ತಾರಾ ಅನುರಾಧಾ ಪ್ರಧಾನ ಭೂಮಿಕೆಯಲ್ಲಿರುವ ‘ಸಾವಿತ್ರಿ’ ಚಿತ್ರದಲ್ಲಿ ನಾಯಕರಾಗಿ ವಿಜಯ ರಾಘವೇಂದ್ರ ಬಣ್ಣ ಹಚ್ಚಲಿದ್ದಾರೆ.
‘ಉಯ್ಯಾಲೆ’ ಚಿತ್ರದ ನಿರ್ದೇಶಿಸಿದ್ದ ಎಸ್. ದಿನೇಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ನಿರ್ದೇಶಕರಿಗೆ ಎರಡನೇ ಚಿತ್ರ.
ವಿಜಯ್ ರಾಘವೇಂದ್ರ ಅವರ ವೃತ್ತಿ ಬದುಕಿನ 50ನೇ ಚಿತ್ರ ‘ಸೀತಾರಾಂ ಬಿನೋಯ್ ಕೇಸ್ ನಂಬರ್ 18’ಕ್ಕೆ ಇತ್ತೀಚೆಗಷ್ಟೇ ಸಹಿ ಮಾಡಿದ್ದರು. ಇದರ ಬೆನ್ನಲ್ಲೇ ‘ಸಾವಿತ್ರಿ’ಗೆ ಅವರು ನಾಯಕನಾಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್
ಚಿತ್ರದ ಚಿತ್ರೀಕರಣ ಇದೇ 19ರಿಂದ ಆರಂಭವಾಗಲಿದೆ. ಬೆಂಗಳೂರು ಸುತ್ತಮುತ್ತ 45 ದಿನಗಳ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಎರಡು ವರ್ಷಗಳ ಹಿಂದೆ ತಾರಾ ಅವರು, ಮಹಿಳೆಯರ ಶಿಕ್ಷಣ ಮತ್ತು ಸಮಾಜ ಸುಧಾರಣೆಗಾಗಿ ಜೀವನ ಮುಡುಪಾಗಿಟ್ಟ ಸಾವಿತ್ರಿಬಾಯಿ ಪುಲೆ ಅವರ ಜೀವನಾಧಾರಿತ ಕಥೆಯ ‘ಸಾವಿತ್ರಿಬಾಯಿ ಪುಲೆ’ ಚಿತ್ರದಲ್ಲಿ ಸಾವಿತ್ರಿಬಾಯಿ ಪುಲೆ ಪಾತ್ರದಲ್ಲಿ ನಟಿಸಿದ್ದರು. ಪತ್ರಕರ್ತ ಸರಜೂ ಕಾಟ್ಕರ್ ಬರೆದ ‘ಸಾವಿತ್ರಿ ಬಾಯಿ ಪುಲೆ’ ಕಾದಂಬರಿಯನ್ನೇ ನಿರ್ದೇಶಕ ವಿಶಾಲರಾಜ್ ತೆರೆಮೇಲೆ ತಂದಿದ್ದರು.
ಹೃದಯ ಶಿವ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಗೀತರಚನೆ ಹಾಗೂ ಸಂಭಾಷಣೆ ಕೂಡ ಹೃದಯ ಶಿವ ಅವರದೇ. ಇಷ್ಟು ದಿನ ಗೀತ ರಚನೆಕಾರರಾಗಿದ್ದ ಹೃದಯ ಶಿವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.
ಪ್ರಕಾಶ್ ಬೆಳವಾಡಿ, ಸಂಜು ಬಸಯ್ಯ(ಕಾಮಿಡಿ ಕಿಲಾಡಿಗಳು), ಬೇಬಿ ಲೈಲಾ, ಪ್ರಮೋದ್ ತಾರಾಬಳಗದಲ್ಲಿದ್ದಾರೆ.
ಪಿ.ಎನ್.ಪಿ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಾಫ್ಟ್ವೇರ್ ಉದ್ಯೋಗಿ ಪ್ರಶಾಂತ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.