ADVERTISEMENT

ರವಿಚಂದ್ರನ್‌ ‘ಆ ದೃಶ್ಯ’ದ ಹೊಸಲುಕ್‌ 

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 14:04 IST
Last Updated 13 ಆಗಸ್ಟ್ 2019, 14:04 IST
ರವಿಚಂದ್ರನ್
ರವಿಚಂದ್ರನ್   

ಕ್ರೈಂ, ಸಸ್ಪೆನ್ಸ್‌ ಜಾನರ್‌ನ ಸಿನಿಮಾ ‘ದೃಶ್ಯ’ದಲ್ಲಿ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವರಾಜೇಂದ್ರ ಪೊನ್ನಪ್ಪನಾಗಿ ನಟ ರವಿಚಂದ್ರನ್‌ಗಮನ ಸೆಳೆದಿದ್ದುಪ್ರೇಕ್ಷಕರ ನೆನಪಿನಲ್ಲಿ ಇನ್ನೂ ಹಸಿರಾಗಿದೆ. ಅದೇ ಜಾನರ್‌ನ, ಅದೇ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ‘ಆ ದೃಶ್ಯ’ದಲ್ಲಿ ರವಿಚಂದ್ರನ್‌ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡುವ ನಿರೀಕ್ಷೆ ಹುಟ್ಟುಹಾಕಿದ್ದಾರೆ.

ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲಿರುವ ‘ಆ ದೃಶ್ಯ’ ಸಿನಿಮಾದ ಟ್ರೇಲರ್‌ ಬಿಡುಗಡೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತಿಗೆ ಆರಂಭಿಸಿದರವಿಚಂದ್ರನ್‌ ಅವರ ಮಾತು ಕೂಡ ಇದಕ್ಕೆ ಪುಷ್ಠಿ ನೀಡುವಂತೆಯೇ ಇತ್ತು. ಟ್ರೇಲರ್‌ ನೋಡಿದಾಗ ಅವರ ಹೊಸ ಲುಕ್‌ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಇದೆ.

‘ಮನಸಿನಿಂದ ‘ದೃಶ್ಯ’ವೇ ಇನ್ನೂ ಹೋಗಿಲ್ಲ. ಅದೇ ಜಾನರ್‌ನ ಮತ್ತೊಂದು ‘ಆ ದೃಶ್ಯ’ ಸಿದ್ಧವಾಗಿದೆ. ನನ್ನನ್ನು ಒಂದೊಂದು ಗೆಟಪ್‌ನಲ್ಲಿ ತೋರಿಸುವ ಆಸೆ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಇದೆ. ಕೃಷ್ಣನ ಪಾತ್ರದಲ್ಲೂ ತೋರಿಸಿದರು.ನಾನು ಈಗ ಯಾವುದೇ ಪಾತ್ರಕ್ಕೂ ಸೈ. ಮುದುಕನ ಪಾತ್ರವಲ್ಲ, ಮುದುಕಿಯ ಪಾತ್ರಕ್ಕೂ ಸೈ. ನಮ್ಮಲ್ಲಿರುವ ಅಭಿನಯ ಶಕ್ತಿ ಹೊರಹಾಕಲು ಕಾಲ ಕೂಡಿಬಂದಿದೆ. ನನ್ನ ಸಿನಿ ಬದುಕಿನಲ್ಲೇ ಮಾಡಿರದ ವಿಭಿನ್ನ ಪಾತ್ರವನ್ನು ‘ಆ ದೃಶ್ಯ’ದಲ್ಲಿಮಾಡಿದ್ದೇನೆ. ಇದು ನನಗೆ ಹೊಸ ಅನುಭವ ಕೂಡ ಎಂದು ರವಿಚಂದ್ರನ್‌ ಮಾತು ವಿಸ್ತರಿಸಿದರು.

ADVERTISEMENT

ನಿರ್ಮಾಪಕ ಕೆ.ಮಂಜು, ರವಿಚಂದ್ರನ್‌ ಇದ್ದರೆ ಸಿನಿಮಾಕ್ಕೆ ವಸ್ತುವೇ ಬೇಕಿಲ್ಲ. ಅವರೇ ಸಿನಿಮಾದ ವಸ್ತು. ಅವರನ್ನು ಈ ಸಿನಿಮಾದಲ್ಲಿ ಡಿಫರೆಂಟ್‌ ಲುಕ್‌ನಲ್ಲಿ ತೋರಿಸಿದ್ದೇವೆ. ಸಿನಿಮಾ ಕೂಡ ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕ ಶಿವಗಣೇಶ್‌ ಮತ್ತು ಗುಜ್ಜಲ್‌ ಪುರುಷೋತ್ತಮ್‌ ತಮ್ಮ ಜವಾಬ್ದಾರಿಯನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಹಣದ ಲೆಕ್ಕವೂ ಅಷ್ಟೇ ಪಕ್ಕಾ. ಇಂತಹ ತಂಡದ ಜತೆಗೆ ವರ್ಷಕ್ಕೆ ಹತ್ತಿಪ್ಪತ್ತು ಸಿನಿಮಾಗಳನ್ನು ಮಾಡಬಹುದು. ಸಿನಿಮಾವನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಿದ್ದೇವೆ ಎನ್ನುವ ಮಾತು ಸೇರಿಸಿದರು.

ನಿರ್ದೇಶಕ ಶಿವಗಣೇಶ್, ರವಿಚಂದ್ರನ್‌ ಅವರ ಜತೆಗೆ ಸಿನಿಮಾ ಮಾಡುವುದೇ ಒಂದು ಅದ್ಭುತ ಅನುಭವ ಮತ್ತು ಹೆಮ್ಮೆ ಕೂಡ ಹೌದು. ಇದೊಂದು ಸೈಕೋಪಾತ್, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಸಿನಿಮಾ. ಪ್ರೇಕ್ಷಕರಿಗೆ ಕ್ಷಣಕ್ಷಣಕ್ಕೂಕುತೂಹಲ ಮೂಡಿಸುತ್ತದೆ ಎಂದರು.

‘ಇದು ನಮ್ಮ ಮೊದಲ‌ ಸಿನಿಮಾ. ಅದರಲ್ಲೂ ರವಿಚಂದ್ರನ್‌ ಅವರ ಜತೆಗೆ ನಟಿಸಲು ಸಿಕ್ಕಿದ ಅವಕಾಶ ನಮ್ಮ ಪಾಲಿನ ಸುವರ್ಣ ಅವಕಾಶ. ನಮ್ಮ ಕನಸುಗಳು ನನಸಾಗಿವೆ. ಪ್ರೇಕ್ಷಕರು ಕುರ್ಚಿಯ ತುದಿಯಲ್ಲಿ ಕುಳಿತು ನೋಡುವಂತೆ ಈ ಸಿನಿಮಾ ಮಾಡಲಿದೆ. ಎಲ್ಲರಿಗೂ ಇಷ್ಟವಾಗುವುದು ಖಚಿತ’ ಎನ್ನುವುದುನಟಿಯರಾದ ನಿಸರ್ಗ ಮತ್ತುಚೈತ್ರಾ ಅವರ ವಿಶ್ವಾಸದ ನುಡಿ.

ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಡದ ಯಶ್‌ ಶೆಟ್ಟಿ, ‘ಈ ಸಿನಿಮಾದಲ್ಲಿ ಒಂದು ಒಳ್ಳೆಯ ಪಾತ್ರ ಸಿಕ್ಕಿದೆ. ನನ್ನ ಪಾತ್ರದ ಬಗ್ಗೆ ಸಣ್ಣ ಮಾಹಿತಿ ನೀಡಿದರೂ ಸಿನಿಮಾ ಕಥೆ ತೆರೆದುಕೊಳ್ಳುತ್ತದೆ. ಹಾಗಾಗಿಯೇ ಪೋಸ್ಟರ್‌, ಟೀಸರ್‌ನಲ್ಲೂ ನಾನು ಕಾಣಿಸಿಕೊಂಡಿಲ್ಲ’ ಎಂದರು.

ಗೌತಮ್ ಶ್ರೀವತ್ಸಸಂಗೀತ ನಿರ್ದೇಶನ, ವಿನೋದ್‌ ಭಾರತಿ ವಿ. ಛಾಯಾಗ್ರಹಣ ಮಾಡಿದ್ದಾರೆ.ಸಾಹಿತ್ಯ ಡಾ.ವಿ.ನಾಗೇಂದ್ರ ಪ್ರಸಾದ್, ಸಂಭಾಷಣೆ ಮೃಗಶಿರ ಶ್ರೀಕಾಂತ್‌ ರಚಿಸಿದ್ದಾರೆ.ಅರ್ಜುನ್, ಸಾಗರ್, ರಕ್ಷಿತ್, ಗಿರೀಶ್, ರಾಹುಲ್ ಐನಾಪುರ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.