ಗುಂಡ್ಲುಪೇಟೆ/ ಮೈಸೂರು: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕುಂಡಿ ಬಳಿ ಶನಿವಾರ ಸಂಜೆ ಬೈಕ್ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ, ಚಲನಚಿತ್ರ ನಿರ್ಮಾಪಕಿ ದಿವಂಗತ ಪಾರ್ವತಮ್ಮ ರಾಜ್ಕುಮಾರ್ ಅವರ ಕಿರಿಯ ಸಹೋದರ ಎಸ್.ಎ.ಶ್ರೀನಿವಾಸ್ ಅವರ ಪುತ್ರ, ಉದಯೋನ್ಮುಖ ನಟ ಸೂರಜ್ ಅವರ ಬಲಗಾಲಿಗೆ ತೀವ್ರ ಗಾಯವಾಗಿದೆ.
ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರಿನ ಸರಸ್ವತಿಪುರಂ ನಿವಾಸಿ 24 ವರ್ಷದ ಸೂರಜ್, ಒಬ್ಬರೇ ಬುಲೆಟ್ನಲ್ಲಿ ತಮಿಳುನಾಡುವ ಪ್ರವಾಸ ಮುಗಿಸಿ ಮೈಸೂರಿಗೆ ಹಿಂತಿರುಗುವಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಬಲಗಾಲಿನ ಮೊಣ ಕಾಲು ಹಾಗೂ ತೊಡೆಯ ಭಾಗದಲ್ಲಿ ತೀವ್ರ ಜಜ್ಜಿದಂತಾಗಿದೆ. ಹೀಗಾಗಿ, ವೈದ್ಯರ ಸಲಹೆಯಂತೆ ಕಾಲನ್ನು ತೊಡೆವರೆಗೆ ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಟ ಶಿವರಾಜ್ ಕುಮಾರ್, ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್, ನಿರ್ಮಾಪಕ ಚಿನ್ನೇಗೌಡ, ಸಂಬಂಧಿ ಗೋವಿಂದರಾಜು, ಆಸ್ಪತ್ರೆಗೆ ಭೇಟಿ ನೀಡಿ ಸೂರಜ್ ಆರೋಗ್ಯ ವಿಚಾರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.