‘ಆರ್ಆರ್ಆರ್’ ಸಿನಿಮಾದ ಮುಖ್ಯಪಾತ್ರಗಳಲ್ಲಿ ನಟಿಸುತ್ತಿರುವ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜಾ ಅವರಿಗೆ ನಟರಿಗೆ ತಮ್ಮದೇ ಆದ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಅಭಿಮಾನಿಗಳ ಚರ್ಚೆ, ಜಗಳಗಳು ನಿರ್ದೇಶಕ ಎಸ್. ಎಸ್. ರಾಜಮೌಳಿ ಅವರಿಗೆ ತಲೆನೋವನ್ನು ತಂದಿಟ್ಟಿವೆ.
ಈ ಸಿನಿಮಾದ ಪೋಸ್ಟರ್ ಅಥವಾ ಮಾಹಿತಿ ಹೊರಬಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ನಟರ ನಡುವಿನ ಹೋಲಿಕೆ ಮಾಡುತ್ತಿದ್ದಾರೆ. ಇದು ಚಿತ್ರದ ಪ್ರಚಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಚಿತ್ರದ ಗಳಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೇ ಎಂದು ರಾಜಮೌಳಿ ಅವರಿಗೆ ಭಯ ಮೂಡಿಸಿದೆಯಂತೆ.
ರಾಜಮೌಳಿ ಅವರು ತಮ್ಮ ಪ್ರತಿ ಚಿತ್ರದ ಬಿಡುಗಡೆ ಸಮಯದಲ್ಲಿ ವಿಶೇಷವಾಗಿ ಪ್ರಚಾರ ಮಾಡುತ್ತಾರೆ. ಚಿತ್ರದ ಕುರಿತು ಘೋಷಣೆ ಮಾಡಿದ ದಿನದಿಂದ ಬಿಡುಗಡೆಯಾಗುವವರೆಗೂ ಆಸಕ್ತಿ, ಕುತೂಹಲ ಕೆರಳಿಸುವ ಪ್ರೋಮೊ, ಟೀಸರ್, ಪೋಸ್ಟರ್ಗಳ ಮೂಲಕ ಪ್ರಚಾರ ನಡೆಸುವುದು ಅವರ ಕ್ರಮ. ಚಿತ್ರದ ಬಿಡುಗಡೆ ದಿನದವರೆಗೂ ಕುತೂಹಲ ಹಾಗೂ ನಿರೀಕ್ಷೆಗಳನ್ನು ಅವರು ಉಳಿಸಿಕೊಂಡಿರುತ್ತಾರೆ.
ಆದರೆ ‘ಆರ್ಆರ್ಆರ್’ ಸಿನಿಮಾ ಬಗ್ಗೆ ಅವರು ಇಂತಹ ಕುತೂಹಲ ಹಾಗೂ ನಿರೀಕ್ಷೆಗಳನ್ನು ಮೂಡಿಸಿದ್ದಾದರೂ, ಚಿತ್ರದ ಬಗ್ಗೆ ಹೆಚ್ಚು ಪ್ರಚಾರ ಮಾಡಿಲ್ಲವಂತೆ. ಅನೇಕ ಸಂದರ್ಭದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜಾ ಅವರ ವಿಶೇಷ ದೃಶ್ಯಗಳ ಪೋಸ್ಟರ್ಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕಿದ್ದಾರಂತೆ. ಅದಕ್ಕೆ ಕಾರಣ ಆ ಇಬ್ಬರು ನಟರ ಅಭಿಮಾನಿ ವರ್ಗ ಎನ್ನಲಾಗಿದೆ.
ನಂದಮೂರಿ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬಗಳು, ತೆಲುಗು ಚಿತ್ರರಂಗದ ಎರಡು ಪ್ರಮುಖ ಕುಟುಂಬಗಳು. ಈ ಕುಟುಂಬಗಳ ಅಭಿಮಾನಿಗಳ ಮಧ್ಯೆ ಆಗಾಗ ಜಗಳ, ಸಂಘರ್ಷ ನಡೆಯುತ್ತಲೇ ಇರುತ್ತದೆ. ಈ ಎರಡು ಕುಟುಂಬಗಳ ಕುಡಿಗಳು ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್. ಇಬ್ಬರೂ ನಟರ ಅಭಿಮಾನಿಗಳು ತಮ್ಮ ನಟ ಮತ್ತೊಬ್ಬನಿಗಿಂತ ಚೆನ್ನಾಗಿ ಕಾಣಬೇಕೆಂದು ಬಯಸುತ್ತಾರೆ. ಈ ಅಭಿಮಾನಿಗಳನ್ನು ಹೇಗೆ ಸಮಾಧಾನ ಪಡಿಸುವುದು ಎಂಬುದೇ ರಾಜಮೌಳಿ ಅವರ ತಲೆನೋವು.
ಇದನ್ನೂ ಓದಿ: ರಾಜಮೌಳಿಯ ಸಿನಿಮಾದಲ್ಲಿ ನಟಿಸುವುದೇ ಅದೃಷ್ಟ: ಆಲಿಯಾ
ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಇಬ್ಬರು ನಟರ ನಡುವೆ ಹೋಲಿಕೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ತಮ್ಮ ಅಭಿಮಾನಿ ವರ್ಗವನ್ನು ಸಮಾಧಾನ ಮಾಡಿ, ನಿಯಂತ್ರಿಸಲು ಸ್ವತಃ ಇಬ್ಬರು ನಟರಿಗೆ ರಾಜಮೌಳಿ ಈಗಾಗಲೇ ಸೂಚನೆ ನೀಡಿದ್ದಾರೆ.ಈ ಚಿತ್ರವು 2020ರ ಜುಲೈ 30ರಂದು ತೆರೆ ಕಾಣಲಿದೆ. ಸದ್ಯ ಚಿತ್ರದ ಚಿತ್ರೀಕರಣವು ಬಲ್ಗೇರಿಯಾದಲ್ಲಿ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.