ಬೆಂಗಳೂರು: ಟಾಲಿವುಡ್ನ ಖ್ಯಾತ ನಟ ಪ್ರಿನ್ಸ್ ಮಹೇಶ್ ಬಾಬು ಮತ್ತು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರ ‘ಸರಿಲೇರು ನೀಕೆವ್ವರು’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಭಾನುವಾರ ಬಿಡುಗಡೆಯಾಗಿರುವ ಟೀಸರ್ ಅನ್ನು ಯೂಟ್ಯೂಬ್ನಲ್ಲಿ ಈ ವರೆಗೆ 9.71 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದು, ಟಾಪ್ ಟ್ರೆಂಡಿಂಗ್ನಲ್ಲಿದೆ.
‘ನಿನಗ್ಯಾರೂ ಸರಿಸಾಟಿಯಲ್ಲ‘ ಎಂಬುದು ‘ಸರಿಲೇರು ನೀಕೆವ್ವರು‘ ಎಂಬುದರ ಕನ್ನಡ ಅರ್ಥ. ಸೇನಾ ಮೇಜರ್ ಪಾತ್ರವನ್ನು ನಿಭಾಯಿಸುತ್ತಿರುವ ನಾಯಕನ ಸುತ್ತಲ ಕತೆಯನ್ನು ಈ ಸಿನಿಮಾ ವಿವರಿಸುತ್ತದೆ. ‘ಮೇಜರ್ ಅಜಯ್ ಕೃಷ್ಣ’ಎಂಬುದು ಸಿನಿಮಾದಲ್ಲಿ ಮಹೇಶ್ ಬಾಬು ಅವರ ಹೆಸರು.
ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶಿಸಿದ್ದಾರೆ. ನಿರ್ಮಾಪಕ ದಿಲ್ ರಾಜು, ಅನಿಲ್ ಸುಂಕರ ಅವರು ಸಿನಿಮಾಕ್ಕೆ ದುಡ್ಡು ಹಾಕಿದ್ದಾರೆ.
ಕನ್ನಡತಿ ರಶ್ಮಿಕಾ ಅವರು ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಒಟ್ಟು 5 ಹಾಡುಗಳಿವೆ. ರಶ್ಮಿಕಾ ಅವರದ್ದು ತೆಲುಗಿನಲ್ಲಿ ಇದು ಐದನೇ ಚಿತ್ರ.
ಹಿರಿಯ ನಟಿ ವಿಜಯಶಾಂತಿ ಅವರು ಕಾಲೇಜು ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ 11ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾ ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.