ಸೋನಾಕ್ಷಿ ಸಿನ್ಹಾ
ಚಿತ್ರಕೃಪೆ: ಇನ್ಸ್ಟಾಗ್ರಾಂ
ಬೆಂಗಳೂರು: ರಾಮಾಯಣದ ಕುರಿತ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ತಮ್ಮ ತಂದೆ ಶತ್ರುಘ್ನ ಸಿನ್ಹಾ ಅವರನ್ನು ದೂಷಿಸಿರುವ 'ಶಕ್ತಿಮಾನ್' ಖ್ಯಾತಿಯ ನಟ ಮುಖೇಶ್ ಖನ್ನಾಗೆ ನಟಿ ಸೋನಾಕ್ಷಿ ಸಿನ್ಹಾ ತಿರುಗೇಟು ನೀಡಿದ್ದಾರೆ.
ಕೆಲ ವರ್ಷಗಳ ಹಿಂದೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೋನಾಕ್ಷಿ ಸಿನ್ಹಾ ಅವರು ರಾಮಾಯಣದ ಬಗ್ಗೆ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿರಲಿಲ್ಲ.
ಈ ಕುರಿತು ಇತ್ತೀಚೆಗೆ ಸಂದರ್ಶವೊಂದರಲ್ಲಿ ಮಾತನಾಡಿದ್ದ ಮುಖೇಶ್ ಖನ್ನಾ, ರಾಮಾಯಣದ ಬಗ್ಗೆ ಮಗಳಿಗೆ ಕಲಿಸದಿರುವುದು ಶತ್ರುಘ್ನ ಸಿನ್ಹಾ ಅವರ ತಪ್ಪು ಎಂದು ಹೇಳಿದ್ದರು.
ಈ ಬಗ್ಗೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಸೋನಾಕ್ಷಿ, ‘ನನ್ನ ಹಾಗೂ ನನ್ನ ಕುಟುಂಬದ ಹೆಸರಿನಲ್ಲಿ ಸುದ್ದಿಯಲ್ಲಿರಬೇಕೆನ್ನುವುದನ್ನು ಬಿಟ್ಟುಬಿಡಿ’ ಎಂದಿದ್ದಾರೆ.
‘ಹೌದು... ಮರೆಯುವುದು ಮಾನವ ಸಹಜ ಪ್ರವೃತ್ತಿಯಾಗಿದೆ. ಆ ದಿನ ‘ಯಾರು ಸಂಜೀವಿನಿ ತಂದರು?’ ಎಂಬ ಪ್ರಶ್ನೆಗೆ ಉತ್ತರವನ್ನು ಮರೆತಿದ್ದೆ. ಆದರೆ ಭಗವಾನ್ ರಾಮನು ಕಲಿಸಿದ ‘ಕ್ಷಮಿಸಿರಿ ಮತ್ತು ಮರೆಯಿರಿ’ ಎಂಬ ಎರಡು ಪಾಠಗಳನ್ನು ನೀವು ಮರೆತಿದ್ದೀರಿ’ ಎಂದು ಹೇಳಿದ್ದಾರೆ.
‘ರಾಮನಿಗೆ ಮಂಥರೆಯನ್ನು ಕ್ಷಮಿಸಲು ಸಾಧ್ಯವಾಯಿತು, ಕೈಕೇಯಿಯನ್ನು ಕ್ಷಮಿಸಲು ಸಾಧ್ಯವಾಯಿತು, ಮಹಾಯುದ್ಧದ ನಂತರ ರಾವಣನನ್ನು ಕ್ಷಮಿಸಲು ಸಾಧ್ಯವಾಯಿತು... ಅದಕ್ಕೆಲ್ಲಾ ಹೋಲಿಸಿದರೆ ನೀವು ಈ ಚಿಕ್ಕ ವಿಷಯವನ್ನು ಬಿಟ್ಟುಬಿಡಬಹುದಿತ್ತು’ ಎಂದಿದ್ದಾರೆ.
‘ಹಾಗಂತ ನಿಮ್ಮ ಕ್ಷಮೆಯನ್ನು ನಾನು ಕೋರುತ್ತಿಲ್ಲ. ಆದರೆ, ಇದೇ ವಿಚಾರವನ್ನು ಇಟ್ಟುಕೊಂಡು ನನ್ನ ಹಾಗೂ ನನ್ನ ಕುಟುಂಬದ ಹೆಸರಿನಲ್ಲಿ ಸುದ್ದಿಯಲ್ಲಿರಬೇಕೆನ್ನುವುದನ್ನು ಬಿಟ್ಟುಬಿಡಿ’ ಎಂದು ಹೇಳಿದ್ದಾರೆ.
‘ಮುಂದೆ ನನ್ನ ತಂದೆ ನನ್ನೊಳಗೆ ಯಾವ್ಯಾವ ಮೌಲ್ಯಗಳನ್ನು ತುಂಬಿದ್ದಾರೆ ಎಂದು ಮಾತನಾಡುವ ಮೊದಲು ಇದನ್ನು ನೆನಪಿಟ್ಟುಕೊಳ್ಳಿ.... ನನ್ನ ವಿರುದ್ಧ ನೀವು ಹೇಳಿಕೆ ನೀಡಿದ್ದರೂ ನಾನು ನಿಮಗೆ ಗೌರವಪೂರ್ವಕವಾಗಿಯೇ ಪ್ರತಿಕ್ರಿಯೆ ನೀಡಿದ್ದೇನೆ. ಇದೇ ನನ್ನ ತಂದೆ ನನಗೆ ಕಲಿಸಿರುವುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.