ಬೆಂಗಳೂರು: ಜಲೀಲ, ಕನ್ವರ್, ಕರ್ಣ ಹೀಗೆ ಹಲವು ಪಾತ್ರಗಳಿಗೆ ಜೀವ ತುಂಬಿದ ‘ಮಂಡ್ಯದ ಗಂಡು’ ದಿವಂಗತ ನಟ ಅಂಬರೀಷ್ ಅವರ 69ನೇ ಜನ್ಮದಿನದಂದು, ನಟ ದರ್ಶನ್, ಸುದೀಪ್ ಸೇರಿದಂತೆ ಹತ್ತಾರು ಕಲಾವಿದರು ಹಾಗೂ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ನೆನಪಿಸಿಕೊಂಡಿದ್ದಾರೆ.
ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಅಂಬರೀಷ್ ಅವರ ಸಮಾಧಿಗೆ ಸುಮಲತಾ ಹಾಗೂ ಅಂಬರೀಷ್ ಅವರ ಪುತ್ರ, ನಟ ಅಭಿಷೇಕ್ ಶನಿವಾರ ಪೂಜೆ ಸಲ್ಲಿಸಿದರು. ‘ಅಂಬರೀಷ್ ಅವರು ಬದುಕಿದ್ದಾಗ, ಅವರ ಜನ್ಮದಿನದಂದು ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಜನರು ಮನೆಗೆ ಬಂದು ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಅಂಬರೀಷ್ ಅವರು ಅಗಲಿದ ಬಳಿಕ, ನಾವೇ ಮಂಡ್ಯಕ್ಕೆ ಹೋಗಿ ಅವರ ಅಭಿಮಾನಿಗಳ ಸಮ್ಮುಖದಲ್ಲಿ ಜನ್ಮದಿನ ಆಚರಿಸುತ್ತಿದ್ದೇವೆ. ಅಂಬರೀಷ್ ಅವರು ಜನರ ಹೃದಯದಲ್ಲಿ ಎಂದೆಂದೂ ಇರುತ್ತಾರೆ. ಅವರ ಜೀವನ ಹಲವಾರು ಜನಕ್ಕೆ ಸ್ಫೂರ್ತಿ ನೀಡಿದೆ’ ಎಂದು ಸುಮಲತಾ ಹೇಳಿದರು.
‘ಅಂಬರೀಷ್ ಅವರ ಜನ್ಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ಅಭಿಮಾನಿಗಳೆಲ್ಲರೂ ಆಸೆ ಇದೆ. ಆದರೆ ಕೊರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡ. ಈ ವರ್ಷ ಅವರನ್ನು ನಮ್ಮ ಮನಸ್ಸು, ಮನೆಗಳಲ್ಲೇ ಆಚರಿಸೋಣ’ ಎಂದು ಸುಮಲತಾ ಟ್ವಿಟರ್ ಮೂಲಕ ಅಭಿಮಾನಿಗಳಿಗೆ ಕರೆ ನೀಡಿದ್ದರು.
‘ಅಪ್ಪಾಜಿಯ ಸವಿನೆನಪು’: ಅಂಬರೀಷ್ ಅವರನ್ನು ನೆನೆಸಿಕೊಂಡಿರುವ ನಟ ದರ್ಶನ್, ‘ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿನೆನಪು. ಅವರ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ ನಮ್ಮ ನೆಚ್ಚಿನ ಮಂಡ್ಯದ ಗಂಡು’ ಎಂದು ಟ್ವಿಟರ್ನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಅಂಬರೀಷ್ ಅವರ ಜೊತೆಗೆ ಕಾರಿನಲ್ಲಿ ಕುಳಿತಿರುವ ಫೊಟೊವನ್ನೂ ದರ್ಶನ್ ಅಪ್ಲೋಡ್ ಮಾಡಿದ್ದಾರೆ.
‘ಮಾಮ. ನಿಮ್ಮನ್ನು ನಿಜವಾಗಿಯೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ನಟ ಸುದೀಪ್ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ನಟರಾದ ಶ್ರೀಮುರುಳಿ, ಧನಂಜಯ್ ಹೀಗೆ ಹತ್ತಾರು ಕಲಾವಿದರು ಅಂಬರೀಷ್ ಅವರನ್ನು ನೆನಪಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.