ADVERTISEMENT

ಮಾನ್ವಿತಾ ಮಸ್ತ್ ಫೋಟೊಶೂಟ್: ಬಾಲಿವುಡ್‌ನಲ್ಲಿ ಅಡಿಯಿಡಲಿದ್ದಾರೆಯೇ ಟಗರು ಪುಟ್ಟಿ?

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 2:13 IST
Last Updated 6 ಜನವರಿ 2019, 2:13 IST
   

‘ಟಗರು’ ಚಿತ್ರದ ನಂತರ ‘ಟಗರು ಪುಟ್ಟಿ’ ಅಂತಲೇ ಪಡ್ಡೆಗಳ ಬಾಯಲ್ಲಿ ಸುದ್ದಿಮಾಡಿದ್ದ ಮಾನ್ವಿತಾ, ಈಗ ತಮ್ಮ ವೃತ್ತಿ ಬದುಕಿನ ಮತ್ತೊಂದು ಮಜಲನ್ನು ಏರಲು ಸಜ್ಜಾಗುತ್ತಿದ್ದಾರೆ.

‘ಟಗರು’ ನಲ್ಲಿ ಡಾಲಿಯಾಗಿ ಕಾಣಿಸಿಕೊಂಡಿದ್ದ ಧನಂಜಯ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ರಾಮ್‌ಗೋಪಾಲ ವರ್ಮ ಅವರ ಕ್ಯಾಂಪಿಗೆ ಹಾರಿದ್ದರು. ಆರ್‌ಜಿವಿ ಅವರ ಶಿಷ್ಯ ಸಿದ್ಧಾರ್ಥ ನಿರ್ದೇಶನದ ಬಹುಭಾಷಾ ಚಿತ್ರ ‘ಭೈರವಗೀತ’ದಲ್ಲಿ ನಾಯಕನಾಗಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಹಾಗೆಯೇ ‘ಟಗರು’ ಚಿತ್ರವನ್ನು ವೀಕ್ಷಿಸಿದ ಆರ್‌ಜಿವಿ, ಮಾನ್ವಿತಾ ಕಾಮತ್‌ ಅವರಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಮುಂಗಡ ಹಣ ಕೊಟ್ಟಿರುವುದೂ ಸುದ್ದಿಯಾಗಿತ್ತು.

2018ರಲ್ಲಿ ಟಗರು ಹೊರತಾಗಿ ಇನ್ನೆರಡು ಸಿನಿಮಾದಲ್ಲಿಯೂ ಅವರು ನಟಿಸಿದ್ದರು. ಆರ್‌. ಚಂದ್ರು ನಿರ್ದೇಶನದ, ದುನಿಯಾ ವಿಜಯ್ ನಟನೆಯ ‘ಕನಕ’ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಹಾಗೆಯೇ ಚಂದ್ರಶೇಖರ ಬಂಡಿಯಪ್ಪ ನಿರ್ದೇಶನದ ‘ತಾರಕಾಸುರ’ ಚಿತ್ರದಲ್ಲಿಯೂ ಮಾನ್ವಿತಾ ನಟಿಸಿದ್ದರು. ಅದರಲ್ಲಿ ಮಾನ್ವಿತಾ ನಟನೆಗೆ ಪ್ರಶಂಸನೆ ವ್ಯಕ್ತವಾದರೂ ಸಿನಿಮಾ ಯಶಸ್ವಿಯಾಗಲಿಲ್ಲ.

ADVERTISEMENT

ಮಾನ್ವಿತಾ ಹರೀಶ್ ಆಗಿದ್ದವರು ತಮ್ಮ ಹೆಸರನ್ನು ಮಾನ್ವಿತಾ ಕಾಮತ್ ಎಂದು ಬದಲಿಸಿಕೊಂಡಿದ್ದ ಅವರುಕೆಲವು ತಿಂಗಳ ಹಿಂದೆ ಮುಂಬೈಗೆ ಹಾರಿದ್ದರು. ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿರುವುದರಿಂದ ಮುಂಬೈಗೆ ಹೋಗಿದ್ದಾರೆ ಎಂಬ ಗಾಳಿಸುದ್ದಿಯೊಂದು ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡಿ ತಣ್ಣಗಾಗಿತ್ತು. ಆ ಸುದ್ದಿಗೆ ಈಗ ಮತ್ತೆ ಜೀವ ಸಿಕ್ಕಿದೆ. ಅದಕ್ಕೆ ಕಾರಣ ಒಂದು ಫೋಟೊಶೂಟ್.

ಹೌದು. ಮಾನ್ವಿತಾ ಹರೀಶ್ ಮುಂಬೈನ ಖ್ಯಾತ ಸಿನಿಮಾ ಫೋಟೊಗ್ರಾಫರ್ ಬಳಿಯಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ. ಅದರಲ್ಲಿ ಪಡ್ಡೆಗಳ ಎದೆಯಲ್ಲಿ ಕಿಚ್ಚುಹೊತ್ತಿಸುವಷ್ಟು ಹಾಟ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೊಗಳನ್ನು ನೋಡಿದ ಹಲವರು ‘ಮಾನ್ವಿತಾ, ಸದ್ಯದಲ್ಲಿಯೇ ಬಾಲಿವುಡ್‌ ಸಿನಿಮಾದಲ್ಲಿ ನಟಿಸುವ ಸುದ್ದಿ ನೀಡಲಿದ್ದಾರೆ’ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಸಿನಿಮಾ ನಟಿಯರು ಫೋಟೊ ಶೂಟ್ ಮಾಡಿಸಿಕೊಳ್ಳುವುದೇನೂ ಹೊಸ ಸಂಗತಿ ಅಲ್ಲ. ಈ ಫೋಟೊ ಶೂಟ್ ಮಾಡಿಸಿಕೊಂಡಿರುವ ಕಾರಣಕ್ಕೆ ಮಾನ್ವಿತಾ ಅವರಿಗೆ ಹಿಂದಿ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ ಎಂದೂ ಖಚಿತವಲ್ಲ. ಆದರೆ ಅವಕಾಶಕ್ಕಾಗಿ ಪ್ರಯತ್ನಿಸುತ್ತಿರುವ ಸೂಚನೆಯಂತೂ ಹೌದು ಎಂಬುದು ಗಾಂಧಿನಗರ ಮಂದಿಯ ಊಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.