ADVERTISEMENT

ಪುನೀತ್‌ ಭಾವಚಿತ್ರದ ಮುಂದೆ ಶಾಂಪೇನ್‌ ಬಾಟಲಿ: ಕ್ಷಮೆಯಾಚಿಸಿದ ರಚಿತಾ ರಾಮ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 11:06 IST
Last Updated 13 ನವೆಂಬರ್ 2021, 11:06 IST
ಬೆಂಗಳೂರಿನ ತಾಜ್‌ ವೆಸ್ಟ್ ಎಂಡ್‌ ಹೋಟೆಲ್‌ನಲ್ಲಿ ಏಕ್‌ಲವ್‌ ಯಾ ಚಿತ್ರದ ‘ಎಣ್ಣೆಗೂ ಹೆಣ್ಣಿಗೂ....’ ಹಾಡು ಬಿಡುಗಡೆ ವೇಳೆ ಕಂಡುಬಂದ ದೃಶ್ಯ
ಬೆಂಗಳೂರಿನ ತಾಜ್‌ ವೆಸ್ಟ್ ಎಂಡ್‌ ಹೋಟೆಲ್‌ನಲ್ಲಿ ಏಕ್‌ಲವ್‌ ಯಾ ಚಿತ್ರದ ‘ಎಣ್ಣೆಗೂ ಹೆಣ್ಣಿಗೂ....’ ಹಾಡು ಬಿಡುಗಡೆ ವೇಳೆ ಕಂಡುಬಂದ ದೃಶ್ಯ   

ಪುನೀತ್‌ ಭಾವಚಿತ್ರದ ಮುಂದೆ ‘ಏಕ್‌ ಲವ್‌ಯಾ’ ಚಿತ್ರತಂಡ ಶಾಂಪೇನ್‌ ಬಾಟಲಿ ಹಿಡಿದು ಸಂಭ್ರಮಿಸಿದ್ದಕ್ಕೆ ನಿರ್ಮಾಪಕ ಸಾ.ರಾ. ಗೋವಿಂದು ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರತಂಡ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಚಿತ್ರದ ನಾಯಕಿ ರಚಿತಾ ರಾಮ್‌ ಕ್ಷಮೆ ಯಾಚಿಸಿದ್ದು, ಅಪ್ಪು ಅವರನ್ನುಅವಮಾನಿಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರಿನ ತಾಜ್‌ ವೆಸ್ಟ್ ಎಂಡ್‌ ಹೋಟೆಲ್‌ನಲ್ಲಿ ಏಕ್‌ಲವ್‌ ಯಾ ಚಿತ್ರದ ‘ಎಣ್ಣೆಗೂ ಹೆಣ್ಣಿಗೂ....’ ಹಾಡು ಬಿಡುಗಡೆ ನಡೆದಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಪುನೀತ್‌ ಅವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸಲಾಗಿತ್ತು. ಬಳಿಕ ಅದೇ ವೇದಿಕೆಯಲ್ಲಿ ಚಿತ್ರದ ಹಾಡು ಬಿಡುಗಡೆಗೂ ಮುನ್ನ ಶಾಂಪೇನ್‌ ಬಾಟಲ್‌ ತೆರೆದು ನಟಿಯರಾದ ರಚಿತಾರಾಮ್‌, ರಕ್ಷಿತಾ, ಗಾಯಕಿ ಮಂಗ್ಲಿ, ನಿರೂಪಕ ಅಕುಲ್ ಬಾಲಾಜಿ, ರಾಣಾ, ನಿಶ್ವಿಕಾ ನಾಯ್ಡು, ಸಂಭ್ರಮಿಸಿದ್ದರು. ಈ ವರ್ತನೆ ಟೀಕೆಗೆ ಗುರಿಯಾಗಿದೆ.

ಪುನೀತ್‌ ಸಾರಿದ ಆದರ್ಶಗಳಿಗೆ ವಿರುದ್ಧವಾಗಿ ಚಿತ್ರತಂಡ ನಡೆದುಕೊಂಡಿದೆ ಎಂದು ‘ಅಪ್ಪು’ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಮ್ಮ ಚಿತ್ರರಂಗದವರೇ ಇಂಥ ಕೆಲಸ ಮಾಡಿದರೆ ನಾವು ಯಾರ ಮೇಲೆ ಆಪಾದನೆ ಮಾಡಲಿ. ದಯವಿಟ್ಟು ಇಂಥದ್ದನ್ನೆಲ್ಲ ಮಾಡಬೇಡಿ. ಪುನೀತ್ ಇಂದು ನಮ್ಮಿಂದ ದೂರವಾಗಿರಬಹುದು. ಆದರೆ ಅವರಿಗೆ ಅವಮಾನ ಆಗುವಂತಹ ಕೆಲಸ ಮಾಡಬೇಡಿ. ಪುನೀತ್‌ ಅವರಿಗೆ ಅವಮಾನ ಆಗುವಂತೆ ನಮ್ಮ ಚಿತ್ರರಂಗದವರು ನಡೆದುಕೊಂಡಿರುವುದರಿಂದ ನಾವೆಲ್ಲರೂ ತಲೆ ತಗ್ಗಿಸುವಂತೆ ಆಗಿದೆ’ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ.

‘ಏಕ್ ಲವ್ ಯಾ’ ಚಿತ್ರತಂಡದವರು ಪುನೀತ್ ಅಭಿಮಾನಿಗಳಲ್ಲಿ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಸಾ.ರಾ. ಗೋವಿಂದು ಆಗ್ರಹಿಸಿದ್ದಾರೆ.

ಪ್ರೇಮ್‌ ಸ್ಪಷ್ಟನೆ: ‘ಹಾಡು ಬಿಡುಗಡೆ ವೇಳೆ ತಪ್ಪಿನಿಂದಾಗಿ ಹಿಂಬದಿಯ ಎಲ್​ಇಡಿಯಲ್ಲಿ ಪುನೀತ್​ ಅವರ ಫೋಟೋ ಬಂತು. ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಾವು ಹಾಡು ಪ್ಲೇ ಮಾಡಿದ್ದೆವು. ಈಗ ಶಾಂಪೇನ್‌ ಬಾಟಲ್‌ ತೆರೆದದ್ದನ್ನೇ ಯಾಕೆ ದೊಡ್ಡದು ಮಾಡುತ್ತಿದ್ದಾರೋ ಗೊತ್ತಿಲ್ಲ. ಏನೇ ಮಾಡಿದರೂ ನನ್ನ ಒಳ್ಳೆಯದಕ್ಕೆ ಮಾಡಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ. ಗೊತ್ತಿಲ್ಲದೇ ನಡೆದ ತಪ್ಪಿಗಾಗಿ ಕೊನೆವರೆಗೂ ಕ್ಷಮೆ ಕೇಳುತ್ತೇನೆ’ ಎಂದು ಚಿತ್ರದ ನಿರ್ದೇಶಕ ಪ್ರೇಮ್​ ಹೇಳಿದ್ದಾರೆ.

ಉದ್ದೇಶಪೂರ್ವಕ ಅಲ್ಲ: ‘ಶಾಂಪೇನ್‌ ಬಾಟಲಿಯನ್ನು ಅಪ್ಪು ಅವರನ್ನು ಅವಮಾನಿಸುವ ಉದ್ದೇಶದಿಂದ ತೆರೆದಿಲ್ಲ. ಅದು ಆಲ್ಕೋಹಾಲ್‌ ಆಗಿರಲಿಲ್ಲ. ಇದನ್ನು ಅಕುಲ್‌ ಬಾಲಾಜಿ ಅವರೇ ವೇದಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಅಭಿಮಾನಿಗಳಿಗೆ ಬೇಸರ ಆಗಿದ್ದರೆ ಕ್ಷಮೆಯಾಚಿಸುತ್ತೇವೆ. ಶಾಂಪೇನ್‌ ಬಾಟಲ್‌ ತೆರೆದ ವೇಳೆ ತಾಂತ್ರಿಕ ಸಮಸ್ಯೆಯಿಂದ ಹಿಂಬದಿಯ ಎಲ್‌ಇಡಿ ಪರದೆಯಲ್ಲಿ ಅಪ್ಪು ಅವರ ಫೋಟೋ ಮೂಡಿದೆ. ಅಪ್ಪು ಯಾವತ್ತೂ ನಮ್ಮ ಮನಸ್ಸಿನಲ್ಲಿದ್ದಾರೆ’ ಎಂದರು.

ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ರಕ್ಷಿತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.