ADVERTISEMENT

ಉದ್ಧವ್ ಪರ ಮಾತನಾಡಿದ ದಿಯಾ ಮಿರ್ಜಾಗೆ ವಿವೇಕ್‌ ಅಗ್ನಿಹೋತ್ರಿ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜುಲೈ 2022, 12:36 IST
Last Updated 1 ಜುಲೈ 2022, 12:36 IST
ದಿಯಾ ಮಿರ್ಜಾ
ದಿಯಾ ಮಿರ್ಜಾ   

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರ ಮಾತನಾಡಿರುವ ನಟಿ ದಿಯಾ ಮಿರ್ಜಾ ಅವರಿಗೆ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.

ಶಿವಸೇನಾ ಪಕ್ಷದಲ್ಲಿ ಉಂಟಾದ ಬಿರುಕಿನಿಂದಾಗಿ ಬಹುಮತ ಗಳಿಸುವಲ್ಲಿ ವಿಫಲರಾಗಿದ್ದ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಈ ನಡುವೆ ಸಿಎಂ ಅವಧಿಯಲ್ಲಿ ಉದ್ಧವ್ ಠಾಕ್ರೆ ಸಲ್ಲಿಸಿದ್ದ ಸೇವೆಯನ್ನು ದಿಯಾ ಮಿರ್ಜಾ ಉಲ್ಲೇಖಿಸಿದ್ದರು. 'ನೀವು ಜನರು ಹಾಗೂ ಈ ಗ್ರಹದ ಬಗ್ಗೆ ಕಾಳಜಿ ವಹಿಸಿದ್ದೀರಿ. ಇದಕ್ಕಾಗಿ ನನ್ನ ಕೃತಜ್ಞತೆ ಹಾಗೂ ಗೌರವವನ್ನು ತಿಳಿಸುತ್ತೇನೆ. ರಾಷ್ಟ್ರ ಸೇವೆ ಸಲ್ಲಿಸಲು ಇನ್ನೂ ಹಲವು ಅವಕಾಶಗಳು ಸಿಗಲಿದೆ' ಎಂದು ಟ್ವೀಟಿಸಿದ್ದರು.

ತಮ್ಮ ಟ್ವೀಟ್ ಅನ್ನು ಉದ್ಧವ್ ಠಾಕ್ರೆ ಜೊತೆಗೆ ಆದಿತ್ಯ ಠಾಕ್ರೆ ಅವರಿಗೂ ದಿಯಾ ಮಿರ್ಜಾ ಟ್ಯಾಗ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ವಿವೇಕ್ ಅಗ್ನಿಹೋತ್ರಿ 'ಯಾವ ಗ್ರಹ ? ಬಾಲಿವುಡ್ ಗ್ರಹ ?' ಎಂದು ವ್ಯಂಗ್ಯವಾಡಿದ್ದಾರೆ.

ಏತನ್ಮಧ್ಯೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ನಟಿ ಕಂಗನಾ ರನೌತ್‌ ಅಭಿನಂದನೆ ಸಲ್ಲಿಸಿದ್ದಾರೆ.

'ಎಂತಹ ಸ್ಫೂರ್ತಿದಾಯಕ ಸ್ಟೋರಿ, ಜೀವನೋಪಾಯಕ್ಕಾಗಿ ಆಟೋ-ರಿಕ್ಷಾ ಓಡಿಸುವುದರಿಂದ ಹಿಡಿದು ದೇಶದ ಶಕ್ತಿಶಾಲಿ ವ್ಯಕ್ತಿಯಾಗುವವರೆಗೆ...ಅಭಿನಂದನೆಗಳು ಸರ್' ಎಂದು ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.