ADVERTISEMENT

ಅನುಗೆ ಅಮ್ಮನ ಸುಳಿವು ನೀಡಿದ ಉಂಗುರ

​ಪ್ರಜಾವಾಣಿ ವಾರ್ತೆ
Published 11 ಮೇ 2019, 16:33 IST
Last Updated 11 ಮೇ 2019, 16:33 IST
ಪೋಷಕ ನಟಿ ಗಾಯತ್ರಿ ಪ್ರಭಾಕರ್‌ ಮತ್ತು ನಟಿ ಅನು ಪ್ರಭಾಕರ್
ಪೋಷಕ ನಟಿ ಗಾಯತ್ರಿ ಪ್ರಭಾಕರ್‌ ಮತ್ತು ನಟಿ ಅನು ಪ್ರಭಾಕರ್   

‘ನಾನು ಒಳ್ಳೆಯ ಹುಡುಗಿ ಎನಿಸಿಕೊಳ್ಳಲು ಅಮ್ಮನೇ ಕಾರಣ. ನನ್ನ ಪ್ರತಿಯೊಂದು ಯಶಸ್ಸಿನ ಹೆಜ್ಜೆಯ ಹಿಂದೆ ಅವರ ಪರಿಶ್ರಮವಿದೆ. ಆಕೆಯೊಂದಿಗೆ ಇರುವ ಪ್ರತಿಕ್ಷಣವೂ ನನಗೆ ಮಧುರವಾದುದು. ಅವರಿಲ್ಲದ ನನ್ನ ಸಿನಿಮಾ ಬದುಕು ಅಪೂರ್ಣ’ ಎಂದು ಒಂದೇ ಉಸಿರಿಗೆ ಹೇಳಿ ನಕ್ಕರು ನಟಿ ಅನು ಪ್ರಭಾಕರ್‌.

ಅದು ‘ಸಾಗುತ ದೂರ ದೂರ’ ಚಿತ್ರದಲ್ಲಿನ ಅಮ್ಮನ ಬಗೆಗಿನ ರ‍್ಯಾಪ್ ಸಾಂಗ್‌ ಹಾಡಿನ ಬಿಡುಗಡೆ ಸಂದರ್ಭ. ಅನು ಹೇಳಿದ ಮಾತುಗಳಲ್ಲಿ ಅಮ್ಮನ ವಾತ್ಸಲ್ಯದ ಅಂತಃಕರಣ ಇತ್ತು. ಆ ನಡುವೆಯೇ ನಿರ್ದೇಶಕ ರವಿತೇಜ, ‘ನಿಮ್ಮನ್ನು ನೋಡಲು ಅಭಿಮಾನಿಯೊಬ್ಬರು ಇಲ್ಲಿಗೆ ಬಂದಿದ್ದಾರೆ. ಅವರು ನಿಮ್ಮೊಟ್ಟಿಗೆ ಸೆಲ್ಫಿ ತೆಗೆಸಿಕೊಳ್ಳಲು ಇಚ್ಛಿಸಿದ್ದಾರೆ’ ಎನ್ನುವ ಹೊತ್ತಿಗೆ ಮುಸುಕುಧಾರಿಯಾದ ಆ ಸೆಲ್ಫಿ ಅಭಿಮಾನಿಯೂ ಕುರ್ಚಿಯಿಂದ ಎದ್ದು ವೇದಿಕೆಯತ್ತ ಬಂದರು. ಅವರತ್ತ ಕುತೂಹಲದಿಂದಲೇ ನೋಡಿದರು ಅನು. ಕೊನೆಗೆ, ಅವರು ‘ನನ್ನ ಅಮ್ಮ...’ ಎಂದು ಗುರುತು ಹಿಡಿದುಬಿಟ್ಟರು.

ಗಾಯತ್ರಿ ಪ್ರಭಾಕರ್‌ ಅವರು ಧರಿಸಿದ್ದ ಉಂಗುರ ಅನು ಅವರ ನೆರವಿಗೆ ಬಂದಿತ್ತು. ಜೊತೆಗೆ, ಅದು ಚಿತ್ರತಂಡ ಕಾಯ್ದುಕೊಳ್ಳಲು ಯತ್ನಿಸಿದ ಗುಟ್ಟನ್ನು ಬಯಲುಗೊಳಿಸಿತ್ತು.

ADVERTISEMENT

‘ಕನಕಪುರದ ಬಳಿ ಸಿನಿಮಾವೊಂದರ ಶೂಟಿಂಗ್‌ನಲ್ಲಿದ್ದೆ. ಹೆರಿಗೆ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಮಗುವಿನ ಸ್ಪರ್ಶದಿಂದ ತಾಯಿ ಬದುಕುವ ದೃಶ್ಯ ಅದು. ನಿರ್ದೇಶಕರ ಕೋರಿಕೆ ಮೇರೆಗೆ ಅಲ್ಲಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ’ ಎಂದರು ಗಾಯತ್ರಿ ಪ್ರಭಾಕರ್.

ರವಿತೇಜ ನಿರ್ದೇಶನದಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ‘ಅಮ್ಮಂದಿರ ದಿನ’ದ ಅಂಗವಾಗಿ ತಾಯಂದಿರಿಗೆ ಚಿತ್ರತಂಡ ಈ ಹಾಡನ್ನು ಅರ್ಪಿಸಿತು. ಕದ್ರಿ ಮಣಿಕಾಂತ್‌ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು, ರಚನಾ ಸ್ಮಿತ್‌ ಹಾಡಿಗೆ ರ‍್ಯಾಪ್ ಸ್ಪರ್ಶ ನೀಡಿದ್ದಾರೆ. ‘ನಾಗಿಣಿ’ ಧಾರಾವಾಹಿಯಲ್ಲಿ ಅಮ್ಮ ಮತ್ತು ಮಗನಾಗಿ ಪ್ರಸಿದ್ಧಿಪಡಿಸಿರುವ ದೀಕ್ಷಿತ್‌ ಶೆಟ್ಟಿ ಮತ್ತು ಹರಿಣಿ ಈ ಹಾಡಿನಲ್ಲಿಯೂ ಅಮ್ಮ, ಮಗನಾಗಿಯೇ ಕಾಣಿಸಿಕೊಂಡಿರುವುದು ವಿಶೇಷ.

ಅಪೇಕ್ಷಾ

ನಟಿ ಅಪೇಕ್ಷಾ ಈ ಚಿತ್ರದ ನಾಯಕಿ. ‘ಅಮ್ಮಂದಿರ ದಿನದ ಅಂಗವಾಗಿ ಈ ಹಾಡನ್ನು ಬಿಡುಗಡೆಗೊಳಿಸುತ್ತಿರುವುದು ಖುಷಿಯಾಗುತ್ತಿದೆ’ ಎಂದು ಹೇಳಿಕೊಂಡರು.

ಲಹರಿ ಸಂಸ್ಥೆಯ ವೇಲು, ‘ಬದುಕಿದ್ದಾಗ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರು ನಮ್ಮಿಂದ ದೂರವಾದ ಬಳಿಕ ಗೋಡೆಯ ಮೇಲೆ ಫೋಟೊ ಹಾಕುವುದರಲ್ಲಿ ಅರ್ಥವಿಲ್ಲ’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.