಲಬೇಕಾದದ್ದು ನನ್ನ ಕರ್ತವ್ಯ. ಸದ್ಯ ಮುಗಿಲ್ಪೇಟೆ ಸಿನಿಮಾದಲ್ಲಿ ನಾನು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದೇನೆ. ನನ್ನ ಈ ಒಂದು ವರ್ಷದ ಪ್ರಾಜೆಕ್ಟ್ನಲ್ಲಿ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ನನ್ನ ಸಿನಿಮಾಕ್ಕಾಗಿ ತನುಮನವನ್ನು ಅರ್ಪಿಸಿದ್ದಾರೆ. ಈಗಿನ ಸಂಕಷ್ಟ ಕಾಲದಲ್ಲಿ ಅವರ ಜೊತೆಗೆ ಅವರ ಕಷ್ಟಕ್ಕೆ ಹೆಗಲು ಕೊಡಬೇಕಾಗಿರುವುದು ನನ್ನ ಜವಾಬ್ದಾರಿ. ಹೀಗಾಗಿ ಚಿತ್ರತಂಡದಲ್ಲಿನ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ₹5 ಸಾವಿರ ಹಣವನ್ನು ಅವರ ಖಾತೆಗೆ ಹಾಕುವ ನಿರ್ಣಯ ಮಾಡಿದ್ದೇನೆ. ನನ್ನವರಿಗಾಗಿ ಈ ಸಂದರ್ಭದಲ್ಲಿ ನನ್ನ ಕೈಲಾದ ಸಹಾಯ ಮಾಡುವ ಸಣ್ಣ ಪ್ರಯತ್ನ’ ಎಂದು ಮನುರಂಜನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.