ನವದೆಹಲಿ:ಬಾಲಿವುಡ್ನಲ್ಲಿ ಮುನ್ನಾ ಭಾಯಿ ಎಂಬಿಬಿಎಸ್ ಮೂಲಕ ವಿಭಿನ್ನವಾಗಿ ಸುದ್ದಿ ಮಾಡಿದ್ದವರು ನಟ ಸಂಜಯ ದತ್. ಈಗ ಸಂಜಯ್ ದತ್ ಅವರ ಜೀವನವನ್ನೇ ಆಧರಿಸಿದ ಚಿತ್ರ ‘ಸಂಜು’ ಇಂದು(ಶುಕ್ರವಾರ ಜೂನ್ 29) ತೆರೆಕಂಡಿದೆ.
ರಣಬೀರ್ ಕಪೂರ್ ಸೇರಿದಂತೆ ಹಲವು ಪ್ರಮುಖ ನಟ, ನಟಿಯರು ಅಭಿನಯಿಸಿರುವ‘ಸಂಜು’ಚಿತ್ರ ವಿಶ್ವದಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ತೆರೆ ಮೇಲೆ ಬಂದಿದೆ.
15 ವರ್ಷಗಳ ಹಿಂದೆ ಮುನ್ನಾ ಭಾಯಿ ಎಂಬಿಬಿಎಸ್ ಚಿತ್ರ ನಿರ್ದೇಶಿಸಿದ್ದ ರಾಜ್ ಕುಮಾರ್ ಹಿರಾನಿ ಅವರೇ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಈ ಚಿತ್ರ ಸಂಜಯ್ ದತ್ ಅವರ ಜೀವನ ಮತ್ತು ಅವರ ಸುತ್ತಲಿನ ವಿವಾದಗಳನ್ನು ಆಧರಿಸಿದೆ.
ಪರೇಶ್ ರಾವಲ್, ಮನೀಶಾ ಕೊಯಿರಾಲಾ, ದಿಯಾ ಮಿರ್ಜಾ, ವಿಕಿ ಕೌಶಲ್, ಸೋನಮ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಕರಿಶ್ಮಾ ತನ್ನಾ ಸಹ ‘ಸಂಜು’ ಚಿತ್ರದಲ್ಲಿ ನಟಿಸಿದ್ದಾರೆ.
ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ ‘ಸಂಜು’ ಚಿತ್ರ ತೆರೆ ಮೇಲೆ ಬರುವ ಮುನ್ನವೇ ಸಾಕಷ್ಟು ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿತ್ತು. ಈ ಮೂಲಕ ಚಿತ್ರ ಉತ್ತಮ ಗಳಿಕೆ ಮಾಡಲಿದೆ ಎಂಬುದು ಸಿನಿ ಮಂದಿಯ ಲೆಕ್ಕಾಚಾರ.
ಬಾಗಿ 2, ಪದ್ಮಾವತ್, ರೇಸ್ 3 ಮತ್ತು ರೈಡ್ ಸೇರಿದಂತೆ 2018ರಲ್ಲಿ ತೆರೆಕಂಡ ಚಿತ್ರಗಳ ಆರಂಭದ ದಿನಗಳ ದಾಖಲೆಯನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಲಾಗಿದೆ.
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ‘ಸಂಜು’ ಆರಂಭಿದ ದಿನದ ಸಂಗ್ರಹ ಸುಮಾರು 30 ಕೋಟಿ ತಲುಪಬಹುದು. ಈ ಮೊತ್ತವನ್ನು ಗಳಿಸಿದರೆ ಅದು ರಣಬೀರ್ ಕಪೂರ್ ಅವರ ಬಾಲಿವುಡ್ ವೃತ್ತಿಜೀವನವನ್ನೇ ಬದಲಿಸುತ್ತದೆ ಎಂದು ಹೇಳಿದ್ದಾರೆ.
‘ರಾಜ್ ಕುಮಾರ್ ಹಿರಾನಿ ಅವರು ‘ಸಂಜು’ ಚಿತ್ರವನ್ನು ಪ್ರೀತಿಯಿಂದ ಕಟ್ಟಿಕೊಟ್ಟಿದ್ದಾರೆ. ಯುವಜನ ಹೋಗಿ ನೋಡಿ’ ಎಂದು ಅನುಷ್ಕಾ ಶರ್ಮಾ ಟ್ವೀಟ್ ಮಾಡಿದ್ದಾರೆ.
* ಇದನ್ನೂ ಓದಿ...
* ‘ಸಂಜು’ಗೆ ಮುಂಗಡ ಬುಕ್ಕಿಂಗ್;ಸಂಜಯ್ ದತ್, ರಾಜ್ ಕುಮಾರ್ ಹಿರಾನಿ ಜೀವನ ಬದಲಿಸಿದ ಚಿತ್ರ ಮುನ್ನಾ ಭಾಯಿ ಎಂಬಿಬಿಎಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.