ADVERTISEMENT

ನೀನಾಸಂ ಸತೀಶ್ ಹೊಸ ಚಿತ್ರ ‘ದಸರಾ’

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 8:03 IST
Last Updated 23 ಜೂನ್ 2020, 8:03 IST
ಗೋದ್ರಾ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌ ಮತ್ತು ನೀನಾಸಂ ಸತೀಶ್‌
ಗೋದ್ರಾ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌ ಮತ್ತು ನೀನಾಸಂ ಸತೀಶ್‌   

ಮೂರು ದಿನಗಳ ಹಿಂದಷ್ಟೇ ನಟ ನೀನಾಸಂ ಸತೀಶ್‌ ಅವರು ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಕಾರಣ ಕೋವಿಡ್‌ 19 ಸೋಂಕು ಹರಡುವ ಆತಂಕ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.ಸತೀಶ್‌ ಅವರ ಇದುವರೆಗಿನ ವೃತ್ತಿ ಬದುಕಿನಲ್ಲೇ ಅತ್ಯಂತ ದೊಡ್ಡ ಬಜೆಟ್‌ ಸಿನಿಮಾ ‘ಗೋದ್ರಾ’. ಈ ಚಿತ್ರದ ವಿಶೇಷ ಟೀಸರ್‌ ಅನ್ನು ಚಿತ್ರತಂಡ ಸತೀಶ್‌ ಜನ್ಮದಿನದ ಕಾಣಿಕೆಯಾಗಿ ಬಿಡುಗಡೆ ಮಾಡಿದೆ.

ಚಿತ್ರದ ವಿಶೇಷ ಸ್ಟಿಲ್ಸ್‌ ಬಳಸಿ ರೂಪಿಸಿರುವ ಒಂದು ನಿಮಿಷ ಅವಧಿಯ ಟೀಸರ್‌ ಚಿತ್ರರಸಿಕರಿಗೆ ಈ ಚಿತ್ರದ ಬಗ್ಗೆ ಕುತೂಹಲವನ್ನು ಇಮ್ಮಡಿಗೊಳಿಸುವಂತಿದೆ.

ವ್ಯವಸ್ಥೆಯಲ್ಲಿ ನಡೆಯುವ ಶೋಷಣೆ ವಿರುದ್ಧ ಬಂಡೆದ್ದು ಹೋರಾಟಗಾರನಾದವನ ಕಥೆಯನ್ನು ‘ಗೋದ್ರಾ’ಬಿಚ್ಚಿಡಲಿದೆಯಂತೆ. ಈ ಚಿತ್ರದ ಮಾತಿನ ಲೇಪನ (ಡಬ್ಬಿಂಗ್‌) ಮುಗಿದಿದೆ. ಚಿತ್ರದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆಯಂತೆ. ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಾಗಿ ನೀನಾಸಂ ಸತೀಶ್‌ ಮತ್ತು ಶ್ರದ್ಧಾ ಶ್ರೀನಾಥ್‌ ಕಾಣಿಸಿಕೊಂಡಿದ್ದಾರೆ.ಸತೀಶ್‌ ಅವರದ್ದು ಕ್ರಾಂತಿಕಾರಿ ಸುಭಾಷ್‌ ಪಾತ್ರ. ಈತನ ಸಹಪಾಠಿ ಮತ್ತು ಪ್ರೇಮಿಯಾಗಿ ಶ್ರದ್ಧಾ ಕಾಣಿಸಿಕೊಂಡಿದ್ದು,ನಾಯಕನಿಗೆ ಸರಿಸಮಾನ ಪಾತ್ರ ಇವರದ್ದು. ರಾಜಕಾರಣಿಯ ಪಾತ್ರದಲ್ಲಿ ಅಚ್ಯುತ್‌ ಕುಮಾರ್‌ ಹಾಗೂ ಪೈಲಟ್‌ ಪಾತ್ರದಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ.

ADVERTISEMENT

ಜಾಕೋಬ್‌ ಫಿಲಮ್ಸ್‌ ಮತ್ತು ಲೀಡರ್‌ ಫಿಲ್ಮ್‌ ಪ್ರೊಡಕ್ಷನ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಕೆ.ಎಸ್‌.ನಂದೀಶ್‌ ಅವರದ್ದು.ಜಬೇಜ್‌ ಕೆ.ಗಣೇಶ್‌ ಛಾಯಾಗ್ರಹಣ ಮಾಡಿದ್ದಾರೆ.

ಟೈಟಲ್‌ ಬದಲಾವಣೆ:ನೀನಾಸಂ ಸತೀಶ್‌ ಅವರ ಹೊಸ ಚಿತ್ರ ‘ವೈತರಣಿ’ಯ ಟೈಟಲ್‌ ‘ದಸರಾ’ ಎಂಬುದಾಗಿ ಬದಲಿಸಿದ್ದು, ಚಿತ್ರದ ಫಸ್ಟ್‌ಲುಕ್‌ ಅನ್ನು ಸತೀಶ್‌ ಅವರ ಜನ್ಮದಿನದ ಕಾಣಿಕೆಯಾಗಿ ಚಿತ್ರತಂಡ ಬಿಡುಗಡೆ ಮಾಡಿದೆ.

ಈ ಚಿತ್ರಕ್ಕೆ ನಟಿ ಶರ್ಮಿಳಾ ಮಾಂಡ್ರೆ ಬಂಡವಾಳ ಹೂಡುತ್ತಿದ್ದು, ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದ ಮೊದಲ ಹಂತದ ಚಿತ್ರೀಕರಣ ಲಂಡನ್‌ನಲ್ಲಿ ಕೊರೊನಾ ಪೂರ್ವದಲ್ಲೇ ಚಿತ್ರತಂಡ ಮುಗಿಸಿಬಂದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.