ADVERTISEMENT

ಸಂಗೀತಾ ಭಟ್, ಶ್ರುತಿ ಹರಿಹರನ್ ವಿರುದ್ಧ ಹರಿಹಾಯ್ದ ನಿರ್ದೇಶಕ ಗುರುಪ್ರಸಾದ್

#MeToo ಆರೋಪಕ್ಕೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 9:14 IST
Last Updated 30 ಅಕ್ಟೋಬರ್ 2018, 9:14 IST
   

ಬೆಂಗಳೂರು:‘ಅವಕಾಶಕ್ಕಾಗಿ ಮದುವೆಯ ವಿಷಯವನ್ನು ಮುಚ್ಚಿಟ್ಟು, ಈಗ ಹೊರಗೆ ಹಾಕುತ್ತಿರುವುದರ ಉದ್ದೇಶ ಏನು? ಇವರು ತಮ್ಮ ಪತಿ, ಅತ್ತೆ, ಮಾವ ಅವರ ಎದುರಿಗೆ ತಮ್ಮ ಪಾತಿವ್ರತ್ಯ ಸಾಬೀತುಮಾಡಲು ಹೊರಟಿದ್ದಾರೆಯೇ?’ಎಂದು ಪರೋಕ್ಷವಾಗಿ ಸಂಗೀತಾ ಭಟ್ ಮತ್ತು ಶ್ರುತಿ ಹರಿಹರನ್ ವಿರುದ್ಧ ನಿರ್ದೇಶಕ ಗುರುಪ್ರಸಾದ್ಹರಿಹಾಯ್ದರು. ಜತೆಗೆ, ನಟಿಯರನ್ನು ವಿಷಕನ್ಯೆಯರುಎಂದು ಜರಿದರು.

ಇಂದು ಬೆಂಗಳೂರಿನಲ್ಲಿ ಕುಷ್ಕ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಬಂದಿರುವ ಆರೋಪಗಳು ಗೊತ್ತು. ಆದರೂ ಮೌನವಹಿಸಿದ್ದೇನೆ. ಅದರ ಅರ್ಥ ನನಗೆ ಉತ್ತರ ಕೊಡಲು ಬರುವುದಿಲ್ಲ ಎಂದಲ್ಲ. ನಾವು ಗಂಡಸರು ಮಾತನಾಡಲು ಶುರುಮಾಡಿದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಆತಂಕದಿಂದ ಸುಮ್ಮನಿರುತ್ತೇವೆ’ಎಂದು ಕಿಡಿಕಾರಿದರು.

ಎರಡನೇ ಸಲ ಸಿನಿಮಾ ಬೆತ್ತಲೆ ಬೆನ್ನಿನ ದೃಶ್ಯ ಚಿತ್ರೀಕರಿಸುವಾಗ ನನ್ನ ಹೆಂಡತಿ ಮತ್ತು ಮಗಳು ಪಕ್ಕದಲ್ಲೇ ಇದ್ದರು. ನಾನು ಫೋಟೊ ಕಳಿಸಿ ಎಂದಾಗ ಅವರು ಎಂಥ ಫೋಟೊ ಕಳಿಸಿದ್ದರು ಎಂಬುದು ಇನ್ನೂ ನನ್ನ ಬಳಿ ಇದೆ. ಕೆಲವರು ಹೊರಗೆ ಹೋದರೆ ಚಿತ್ರರಂಗದ ಆರೋಗ್ಯ ಸುಧಾರಿಸುತ್ತದೆ. ಅವರು ಈಗ ಚಿತ್ರರಂಗದಿಂದ ದೂರ ಇದ್ದೇನೆ ಎಂದು ಹೇಳಿದ್ದಾರೆ. ಚೆನ್ನಾಗಿರಲಿ' ಎಂದು ಹೆಸರು ಹೇಳದೇ ಸಂಗೀತಾ ಭಟ್ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.

‘ಈ ಆರೋಪದಿಂದ ನನಗೆ ಯಾವ ನೋವೂ ಆಗಿಲ್ಲ. ಅಬ್ದುಲ್ ಕಲಾಂ ಅವರಂಥ ವ್ಯಕ್ತಿಗಳು ಬಂದು ನೀನು ಬದುಕುತ್ತಿರುವ ರೀತಿ ಸರಿ ಇಲ್ಲ ಎಂದು ಹೇಳಿದ್ರೆ ಆಗ ನನಗೆ ಚಪ್ಪಲಿಯಲ್ಲಿ ಹೊಡೆದ ಹಾಗೆ ಆಗುತ್ತದೆ. ಆದರೆ, ಯಾರೋ ಸಂಸ್ಕಾರ ಇಲ್ಲದವರು ಹೇಳಿದ ಮಾತಿಗೆಲ್ಲ ಯಾಕೆ ತಲೆಕೆಡಿಸಿಕೊಳ್ಳಲಿ. ಇವರೊಬ್ಬರೇ ಅಲ್ಲ; ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಹುಡುಗಿಯನ್ನೂ ಕರೆದುಕೊಂಡು ಬಂದು ನಾಯಕಿಯನ್ನಾಗಿ ಮಾಡಬಲ್ಲೆ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT