ADVERTISEMENT

ರವಿಚಂದ್ರನ್–ಉಪ್ಪಿ ನಟನೆಯ ಸಿನಿಮಾದ ಟೈಟಲ್‌ ಬದಲಾವಣೆ?

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 9:38 IST
Last Updated 25 ಆಗಸ್ಟ್ 2020, 9:38 IST
ಓಂ ಪ್ರಕಾಶ್ ರಾವ್‌, ಉಪೇಂದ್ರ ಮತ್ತು ಶಾನ್ವಿ ಶ್ರೀವಾಸ್ತವ
ಓಂ ಪ್ರಕಾಶ್ ರಾವ್‌, ಉಪೇಂದ್ರ ಮತ್ತು ಶಾನ್ವಿ ಶ್ರೀವಾಸ್ತವ   

‘ಕ್ರೇಜಿ ಸ್ಟಾರ್‌’ ರವಿಚಂದ್ರನ್‌ ಮತ್ತು ‘ಸೂಪರ್‌ ಸ್ಟಾರ್’ ಉಪೇಂದ್ರ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿರುವ ಚಿತ್ರಕ್ಕೆ ‘ರವಿ ಚಂದ್ರ’ ಎಂಬ ಟೈಟಲ್‌ ಇಡಲಾಗಿತ್ತು. ಎರಡು ವರ್ಷಗಳ ಹಿಂದೆಯೇ ಇದರ ಶೂಟಿಂಗ್‌ ಶುರುವಾಗಿತ್ತು. ಓಂ ಪ್ರಕಾಶ್‌ ರಾವ್‌ ನಿರ್ದೇಶನದ ಈ ಚಿತ್ರಕ್ಕೆ ಈಗ ‘ವೇದ ವ್ಯಾಸ’ ಎಂದು ಶೀರ್ಷಿಕೆಯನ್ನು ಇಡಲಾಗಿದೆಯಂತೆ.

ರೊಮ್ಯಾಂಟಿಕ್ ಆ್ಯಕ್ಷನ್‌ ಚಿತ್ರ ಇದಾಗಿದೆ. ತೆಲುಗಿನ ‘ಬಲುಪು’ ಚಿತ್ರದ ರಿಮೇಕ್‌ ಇದು. ಚಿತ್ರದಲ್ಲಿ ರವಿಚಂದ್ರನ್‌ ಮತ್ತು ಉಪೇಂದ್ರ ಸಹೋದರರಾಗಿ ಕಾಣಿಸಿಕೊಂಡಿದ್ದಾರೆ. ಶಾನ್ವಿ ಶ್ರೀವಾಸ್ತವ, ಅದಿತಿ ಆರ್ಯ ಮತ್ತು ನಮಿಕಾ ರತ್ನಾಕರ ಇದರಲ್ಲಿ ನಟಿಸಿದ್ದಾರೆ. ಇದಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಈ ಚಿತ್ರಕ್ಕೆ ಕನಕಪುರ ಶ್ರೀನಿವಾಸ್‌ ಬಂಡವಾಳ ಹೂಡಿದ್ದಾರೆ. ಸರ್ಕಾರದ ಮಾರ್ಗಸೂಚಿ ಅನ್ವಯಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಶೂಟಿಂಗ್‌ ನಡೆಯಲಿದೆ. ‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ಅಭಿಮನ್ಯುವಿನ ಪತ್ನಿ ಉತ್ತರೆಯಾಗಿ ನಟಿಸಿದ್ದ ಅದಿತಿ ಆರ್ಯ ಈ ಚಿತ್ರದ ಮೂಲಕ ಚಂದನವನ ಪ್ರವೇಶಿಸುತ್ತಿರುವ ಖುಷಿಯಲ್ಲಿದ್ದಾರೆ. ಪ್ರದೀಪ್ ರಾವತ್ ಖಳನಟನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೂ 16 ದಿನಗಳ ಶೂಟಿಂಗ್‌ ಬಾಕಿ ಇದೆಯಂತೆ.

ADVERTISEMENT

ಉಪೇಂದ್ರ ಅವರು, ಆರ್‌. ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಭೂಗತಲೋಕದ ಸುತ್ತ ಇದರ ಕಥೆ ಹೆಣೆಯಲಾಗಿದೆ. ಆಗಸ್ಟ್‌ನಿಂದಲೇ ‘ಕಬ್ಜ’ ಚಿತ್ರದ ಶೂಟಿಂಗ್‌ ನಡೆಸುವುದಾಗಿ ಚಂದ್ರು ಹೇಳಿದ್ದರು. ಆದರೆ, ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾದ ಪರಿಣಾಮ ಸೆಪ್ಟೆಂಬರ್‌ನಿಂದ ಈ ಸಿನಿಮಾದ ಶೂಟಿಂಗ್‌ ಆರಂಭಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.