
ನಟ ರಣಬೀರ್ ಕಪೂರ್
ಆಧಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ‘ ಇತ್ತೀಚೆಗಿನ ತಮ್ಮ ನೆಚ್ಚಿನ ಚಿತ್ರವಾಗಿದೆ’ ಎಂದು ನಟ ರಣಬೀರ್ ಕಪೂರ್ ಹೇಳಿದ್ದಾರೆ.
ಧುರಂಧರ್ ಸಿನಿಮಾ 2025ರ ಡಿಸೆಂಬರ್ 5ರಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಅಕ್ಷಯ್ ಖನ್ನಾ, ಆರ್ ಮಾಧವನ್, ಸಂಜಯ್ ದತ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಹಾಗೂ ರಾಕೇಶ್ ಬೇಡಿ ಸೇರಿದಂತೆ ಇತರರು ನಟಿಸಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ₹1,000 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಒಂದೇ ಭಾಷೆಯಲ್ಲಿ (ಹಿಂದಿ) ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿದೆ.
ರಣಬೀರ್ ಕಪೂರ್ ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಸಂವಾದದಲ್ಲಿ, ಧುರಂಧರ್ ಸಿನಿಮಾ ಹಾಗೂ ಪಾತ್ರಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ‘ನಾನು ಇತ್ತೀಚೆಗೆ ನೋಡಿದ ನೆಚ್ಚಿನ ಚಿತ್ರ ‘ಧುರಂಧರ್’. ಸಿನಿಮಾ ನನಗೆ ತುಂಬ ಇಷ್ಟವಾಯಿತು. ಸಿನಿಮಾದಲ್ಲಿ ಪ್ರತಿ ಪಾತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ ತೋರಿಸಲಾಗಿದೆ. ನನ್ನ ನೆಚ್ಚಿನ ಹಾಡುಗಳಲ್ಲಿ ಧುರಂಧರ್ ಚಿತ್ರದ ಹಾಡು ಸೇರಿವೆ’ ಎಂದು ಹೇಳಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಕಪೂರ್, ತಮ್ಮ ಮುಂಬರುವ ಚಿತ್ರಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. 3 ವರ್ಷಗಳ ನಂತರ ದೀಪಾವಳಿಗೆ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರ ಬಿಡುಗಡೆಯಾಗಲಿದೆ. ಬಳಿಕ ‘ಲವ್ ಅಂಡ್ ವಾರ್’ ಸಿನಿಮಾ ಬಿಡುಗಡೆಯಾಗಲಿದೆ. ಈ ಎರಡು ಚಿತ್ರಗಳಿಗಾಗಿ ತುಂಬಾ ಶ್ರಮಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮುಂಬರುವ ರಾಮಾಯಣ ಚಿತ್ರದಲ್ಲಿ ಕಪೂರ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ನಟ ಯಶ್ ರಾವಣನ ಪಾತ್ರದಲ್ಲಿ, ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಹಾಗೂ ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದಾರೆ. ಲವ್ ಅಂಡ್ ವಾರ್ ಸಿನಿಮಾದಲ್ಲಿ ಆಲಿಯಾ ಭಟ್ ಮತ್ತು ವಿಕಿ ಕೌಶಲ್ ನಟಿಸಿದ್ದಾರೆ.
‘ಇತರರು ಸಿನಿಮಾ ಚಿತ್ರೀಕರಣವನ್ನು 4 ರಿಂದ 6 ತಿಂಗಳಲ್ಲಿ ಮುಗಿಸುತ್ತಾರೆ. ಆದರೆ ನನ್ನ ಸಿನಿಮಾಗಳು ಬಹಳ ಸಮಯ ತೆಗೆದುಕೊಳ್ಳುತ್ತವೆ. ಸಿನಿಮಾ ಬಿಡುಗಡೆಯಾದಾಗ ಪ್ರೇಕ್ಷಕರು ನಾನು ಚಿತ್ರೀಕರಣಕ್ಕೆ ತೆಗೆದುಕೊಂಡ ಸಮಯವನ್ನು ಮರೆತುಬಿಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಕಳೆದ ಎರಡು ಮೂರು ವರ್ಷಗಳಿಂದ ಮಾಡುತ್ತಿರುವ ಸಿನಿಮಾಗಳಿಗೆ ಹೆಚ್ಚು ಶ್ರಮಿಸಿದ್ದೇನೆ. ನಾನು ಸಿನಿಮಾದ ಬಗ್ಗೆ ನಿಮಗೆ ಭರವಸೆ ನೀಡುತ್ತೇನೆ’ ಎಂದು ಹೇಳಿದ್ದಾರೆ.
ಮುಂಬರುವ ಚಿತ್ರಗಳಾದ ‘ಬ್ರಹ್ಮಾಸ್ತ್ರ’ ಮತ್ತು ‘ಅನಿಮಲ್ 2’ ಸಿನಿಮಾಗಳ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭ ಮಾಡಲಿದ್ದೇವೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.