ನಟ ನಾನಿ ತೆಲುಗಿನಲ್ಲಿ ಹೊಸ ಚಿತ್ರ ‘ಶ್ಯಾಮ್ ಸಿಂಗ ರಾಯ್’ಗೆ ಬಣ್ಣ ಹಚ್ಚುತ್ತಿದ್ದಾರೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಇದಕ್ಕೆ ಬಂಡವಾಳ ಹೂಡುತ್ತಿದೆ. ಇದನ್ನು ರಾಹುಲ್ ಸಂಕ್ರಿತ್ಯನ್ ನಿರ್ದೇಶಿಸುತ್ತಿದ್ದಾರೆ.
ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದಾರಂತೆ. ಈಗಾಗಲೇ, ಮೊದಲ ಹೀರೊಯಿನ್ ಆಗಿ ಸಾಯಿಪಲ್ಲವಿ ಹೆಸರು ಅಂತಿಮಗೊಂಡಿದೆ. ಎರಡನೇ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರನ್ನು ಸಿನಿಮಾಕ್ಕೆ ಕರೆತರಲು ಚಿತ್ರತಂಡ ಇಚ್ಛಿಸಿತ್ತಂತೆ. ಆದರೆ, ಸಾಯಿಪಲ್ಲವಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ರಶ್ಮಿಕಾ ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿ ತೆಲುಗು ಚಿತ್ರರಂಗದ ಅಂಗಳದಿಂದ ಹೊರಬಿದ್ದಿದೆ.
ಪ್ರಸ್ತುತ ರಶ್ಮಿಕಾ ಅವರು, ಸುಕುಮಾರ್ ನಿರ್ದೇಶಿಸುತ್ತಿರುವ ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ಸೊಂಟ ಬಳುಕಿಸಲು ಸಜ್ಜಾಗುತ್ತಿದ್ದಾರೆ. ಈ ನಡುವೆಯೇ ನಾನಿ ಸಿನಿಮಾದಲ್ಲಿ ನಟಿಸುವ ಅವಕಾಶ ಅವರನ್ನು ಹುಡುಕಿಕೊಂಡು ಬಂದಿತ್ತು. ಆಕೆ ಇದನ್ನು ತಿರಸ್ಕರಿಸಿರುವ ಹಿಂದಿನ ನಿರ್ದಿಷ್ಟ ಕಾರಣವೂ ಈಗ ಹೊರಬಿದ್ದಿದೆ.
‘ಶ್ಯಾಮ್ ಸಿಂಗ ರಾಯ್’ ಚಿತ್ರತಂಡವು ರಶ್ಮಿಕಾಗೆ ಸಿನಿಮಾದಲ್ಲಿ ನಟಿಸಲು ಕೋರಿರುವುದು ದಿಟ. ಆದರೆ, ಅದರಲ್ಲಿ ಆಕೆಯ ನಟನೆಗೆ ಹೆಚ್ಚಿನ ಅವಕಾಶವಿಲ್ಲವಂತೆ. ಮೂವರು ನಾಯಕಿಯರು ಇರುವ ಈ ಚಿತ್ರದಲ್ಲಿ ನಟಿಸಿದರೆ ತನ್ನ ಪಾತ್ರ ಪ್ರೇಕ್ಷಕರನ್ನು ಸೆಳೆಯುವುದಿಲ್ಲ ಎನ್ನುವುದು ಆಕೆಯ ಲೆಕ್ಕಾಚಾರ. ಜೊತೆಗೆ, ಸಾಯಿಪಲ್ಲವಿ ತನ್ನ ಅದ್ಭುತ ನಟನೆ ಮತ್ತು ಡಾನ್ಸ್ ಮೂಲಕ ಇಡೀ ಸಿನಿಮಾವನ್ನು ಆವರಿಸುವ ಸಾಧ್ಯತೆಯಿದೆ. ಇದರಿಂದ ಉಳಿದ ನಾಯಕಿಯರ ಪಾತ್ರಗಳಿಗೆ ಅಷ್ಟೊಂದು ಪ್ರಾಧಾನ್ಯ ಸಿಗುವುದಿಲ್ಲ. ಹಾಗಾಗಿಯೇ, ರಶ್ಮಿಕಾ ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಎಂಬುದು ಸಾಯಿಪಲ್ಲವಿ ಅಭಿಮಾನಿಗಳ ಲೆಕ್ಕಾಚಾರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.