
ರಿಯಾ ಸಚ್ದೇವ್, ಭರತ್ ಕುಮಾರ್ ಹಾಗೂ ಮೋಕ್ಷಿತ ಪೈ
ಚಿತ್ರ: ಇನ್ಸ್ಟಾಗ್ರಾಮ್
‘ಪಾರು’ ಧಾರಾವಾಹಿ ಹಾಗೂ ಬಿಗ್ಬಾಸ್ ಮೂಲಕ ಖ್ಯಾತಿ ಪಡೆದುಕೊಂಡಿರುವ ಮೋಕ್ಷಿತಾ ಪೈ ತಮ್ಮ ಮುಂದಿನ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಈಗಾಗಲೇ ‘ಮಿಡಲ್ಕ್ಲಾಸ್ ರಾಮಾಯಣ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ.
ನಟಿ ಮೋಕ್ಷಿತಾ ಪೈ ಅವರು ತಮ್ಮ ಎರಡನೇ ಸಿನಿಮಾದ ಹೆಸರನ್ನು ಘೋಷಣೆ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ‘ರುಕ್ಮಿಣಿ ರಾಧಾಕೃಷ್ಣ’ ನಟ ಹಾಗೂ ನಟಿಯ ಜೊತೆಗೆ ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ರುಕ್ಮಿಣಿ ರಾಧಾಕೃಷ್ಣ ಪೋಸ್ಟರ್
ಜೊತೆಗೆ ‘ಎಲ್ಲರೂ ಕೇಳುತ್ತಿದ್ದೀರಿ ಮುಂದೆ ಏನು? ಮುಂದೇನು? ಕೊನೆಗೂ ಇಲ್ಲಿದೆ. ನನ್ನ ಮುಂದಿನ ಸಿನಿಮಾ ರುಕ್ಮಿಣಿ ರಾಧಾಕೃಷ್ಣ. ಈ ಸುಂದರ ಪ್ರೇಮಕಥೆಯ ಭಾಗವಾಗಲು ತುಂಬಾ ಉತ್ಸುಕಳಾಗಿದ್ದೇನೆ. ನಿಮ್ಮ ಬೆಂಬಲ ಇಲ್ಲದೇ ಏನೂ ಸಾಧ್ಯವಿಲ್ಲ. ಬೆಂಬಲಿಸುತ್ತಲೇ ಇರಿ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇನ್ನು, ನಟಿ ಮೋಕ್ಷಿತಾ ಪೈ ಅವರು ಹಂಚಿಕೊಂಡ ಪೋಸ್ಟ್ಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿ ಸಹ ನಿರ್ದೇಶಕ ಹಾಗೂ ಬರಹಗಾರನಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಪ್ರಾಣ್ ಸುವರ್ಣ ಅವರ ಪ್ರಥಮ ನಿರ್ದೇಶನದ ಚಿತ್ರ ರುಕ್ಮಿಣಿ ರಾಧಾಕೃಷ್ಣ. ಬಿಡುಗಡೆಗೆ ಸಿದ್ದವಾಗಿರೋ ಮೆಜೆಸ್ಟಿಕ್-2 ಚಿತ್ರದ ಹೀರೋ ಭರತ್ ಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಮೋಕ್ಷಿತ ಪೈ ಹಾಗೂ ರಿಯಾ ಸಚ್ದೇವ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ರುಕ್ಮಿಣಿ ರಾಧಾಕೃಷ್ಣ ಸಿನಿಮಾ ತಂಡದವರು
ಇತ್ತೀಚೆಗೆ ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರದ ಮುಹೂರ್ತ ಸಮಾರಂಭ ಕುಮಾರಕೃಪದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಫಿಲಂ ಚೇಂಬರ್ ಅಧ್ಯಕ್ಷ ಆರ್. ನರಸಿಂಹಲು ಅವರು ಕ್ಲಾಪ್ ಮಾಡಿದರೆ, ನಿರ್ಮಾಪಕ ಆರ್. ಹನುಮಂತರಾಜು ಅವರ ಕ್ಯಾಮೆರಾ ಸ್ವಿಚಾನ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
'ರುಕ್ಮಿಣಿ ರಾಧಾಕೃಷ್ಣ' ಇದೊಂದು ತ್ರಿಕೋನ ಪ್ರೇಮಕತೆಯಾಧಾರಿತ ಚಿತ್ರವಾಗಿದ್ದು, ನಿರ್ದೇಶಕರು ಶ್ರೀಕೃಷ್ಣ, ರಾಧಾ, ರುಕ್ಮಿಣಿಯ ಪ್ರೇಮ ಕಥೆ ಇಟ್ಟುಕೊಂಡು ಈಗಿನ ಕಾಲದ ಜಂಜಿ ಟ್ರಯಾಂಗಲ್ ಲವ್ ಸ್ಟೋರಿಯನ್ನು ನಮ್ಮ ಚಿತ್ರದ ನಾಯಕ, ನಾಯಕಿಯರ ಮೂಲಕ ಹೇಳಹೊರಟಿದ್ದಾರೆ. ಚಿತ್ರಕ್ಕೆ 60 ದಿನಗಳ ಶೂಟಿಂಗ್ ಪ್ಲಾನ್ ಮಾಡಲಾಗಿದ್ದು, ಮೊದಲ ಹಂತದಲ್ಲಿ ಬೆಂಗಳೂರು ಸುತ್ತಮುತ್ತ ಹಾಗೂ ಎರಡನೇ ಹಂತದಲ್ಲಿ ಕುಂಭಕೋಣಂನಲ್ಲಿ ಚಿತ್ರೀಕರಣ ನಡೆಸಲಾಗುವುದು.
ರುಕ್ಮಿಣಿ ರಾಧಾಕೃಷ್ಣ ಸಿನಿಮಾ ತಂಡದವರು
ಶಿಲ್ಪಾ ಶ್ರೀನಿವಾಸ್ ಅರ್ಪಿಸುವ ರುಕ್ಮಿಣಿ ರಾಧಾಕೃಷ್ಣ ಚಿತ್ರವನ್ನು ಪೆನ್ ಡ್ರೈವ್ ಚಿತ್ರದ ನಿರ್ಮಾಪಕ ಎನ್. ಹನುಮಂತರಾಜು ಹಾಗೂ ಎನ್. ಎಚ್. ಉಮೇಶ್ ಚಂದ್ ಸೇರಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಸುನಾದ ಗೌತಮ್ ಅವರ ಸಂಗೀತ ನಿರ್ದೇಶನವಿದೆ. ಪ್ರಾಣ್ ಸುವರ್ಣ ಅವರೇ ಚಿತ್ರದ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಸುನೀಲ್ ನರಸಿಂಹಮೂರ್ತಿ ಅವರ ಛಾಯಗ್ರಹಣ, ಎಂ. ಲಕ್ಷ್ಮಣರಾವ್ ಅವರ ಸಂಕಲನ, ಮಹೇಶ್ ರಾಮ್ ಅವರ ಸಹ ನಿರ್ದೇಶನ ರುಕ್ಮಿಣಿ ರಾಧಾಕೃಷ್ಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.