ADVERTISEMENT

ಹಿರಿ ನಟನಿಗೆ ಆಪತ್ಬಾಂಧವನಾದ ಸೋನು ಸೂದ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 10:07 IST
Last Updated 17 ಜೂನ್ 2020, 10:07 IST
ಲಾಕ್‌ಡೌನ್‌ನಿಂದ ಮುಂಬೈನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಲು ಬಸ್‌ ವ್ಯವಸ್ಥೆ ಮಾಡಿದ್ದ ನಟ ಸೋನು ಸೂದ್‌
ಲಾಕ್‌ಡೌನ್‌ನಿಂದ ಮುಂಬೈನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಲು ಬಸ್‌ ವ್ಯವಸ್ಥೆ ಮಾಡಿದ್ದ ನಟ ಸೋನು ಸೂದ್‌   

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಮುಂಬೈನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ವಿಮಾನ, ಬಸ್‌ಗಳಲ್ಲಿ ಅವರವರ ಊರಿಗೆ ಕಳಿಸಿಕೊಡುವ ಮೂಲಕ ಎಲ್ಲರ ಮನಸ್ಸು ಗೆದ್ದ ನಟ ಸೋನು ಸೂದ್‌, ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಬಾಲಿವುಡ್‌ನ ಹಿರಿಯ ಸಹನಟರೊಬ್ಬರಿಗೆ ನೆರವಾಗುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಸೋನು ನೆರವಾದ ಹಿರಿಯ ನಟನ ಹೆಸರು ಸುರೇಂದ್ರ ರಾಜನ್‌. ಇವರು ನಟ ಸಂಜಯ್ ದತ್ ಅಭಿನಯದ‌ ‘ಮುನ್ನಾಭಾಯಿ ಎಂ.ಬಿ.ಬಿ.ಎಸ್’‌ ಚಿತ್ರದಲ್ಲಿ ಆಸ್ಪತ್ರೆ ಸ್ವಚ್ಛಗೊಳಿಸುವ ಸಹಾಯಕನ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭುದೇವ ನಿರ್ದೇಶನದಆರ್‌...ರಾಜ್‌ಕುಮಾರ್ ಚಿತ್ರದಲ್ಲಿಸೋನು ಜತೆಯೂ ನಟಿಸಿದ್ದಾರೆ.

ರಾಜನ್ ಅವರು,ಮಾರ್ಚ್‌ನಲ್ಲಿ ವೆಬ್‌ಸರಣಿಯೊಂದರ ಶೂಟಿಂಗ್‌ಗಾಗಿ ಮಧ್ಯಪ್ರದೇಶದ ಸಾತ್ನಾದಿಂದ ಮುಂಬೈಗೆ ಬಂದಿದ್ದರು. ದಿಢೀರನೆ ಲಾಕ್‌ಡೌನ್ ಘೋಷಣೆಯಾದ ಕಾರಣ‌ ಮುಂಬೈನಲ್ಲಿ ಸಿಲುಕಿದ್ದರು. ಎರಡು–ಮೂರು ತಿಂಗಳಲ್ಲಿ ಕೈಲ್ಲಿದ್ದ ಹಣವೆಲ್ಲ ಖರ್ಚಾಗಿತ್ತು. ಈ ಸುದ್ದಿ ಯಾರಿಂದಲೋ ಸೋನು ಅವರ ಕಿವಿಗೆ ತಲುಪಿತು. ತಕ್ಷಣ ಅವರು ಈ ಹಿರಿಯ ನಟನ ನೆರವಿಗೆ ಧಾವಿಸಿದ್ದಾರೆ. ರಾಜನ್‌ ಅವರನ್ನು ಮರಳಿ ಅವರ ಊರಿಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ.

ADVERTISEMENT
ನಟ ಸುರೇಂದ್ರ ರಾಜನ್‌

‘ಲಾಕ್‌ಡೌನ್‌ ಸಮಯದಲ್ಲಿ ವಲಸೆ ಕಾರ್ಮಿಕರ ನೆರವಿಗೆ ನಿಂತ ಸೋನು ಅವರ ಮಾನವೀಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಯಾವುದೇ ಫಲಾಪೇಕ್ಷೆ ಇಲ್ಲದೆ ಜನರಿಗೆ ನರವಾಗಬೇಕು ಎಂಬ ಬಯಕೆ ಹೃದಯದಿಂದ ಬರಬೇಕು.ಈ ಸೇವಾ ಮನೋಭಾವ, ಗುಣ ಎಲ್ಲರಿಗೂ ಬರುವಂತದಲ್ಲ. ಕಷ್ಟದಲ್ಲಿರುವ ಜನರ ನೆರವಿಗೆ ನಿಂತಿರುವ ಸೋನು ಸೂದ್‌ ಮಾಡುತ್ತಿರುವ ಕೆಲಸ ನೋಡಿದರೆನಿಜಕ್ಕೂ ನನಗೆ ಆಶ್ಚರ್ಯವಾಗುತ್ತದೆ’ ಎಂದು ಸುರೇಂದ್ರ ರಾಜನ್ ಬೆನ್ನುತಟ್ಟಿದ್ದಾರೆ.

‘ಮುನ್ನಾಭಾಯಿ‌’ ಚಿತ್ರದ ನಂತರ ನಟ ಸಂಜಯ್ ದತ್‌ ಅವರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ರಾಜನ್‌, ಇಂದಿಗೂ ಅವರ‌ ಸಂಪರ್ಕದಲ್ಲಿದ್ದಾರೆ. ‘ಸಂಜಯ್‌ ದತ್‌ ಅವರನ್ನು ನನ್ನ ಮಗನೆಂದೇ ಭಾವಿಸಿದ್ದೇನೆ. ಬೇಕಾದರೆ ನಾನು ಯಾವ ಮುಜುಗರ ಇಲ್ಲದೆ ಸಂಜಯ್‌ ನೆರವು ಕೇಳಬಹುದಿತ್ತು. ಕೇಳಿದರೆ ಆತ ಖಂಡಿತ ಇಲ್ಲ ಎನ್ನುತ್ತಿರಲಿಲ್ಲ. ಯಾರೊಬ್ಬರ ಮೇಲೆ ಅವಲಂಬಿತನಾಗಲು ನಾನು ಬಯಸುವುದಿಲ್ಲ. ನನ್ನ ಶಿಷ್ಯನೊಬ್ಬ ₹45 ಸಾವಿರ ಕೊಟ್ಟಿದ್ದ. ಅದರಲ್ಲಿ ಮೂರು ತಿಂಗಳು ದೂಡಿದೆ. ಈಗ ಕೈ ಖಾಲಿಯಾಗಿದೆ. ಬಾಡಿಗೆ ನೀಡಲು ಕೂಡ ಹಣವಿಲ್ಲ’ ಎಂದು ರಾಜನ್‌ ಹೇಳಿದ್ದಾರೆ.

ಸ್ವಾಭಿಮಾನಿಯಾದ ರಾಜನ್‌ತಮ್ಮ ಕಷ್ಟವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಅದು ಹೇಗೊ ಈ ವಿಷಯ ಸೋನು ಕಿವಿ ತಲುಪಿದ್ದರಿಂದ, ಅವರು ನೆರವು ನೀಡಿ ಊರಿಗೆ ಕಳಿಸುವ ವ್ಯವಸ್ಥೆ ಮಾಡಿದರು.

‘ಸುರೇಂದ್ರ ರಾಜನ್ ಹಿರಿಯ ನಟರು. ನನ್ನ ತಂದೆ ಸಮಾನರು. ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅಂಥವರು ಕಷ್ಟದಲ್ಲಿರುವುದನ್ನು ಕೇಳಿ ಸುಮ್ಮನೆ ಕೂಡಲು ಸಾಧ್ಯವೆ’ ಎಂದು ಸೋನು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.