ADVERTISEMENT

ಬಾಲಿವುಡ್‌ನ ದಯನೀಯ ಪರಿಸ್ಥಿತಿಗೆ ಕಾರಣ ಹೇಳಿದ ರಾಜಮೌಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2022, 7:17 IST
Last Updated 15 ಡಿಸೆಂಬರ್ 2022, 7:17 IST
ರಾಜಮೌಳಿ
ರಾಜಮೌಳಿ   

ಬೆಂಗಳೂರು: ಇತ್ತೀಚೆಗೆ ಬಾಲಿವುಡ್‌ನ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಹಾಗೂ ಜನಮನ್ನಣೆ ಪಡೆಯಲು ವಿಫಲವಾಗುತ್ತಿರುವುದು ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಚರ್ಚೆಯನ್ನೇ ಹುಟ್ಟಿಹಾಕಿದೆ.

ಚಿತ್ರರಂಗದ ಅನೇಕ ಪರಿಣಿತರು ಬಾಲಿವುಡ್‌ನ ಇಂದಿನ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದೇ ಕಾರಣವನ್ನಿಟ್ಟುಕೊಂಡು ಬಾಲಿವುಡ್‌ ಅನ್ನು ಕಟುವಾಗಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನೊಂದೆಡೆ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳು ಒಂದರ ನಂತರಒಂದು ಬಾಕ್ಸ್‌ ಆಫೀಸ್‌ ಒಳಗೊಂಡಂತೆ ದೇಶ– ವಿದೇಶಗಳಲ್ಲಿ ಸದ್ದು ಮಾಡುತ್ತಿವೆ.

ಬಾಲಿವುಡ್‌ನ ಇಂದಿನ ದಯನೀಯ ಪರಿಸ್ಥಿತಿಗೆ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌.ಎಸ್. ರಾಜಮೌಳಿ ಅವರು ತಮ್ಮದೇ ಕಾರಣಗಳನ್ನು ನೀಡಿದ್ದಾರೆ.

ADVERTISEMENT

ಸಿನಿಮಾ ಕುರಿತು ಆಯೋಜಿಸಿದ್ದ ಖಾಸಗಿ ಚರ್ಚಾ ಸಮಾರಂಭದಲ್ಲಿ ಮಾತನಾಡಿರುವ ರಾಜಮೌಳಿ ಅವರು, ‘ನಟರಿಗೆ, ನಿರ್ದೇಶಕರಿಗೆ ಹಾಗೂ ತಂತ್ರಜ್ಞರಿಗೆ ವಿನಾಃಕಾರಣ ಕೋಟಿ ಕೋಟಿ ರುಪಾಯಿಗಳನ್ನು ನೀಡುತ್ತಿರುವುದು ಬಾಲಿವುಡ್‌ ಸಿನಿಮಾಗಳ ಸೋಲಿಗೆ ಕಾರಣ. ಇದರಿಂದ ಹಾಕಿದ ಬಂಡವಾಳ ವಾಪಸ್ ಪಡೆಯುವಲ್ಲಿ ನಿರ್ಮಾಪಕರು ಸೋಲುತ್ತಿದ್ದಾರೆ’ ಎಂದು ಹೇಳಿದ್ದಾರೆ.

ರಾಜಮೌಳಿಯವರ ಹೇಳಿಕೆಯನ್ನು ಔಟ್‌ಲುಕ್ ವೆಬ್‌ಸೈಟ್ ವರದಿ ಮಾಡಿದೆ.

‘ಚಿತ್ರಗಳ ಸೋಲು ಗೆಲುವಿನ ಬಗ್ಗೆ ನಾನು ವಿಮರ್ಶಿಸಲು ಹೋಗುವುದಿಲ್ಲ. ಆದರೆ, ಬಾಲಿವುಡ್‌ನಲ್ಲಿ ಪ್ರೇಕ್ಷಕರಿಗೆ ಏನು ಬೇಕು ಎಂದು ಅರ್ಥ ಮಾಡಿಕೊಳ್ಳದಿರುವುದು ಇಂದಿನ ‍ಪರಿಸ್ಥಿತಿಗೆ ಕಾರಣವಾಗಿದೆ’ ಎಂದು ಅವರು ಹೇಳಿರುವುದು ವರದಿಯಾಗಿದೆ.

ಈ ವರ್ಷ ಬಿಡುಗಡೆಯಾಗಿರುವ ಅಮಿರ್‌ ಖಾನ್ ಅವರ ಲಾಲ್‌ಸಿಂಗ್ ಚಡ್ಡಾ, ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್, ಪೃಥ್ವಿರಾಜ್ ಚೌಹಾಣ್, ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ, ಅಜಯ್‌ ದೇವಗನ್ ಅವರ ರನ್‌ವೇ ಸೇರಿದಂತೆ ಸಾಲು ಸಾಲು ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ಸೋಲು ಕಂಡಿವೆ. ಅಲ್ಲದೇ ಅನೇಕ ಚಿತ್ರಗಳು ಬಾಯ್ಕಾಟ್ ಬಿಸಿ ಎದುರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.