
ಕಳೆದ ನವೆಂಬರ್ನಲ್ಲಿ ತೆರೆಕಾಣಬೇಕಿದ್ದ ರಿಶಿತ್ ಶೆಟ್ಟಿ ನಿರ್ದೇಶನದ, ರಿತ್ವಿಕ್ ಮಠದ್ ಹಾಗೂ ಚೈತ್ರಾ ಜೆ.ಆಚಾರ್ ನಟಿಸಿರುವ ‘ಮಾರ್ನಮಿ’ ಸಿನಿಮಾ ಕೊನೆ ಕ್ಷಣದಲ್ಲಿ ಎರಡು ಬಾರಿ ಮುಂದೂಡಿಕೆಯಾಗಿತ್ತು. ಇದೀಗಸಿನಿಮಾ ಫೆ.20ರಂದು ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.
ನಿರ್ದೇಶಕ ರಿತೀಶ್ ಶೆಟ್ಟಿ ಮಾತನಾಡಿ, ‘ಇದೇ 20ರಂದು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಈ ಮುಂಚೆ ಎರಡು ಬಾರಿ ದಿನಾಂಕ ಪ್ರಕಟಿಸಿದ್ದ ವೇಳೆ ಪ್ರಚಾರಕ್ಕೆ ಸಮಯ ಸಿಕ್ಕಿರಲಿಲ್ಲ. ಚಿತ್ರ ಮಾಡಿ ಜನರಿಗೆ ತಲುಪಲು ಸಾಧ್ಯವಾಗಲಿಲ್ಲ ಎನ್ನುವ ಕಾರಣದಿಂದ ಮುಂದೂಡಿದ್ದೆವು. ಚಿತ್ರದಲ್ಲಿ ಒಳ್ಳೆಯ ಕಥೆ ಇದೆ. ಹುಲಿವೇಷ, ಕರಾವಳಿ ಭಾಗದ ಪ್ರೇಮಕಥೆ, ಆ್ಯಕ್ಷನ್, ಭಾವನಾತ್ಮಕ ದೃಶ್ಯಗಳು, ಸಂಬಂಧಗಳ ಬೆಲೆ ಹೀಗೆ ಹಲವು ವಿಷಯಗಳು ಕಥೆಯಲ್ಲಿವೆ. ಕರಾವಳಿ ಭಾಗದಲ್ಲಿ ‘ಮಾರ್ನಮಿ’ ಎಂದರೆ ದಸರಾ. ಚಿತ್ರದಲ್ಲಿನ ‘ಚೇತು’ ಮತ್ತು ‘ದೀಕ್ಷಾ’ ಪಾತ್ರಗಳು ಜನರಿಗೆ ಇಷ್ಟವಾಗಲಿವೆ’ ಎಂದರು.
‘ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಮನುಷ್ಯ ತಾಳ್ಮೆ ಕಳೆದುಕೊಂಡರೆ ಏನೆಲ್ಲಾ ಆಗಲಿದೆ ಎನ್ನುವ ಹಲವು ಮುಖಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಜೊತೆಗೆ ನಟ ಕಿಚ್ಚ ಸುದೀಪ್ ಅವರು ಚಿತ್ರಕ್ಕೆ ಬೆಂಬಲವಾಗಿ ನಿಂತಿರುವುದು ಮತ್ತಷ್ಟು ಶಕ್ತಿ ತುಂಬಿದೆ’ ಎನ್ನುತ್ತಾರೆ ರಿತ್ವಿಕ್ ಮಠದ್.
ಮೊದಲು ಕನ್ನಡದಲ್ಲಿ ಸಿನಿಮಾ ಬಿಡುಗಡೆ ಮಾಡಿ ಪ್ರತಿಕ್ರಿಯೆ ನೋಡಿಕೊಂಡು ಬೇರೆ ಭಾಷೆಗೆ ಡಬ್ ಮಾಡುವ ಯೋಚನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಚಿತ್ರಕ್ಕೆ ಶಿವಸೇನಾ ಛಾಯಾಚಿತ್ರಗ್ರಹಣ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ವರದರಾಜ್ ಕಾಮತ್ ಕಲಾನಿರ್ದೇಶನ ಚಿತ್ರಕ್ಕಿದೆ.