ADVERTISEMENT

ಸಿನಿಮಾ ಸುದ್ದಿ | ‘ಕ್ಷೇತ್ರಪತಿ’ಯಾದ ನವೀನ್‌ ಶಂಕರ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 12:53 IST
Last Updated 2 ಜೂನ್ 2023, 12:53 IST
ನವೀನ್‌ ಶಂಕರ್‌ 
ನವೀನ್‌ ಶಂಕರ್‌    

‘ಗುಲ್ಟು’, ‘ಗುರುದೇವ ಹೊಯ್ಸಳ’ ಹಾಗೂ ‘ಹೊಂದಿಸಿ ಬರೆಯಿರಿ’ ಸಿನಿಮಾಗಳ ಮೂಲಕ ತನ್ನ ನಟನಾ ಸಾಮರ್ಥ್ಯವನ್ನು ಪ್ರೇಕ್ಷಕರೆದುರಿಗೆ ಇರಿಸಿರುವ ನವೀನ್ ಶಂಕರ್ ಪ್ರಸ್ತುತ ‘ಕ್ಷೇತ್ರಪತಿ’ಯಾಗಿ ಬರಲು ಸಜ್ಜಾಗಿದ್ದಾರೆ. 

ನವೀನ್‌ ಅವರ ಜನ್ಮದಿನದಂದು ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ವಿಭಿನ್ನವಾದ ಲುಕ್‌ನಲ್ಲಿ ನವೀನ್‌ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದೆ. ಜುಲೈನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಚಿತ್ರವು ಕೆ.ಆರ್‌.ಜಿ. ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ.

ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಶ್ರೀಕಾಂತ್ ಕಟಗಿ ನಿರ್ದೇಶಿಸಿದ್ದಾರೆ. ‘ಕ್ಷೇತ್ರಪತಿ’ ಸೋಷಿಯಲ್ ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ ಎನ್ನುತ್ತಾರೆ ನಿರ್ದೇಶಕರು. ಇದು ಶ್ರೀಕಾಂತ್ ಅವರ ನಿರ್ದೇಶನದ ಚೊಚ್ಚಲ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆ ಇದಾಗಿದ್ದು, ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ‌.

ADVERTISEMENT

ರವಿ ಬಸ್ರೂರು ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ವೈ.ವಿ.ಬಿ. ಶಿವಸಾಗರ್ ಛಾಯಾಚಿತ್ರಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನವಿದೆ. ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್, ‘ಕ್ಷೇತ್ರಪತಿ’ ಚಿತ್ರದಲ್ಲೂ ಜೋಡಿಯಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.