ರಾಯಲಸೀಮೆಯ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನ ಚರಿತ್ರ ಆಧಾರಿತ ಸೈರಾ ನರಸಿಂಹ ರೆಡ್ಡಿ ಟಾಲಿವುಡ್ನಲ್ಲಿ ದಾಖಲೆ ಬರೆಯಲಿದೆ ಎನ್ನಲಾಗುತ್ತಿದೆ.
ಅದ್ದೂರಿ ಬಜೆಟ್ ಮತ್ತು ಬಹುತಾರಾಗಣದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ಅಪಾರ ನಿರೀಕ್ಷೆ ಹುಟ್ಟಿದೆ. ನಟ ರಾಮ್ ಚರಣ್ ನಿರ್ಮಾಣದ ಈ ಚಿತ್ರಕ್ಕೆ ಸುರೇಂದ್ರ ರೆಡ್ಡಿ ಅವರ ನಿರ್ದೇಶನವಿದೆ.
ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರಕ್ಕೆ ಚಿರಂಜೀವಿ ಜೀವ ತುಂಬಲಿದ್ದು, ಚಿತ್ರತಂಡ ಈಗಾಗಲೇ ಬಿಡುಗಡೆ ಮಾಡಿರುವ ಪೋಸ್ಟರ್ ಚಿರು ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿಸಿದೆ. ಸೋಸಾಯಿ ವೆಂಕಣ್ಣನಾಗಿ ಅಮಿತಾಭ್ ಬಚ್ಚನ್, ಅವುಕು ರಾಜನಾಗಿ ಸುದೀಪ್, ಓಬಯ್ಯನಾಗಿ ವಿಜಯ್ ಸೇತುಪತಿ, ಮೈರಾ ರೆಡ್ಡಿಯಾಗಿ ಜಗಪತಿ ಬಾಬು, ಸಿದ್ದಮ್ಮ ಪಾತ್ರದಲ್ಲಿ ನಯನತಾರಾ ಮತ್ತು ಲಕ್ಷ್ಮಿ ಪಾತ್ರದಲ್ಲಿ ತಮನ್ನಾ ಭಾಟಿಯಾ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದುದ್ದಕ್ಕೂ ನಟ ಅಲ್ಲು ಅರ್ಜುನ್ ನಿರೂಪಣೆ ಇರುವುದು ವಿಶೇಷ.
ಹಂತಹಂತವಾಗಿ ಒಬ್ಬೊಬ್ಬರ ಪಾತ್ರದ ಕುರಿತಾಗಿ ಚಿತ್ರ ತಂಡ ಟ್ವಿಟರ್ನಲ್ಲಿ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದು, ಪ್ರತಿ ಪಾತ್ರವೂ ವಿಶಿಷ್ಟವಾಗಿರುವ ಮುನ್ಸೂಚನೆ ನೀಡಿದೆ. ಈಚೆಗೆ ಬಿಡುಗಡೆಯಾದ ತಮನ್ನಾ ಪೋಸ್ಟರ್ ಅಂತೂ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ದೇಸಿ ಲುಕ್ನಲ್ಲಿರುವ ತಮನ್ನಾ ಪಾತ್ರದ ಬಗ್ಗೆ ಅಂತೆಕಂತೆಗಳ ಸುದ್ದಿಗಳು ಹರಿದಾಡುತ್ತಿವೆ.
ಲಕ್ಷ್ಮಿ ಪಾತ್ರದಲ್ಲಿ ತಮನ್ನಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ? ಅವರ ಪಾತ್ರದ ಅವಧಿ ಎಷ್ಟು? ತಮನ್ನಾ ಅಥವಾ ನಯನತಾರಾ ಇಬ್ಬರಲ್ಲಿ ಚಿರಂಜೀವಿಗೆ ಯಾರು ನಾಯಕಿ ಎನ್ನುವ ಕುರಿತು ಟಾಲಿವುಡ್ ಅಂಗಳದಲ್ಲಿ ಚರ್ಚೆಗಳಾಗುತ್ತಿವೆ. ಈ ಸಿನಿಮಾದ ಬಜೆಟ್ ಸುಮಾರು ₹ 300 ಕೋಟಿ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.