ADVERTISEMENT

ವಿಚ್ಛೇದನ ಘೋಷಣೆ ನಂತರ ಸಮಂತಾ ಮೊದಲ ಪೋಸ್ಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2021, 11:50 IST
Last Updated 7 ಅಕ್ಟೋಬರ್ 2021, 11:50 IST
ಸಮಂತಾ
ಸಮಂತಾ    

ಬೆಂಗಳೂರು: ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಅವರ ನಾಲ್ಕು ವರ್ಷದ ದಾಂಪತ್ಯ ಜೀವನ ಅಂತ್ಯಗೊಳಿಸಿಕೊಳ್ಳುವ ನಿರ್ಧಾರದ ನಂತರ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಹಾಕಿ ಸುಮ್ಮನಾಗಿದ್ದರು. ಮತ್ತೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ.

ಸಮಂತಾ ವಿಚ್ಚೇದನದ ನಂತರ ಮೊದಲ ಬಾರಿಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದು, ‘ಹಳೆಯ ಪ್ರೀತಿಯ ಹಾಡುಗಳು ಪರ್ವತಗಳ ಮೇಲಿನ ಚಳಿಗಾಲದ ತಂಗಾಳಿಯ ಶಬ್ದದಂತೆ, ಕಳೆದುಹೋದ ಸ್ಮೃತಿಪಟಲದ ಚಿತ್ರಗಳು ಮತ್ತು ಹಾಡುಗಳು ಕಣಿವೆಯಲ್ಲಿನ ಮೌನದ ಪ್ರತಿಧ್ವನಿಯಂತೆ,ಹಳೆಯ ಪ್ರೇಮಿಗಳ ಹಾಡುಗಳು ಹಳೆಯ ಬಂಗಲೆಗಳ, ಮೆಟ್ಟಿಲುಗಳ ಮತ್ತು ಗಲ್ಲಿಗಳಲ್ಲಿನ ಗಾಳಿಯ ಶಬ್ದದಂತೆ‘ ಎಂದು ಕಾವ್ಯಾತ್ಮಕವಾಗಿ ಮನದಾಳವನ್ನು ಹಂಚಿಕೊಂಡಿದ್ದಾರೆ.

ಈ ಮೂಲಕ ಸಮಂತಾ ನಾಗ ಚೈತನ್ಯ ಜೊತೆಗಿನ ಸಂಬಂಧವನ್ನು ಮರೆಯುವುದಿಲ್ಲ ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ADVERTISEMENT

ಕಳೆದ ಶನಿವಾರ ನಾಗ ಚೈತನ್ಯ ಹಾಗೂ ಖ್ಯಾತ ನಟಿ ಸಮಂತಾ ನಡುವಿನ ದಾಂಪತ್ಯ ಅಧಿಕೃತವಾಗಿ ಮುರಿದು ಬಿದ್ದಿತ್ತು. ವಿಚ್ಛೇದನಪಡೆಯುದಾಗಿ ತಾರಾ ಜೋಡಿಘೋಷಿಸಿತ್ತು.ಸ್ವತಃ ಈ ವಿಷಯವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದ ನಾಗ ಚೈತನ್ಯ, ‘ಹೆಚ್ಚು ಆಲೋಚನೆ ನಂತರ ಸಮಂತಾ ಮತ್ತು ನಾನು ನಮ್ಮ ಸ್ವಂತ ದಾರಿಯನ್ನು ಅನುಸರಿಸಲು ಹೆಜ್ಜೆ ಇಟ್ಟಿದ್ದೇವೆ. ಈ ಮೂಲಕ ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ‘ ಎಂದು ಘೋಷಿಸಿದ್ದರು.2017 ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಅದ್ಧೂರಿಯಾಗಿ ಮದುವೆಯಾಗಿದ್ದರು.

ಈ ವಿಷಯ ದಕ್ಷಿಣ ಭಾರತದ ಸಿನಿರಂಗದಲ್ಲಿ ದೊಡ್ಡ ಚರ್ಚೆಯಾಯಿತು. ಈ ವಿಚ್ಚೇದನಕ್ಕೆ ಏನು ಕಾರಣ? ಎಂಬುದು ಇದುವರೆಗೆ ಬಹಿರಂಗವಾಗಿಲ್ಲ.

‘ಫ್ಯಾಮಿಲಿ ಮ್ಯಾನ್‌’ ಚಿತ್ರದಲ್ಲಿ ಸಮಂತಾ ಮಾಡಿದ್ದ ಬೋಲ್ಡ್ ದೃಶ್ಯಗಳೇ ಸಂಸಾರದಲ್ಲಿನ ಬಿರುಕಿಗೆ ಕಾರಣ ಎಂದು ದೊಡ್ಡ ಚರ್ಚೆಯಾಗಿತ್ತು.ಆದರೆ, ಇದೀಗ ಸಮಂತಾ ಫ್ಯಾಶನ್ ಡಿಸೈನರ್ ಒಬ್ಬರ ಜೊತೆ ಇದ್ದ ಸಲುಗೆಯೇ ವಿಚ್ಚೇದನಕ್ಕೆ ಕಾರಣವಾಯಿತು ಎಂದು ಕೆಲ ನೆಟ್ಟಿಗರು ಸಾಮಾಜಿಕ ತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.